ಮುಂಬೈಯ ಕರ್ನಾಟಕ ಮಲ್ಲ ಪತ್ರಿಕೆ ಸಂಪಾದಕ ಚಂದ್ರಶೇಖರ ಪಾಲೆತ್ತಡಿಗೆ ಮೊಹರೆ ಹಣಮಂತ ರಾವ್ ಪತ್ರಿಕೋದ್ಯಮ ಪ್ರಶಸ್ತಿ

0

ಪುತ್ತೂರು: ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆದಿರುವ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಬಜತ್ತೂರು ನಿವಾಸಿ ಚಂದ್ರಶೇಖರ ಪಾಲೆತ್ತಡಿ ಅವರಿಗೆ ಕರ್ನಾಟಕ ಸರಕಾರ ಪ್ರತಿಷ್ಠಿತ ಮೊಹರೆ ಹಣಮಂತ ರಾವ್ ಪ್ರಶಸ್ತಿ ಘೋಷಿಸಿದೆ. ಅಖಂಡ ಮುಂಬೈ ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿರುವ ಅಪಾರವಾದ ಸಾಧನೆಗೆ ಕರ್ನಾಟಕ ಸರಕಾರ ಪ್ರತಿಷ್ಠಿತ ಮೊಹರೆ ಹಣಮಂತ ರಾವ್ ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿದೆ.


ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ನೂತನ ಆಯಾಮ ನೀಡಿ ಕನ್ನಡ ಸಂಸ್ಕೃತಿಯ ಸಂವರ್ಧನೆಗೆ ಚಂದ್ರಶೇಖರ ಪಾಲೆತ್ತಡಿ ಶ್ರಮಿಸುತ್ತಾ ಬಂದಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶ ಮುಂಬೈ ಮಹಾನಗರ. ಇಂದಿಗೂ ಮಾಯಾನಗರಿ ಮುಂಬೈಯಲ್ಲಿ ಸುಮಾರು ಇಪ್ಪತ್ತು ಲಕ್ಷ ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿರುವುದು ಗಮನೀಯ ಅಂಶ. ಮುಂಬೈನ ಜನಪ್ರಿಯ ಕನ್ನಡ ದೈನಿಕ ಕರ್ನಾಟಕ ಮಲ್ಲದ ಸಂಪಾದಕರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರು ಮುಂಬೈನ ಗಣ್ಯವ್ಯಕ್ತಿಗಳಲ್ಲಿ ಒಬ್ಬರು. ಈ ಮಾಯಾನಗರಿಯಲ್ಲಿ ಕನ್ನಡ ಹಾಗೂ ತುಳು ಸಾಹಿತ್ಯ ಸಂಸ್ಕೃತಿಯ ಏಳಿಗೆಗೆ ಕರ್ನಾಟಕ ಮಲ್ಲ ಪತ್ರಿಕೆ ಮಹತ್ವದ ಯೋಗದಾನ ನೀಡಿದೆ. ಕರ್ನಾಟಕ ಮಲ್ಲ ಮುಂಬೈ ಕನ್ನಡಿಗರ ವಿಶ್ವಾಸಕ್ಕೆ ಪಾತ್ರವಾದ ದೈನಿಕ. ಇದರ ರೂವಾರಿ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ. ಚಂದ್ರಶೇಖರ ಪಾಲೆತ್ತಾಡಿ ಅವರು ಲೇಖಕರಾಗಿ, ಚಿಂತಕರಾಗಿ ಸಹ ಹೆಸರು ಮಾಡಿದ್ದಾರೆ. ‘ನಾನು, ನನ್ನ ಸ್ವಗತ’ ಪಾಲೆತ್ತಾಡಿ ಅವರ ಕಿರು ಆತ್ಮಕಥನ. ಇದನ್ನು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಪ್ರಕಟಿಸಿದೆ. ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಕಳೆದ ಮೂರು ದಶಕಗಳಿಂದ ಅವರು ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಲೇ ‘ಇದು ಭಾರತ’ ಎಂಬ ಅಂಕಣವನ್ನು ಸತತವಾಗಿ ಬರೆಯುತ್ತಾ ಬಂದಿದ್ದಾರೆ. ‘ನಾನು, ನನ್ನ ಸ್ವಗತ’ ಕೃತಿಯಲ್ಲಿ ಪಾಲೆತ್ತಾಡಿ ಅವರ ಜೀವನ ಸಾಧನೆಯ ದಾಖಲಾತಿ ಸಂಕ್ಷಿಪ್ತವಾಗಿ ಪಡಿ ಮೂಡಿದೆ.


ಪತ್ರಿಕೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಪತ್ರಿಕೆಯೊಂದು ನಮ್ಮ ದೈನಂದಿನ ಬದುಕಿನ ಕನ್ನಡಿ ಇದ್ದಂತೆ. ಪತ್ರಿಕೋದ್ಯಮವನ್ನು ದೇಶದ ನಾಲ್ಕನೆಯ ಅಂಗ ಹಾಗೂ ಆಸ್ತಿ ಎಂದೇ ಪರಿಗಣಿಸಲಾಗುತ್ತದೆ. ಗಾಂಧಿ, ಅಂಬೇಡ್ಕರ್, ಲೋಹಿಯಾ ಮೊದಲಾದವರು ಪತ್ರಿಕೋದ್ಯಮವನ್ನು ಹೋರಾಟಕ್ಕೆ ಬಳಸಿಕೊಂಡದ್ದು ಈಗ ಇತಿಹಾಸ. ಸತ್ಯ, ನಿಷ್ಠೆ, ಪ್ರಾಮಾಣಿಕತೆ ಇವತ್ತು ಪತ್ರಿಕೋದ್ಯಮದಲ್ಲಿ ಕಾಣೆಯಾಗುತ್ತಿದೆ. ಪತ್ರಿಕೋದ್ಯಮ ನೋಬಲ್ ಪ್ರೊಫೆಶನ್ ಎಂಬ ಮನೋಭಾವ ಇಂದು ನಶಿಸುತ್ತಿದೆ. ಏನೂ ಅರ್ಹತೆ ಇಲ್ಲದವರು, ನಾಲಾಯಕರು, ಭ್ರಷ್ಟ ರಾಜಕೀಯ ನಾಯಕರು ಪತ್ರಿಕೆಗಳ ಮಾಲಕರಾಗುತ್ತಿರುವುದು ಕಳವಳಕಾರಿ ಸಂಗತಿ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವುದೆಂದರೆ ಕೆಂಡದ ಮೇಲೆ ನಡೆಯುವುದೆಂದೇ ಅರ್ಥ. ಪತ್ರಿಕೋದ್ಯಮದ ಮೂಲ ಉದ್ದೇಶ ಲೋಕಕಲ್ಯಾಣವಾಗಿದ್ದು ಓದುಗರಲ್ಲಿ, ಸಹೃದಯರಲ್ಲಿ ಜಾಗೃತಿ, ಎಚ್ಚರ, ಸಾಂಸ್ಕೃತಿಕ ಅರಿವು, ಕಾಳಜಿ, ರಾಜಕೀಯ ಚಿಂತನೆ, ವಿವೇಕವನ್ನು ಮೂಡಿಸುವುದೇ ಆಗಿದೆ. ಈ ಕಾಯಕವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಾ ಬಂದ ಅಪರೂಪದ ದಕ್ಷ ಪತ್ರಕರ್ತ ಪಾಲೆತ್ತಾಡಿ.


ಕಳೆದ ಮೂರು ದಶಕಗಳಲ್ಲಿ ಮುಂಬೈಯಲ್ಲಿ ಪತ್ರಿಕೆಯ ಮೂಲಕ ಕನ್ನಡಕ್ಕಾಗಿ ದುಡಿದ, ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರೂ ಒಬ್ಬರು. ಪಾಲೆತ್ತಾಡಿ ಅವರ ನಿರಂತರ ಪರಿಶ್ರಮ, ಪ್ರಯತ್ನಗಳಿಂದ ಕರ್ನಾಟಕ ಮಲ್ಲ ಇಂದಿಗೂ ಉಳಿದು ಬೆಳೆದು ಸಮೃದ್ಧ ಪತ್ರಿಕೆಯಾಗಿ ಮುಂಬೈ ಮಹಾನಗರದಲ್ಲಿ ಕಂಗೊಳಿಸುತ್ತಿದೆ ಎಂಬುದು ಅಭಿಮಾನದ ಸಂಗತಿ. ಕಳೆದ 33 ವರ್ಷಗಳಿಂದ ಮುಂಬೈ ಕನ್ನಡಿಗರ ಮನಸೂರೆಗೊಂಡ ಕರ್ನಾಟಕ ಮಲ್ಲದಲ್ಲಿ ಪಾಲೆತ್ತಾಡಿ ಅವರು ಬರೆದ ಸಂಪಾದಕೀಯಗಳು, ಅಂಕಣ ಬರೆಹಗಳ ಸಂಖ್ಯೆ ಹತ್ತಿರ ಹತ್ತಿರ ಹತ್ತು ಸಾವಿರ. ಅವರ ಬರವಣಿಗೆಗೂ ವ್ಯಕ್ತಿತ್ವಕ್ಕೂ ಅವಿನಾಭಾವ ಸಂಬಂಧವಿದೆ. ಪತ್ರಿಕೋದ್ಯಮಿ ಎಂದ ತಕ್ಷಣ ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿರುವ ವ್ಯಕ್ತಿ ಎಂದೇ ಭಾವಿಸಲಾಗುತ್ತಿದೆ. ಆದರೆ ಹೆಚ್ಚಿನ ಪತ್ರಿಕೆಗಳ ಸಂಪಾದಕರು, ಉಪಸಂಪಾದಕರು ನಾಲ್ಕು ಗೋಡೆಗಳ ನಡುವೆ ಆಸನಕ್ಕೆ ಅಂಟಿಕೊಂಡೇ ಇರುವುದು ವಾಡಿಕೆ.ಆದರೆ ಅಪಾರ ಜನಪ್ರಿಯತೆಯನ್ನು ಸಂಪಾದಿಸಿರುವ ಪಾಲೆತ್ತಾಡಿ ತುಳು ಕನ್ನಡಿಗರು ಕರೆದಲ್ಲೆಲ್ಲ ಹೋಗಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾಲೆತ್ತಾಡಿ ಒಬ್ಬ ಸೂಕ್ಷ್ಮಜ್ಞ, ವಿಚಾರವಾದಿ, ಪ್ರಗತಿಪರ ಚಿಂತಕ, ಅಪರೂಪದ ಪತ್ರಕರ್ತ. ಅವರ ಮೇಲೆ ಮುಂಬೈ ಕನ್ನಡಿಗರು ಅಪಾರವಾದ ಆದರ ಅಭಿಮಾನ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ.


ಚಂದ್ರಶೇಖರ ಪಾಲೆತ್ತಾಡಿ ಅವರದು ಹೋರಾಟದ ಬದುಕು. ಅನ್ಯಾಯ, ಅಸಮಾನತೆಯ ಬಗೆಗೆ ಅವರು ಸದಾ ಗುಡುಗುತ್ತಾ ಬಂದವರು. ಅವರು ಖಂಡಿತವಾದಿ, ದಾಕ್ಷಿಣ್ಯಪರನಲ್ಲ. ಧರ್ಮಾಂಧತೆ, ಜಾತ್ಯಂಧತೆ, ಪಕ್ಷಾಂಧತೆ ಈ ಮೂರು ಅಂಧತೆಯಿಂದ ಅವರು ಮಾರುದ್ದ ದೂರ. ಸತ್ಯನಿಷ್ಠೆ, ನಿರ್ದಾಕ್ಷಿಣ್ಯ ಧೋರಣೆಯನ್ನು ಮೈಗೂಡಿಸಿಕೊಂಡ ಅವರು ಧೀರ ಪತ್ರಿಕೋದ್ಯಮಿ. ಚಂದ್ರಶೇಖರ ಪಾಲೆತ್ತಾಡಿ ಅವರು ಸ್ವಭಾವತಃ ನಿಗರ್ವಿ, ಅವರ ನಡೆ ನುಡಿ ಸ್ವಚ್ಚ. ಎಲ್ಲರ ಆಪ್ತಮಿತ್ರನೂ ಹೌದು. ಸಾಹಿತ್ಯ ಸೇವೆಯಲ್ಲಿ ಪತ್ರಿಕೆಗಳ ಪಾತ್ರ ಗಮನಾರ್ಹವಾದುದು. ಪತ್ರಿಕೆಗಳ ಮುಖಾಂತರ ಬರಹಗಾರರು ಹುಟ್ಟಿಕೊಳ್ಳುತ್ತಾರೆ,ಬರಹಗಳು ಹುಟ್ಟಿಕೊಳ್ಳುತ್ತವೆ. ಕರ್ನಾಟಕ ಮಲ್ಲ ದೈನಿಕದ ಮೂಲಕ ಅನೇಕ ಬರಹಗಾರರು ಪ್ರಸಿದ್ಧರಾಗಿದ್ದಾರೆ. ಅಲ್ಲಿನ ಅಂಕಣಗಳಿಂದಾಗಿ ಅನೇಕ ಬರಹಗಾರರು ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಮಲ್ಲದಿಂದಾಗಿ ಮುಂಬೈ ಮಹಾನಗರದಲ್ಲಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡಿದ್ದು ಸತ್ಯ. ಕರ್ನಾಟಕ ಮಲ್ಲದ ಮೂಲಕ ಪಾಲೆತ್ತಾಡಿ ಅವರು ಸಮಸ್ತ ಕನ್ನಡಿಗರ ಆಗುಹೋಗುಗಳಿಗೆ ಸ್ಫೂರ್ತಿಯಾಗಿದ್ದಾರೆ.


ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ನೂರ ಐವತ್ತು ವರ್ಷಗಳ ಗಟ್ಟಿಯಾದ ಇತಿಹಾಸವಿದೆ. ಕರ್ಕಿ ವೆಂಕಟರಮಣ ಶಾಸ್ತ್ರಿ ಅವರು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಪತ್ರಿಕೆಗಳನ್ನು ಬಳಸಿಕೊಂಡದ್ದು ಈಗ ಇತಿಹಾಸ. ಕನ್ನಡದ ಮೊದಲ ಸಾಮಾಜಿಕ ನಾಟಕ (1887) ಬೆಳಕು ಕಂಡದ್ದು ಮುಂಬೈನಲ್ಲೇ. ಅದರ ಕರ್ತೃ ಅವರೇ ಎಂಬುದು ಗಮನೀಯ ಅಂಶ. ಶ್ಯಾಮರಾವ್ ವಿಠಲ ಕೈಕಿಣಿ, ಹಟ್ಟಿಯಂಗಡಿ ನಾರಾಯಣರಾಯ, ಎಂ. ವಿ. ಕಾಮತ್, ವ್ಯಾಸರಾಯ ಬಲ್ಲಾಳ, ರಾಮಚಂದ್ರ ಉಚ್ಚಿಲ್, ಡಿ.ಕೆ. ಮೆಂಡನ್, ಕೆ. ಟಿ. ವೇಣುಗೋಪಾಲ್ ಹೀಗೆ ನೂರಾರು ಮಂದಿ ಮುಂಬೈ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಮುಂಬೈ ಸಾಹಿತ್ಯ ವಲಯವಾಗಿ ರೂಪುಗೊಳ್ಳಲು ಇಲ್ಲಿನ ಪತ್ರಿಕೋದ್ಯಮವೂ ಕಾರಣವಾಗಿದೆ. ಕರ್ನಾಟಕ ಮಲ್ಲ ಈ ಸುದೀರ್ಘ ಪರಂಪರೆಯನ್ನು ಸಶಕ್ತವಾಗಿ ಪೋಷಿಸಿಕೊಂಡು ಬಂದಿದೆ. ಅಶೋಕ್ ಸುವರ್ಣ, ಡಾ. ಜೀವಿ ಕುಲಕರ್ಣಿ, ರವಿ ಅಂಚನ್, ಶ್ರೀನಿವಾಸ ಜೋಕಟ್ಟೆ, ಡಾ. ಜಿ. ಡಿ. ಜೋಶಿ, ಕೊಲ್ಯಾರು ರಾಜು ಶೆಟ್ಟಿ, ಕೋಡು ಭೋಜ ಶೆಟ್ಟಿ, ರತ್ನಾಕರ ಶೆಟ್ಟಿ, ಶ್ರೀಧರ ಉಚ್ಚಿಲ್ ಮೊದಲಾದವರು ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಬರೆದ ಅಂಕಣ ಬರೆಹಗಳು ಕೃತಿರೂಪದಲ್ಲಿ ಬೆಳಕು ಕಂಡಿವೆ. ಇಲ್ಲಿನ ಎಲ್ಲ ಲೇಖಕರಿಗೆ ಪ್ರೋತ್ಸಾಹ ನೀಡುತ್ತಾ ಬಂದವರು ಚಂದ್ರಶೇಖರ ಪಾಲೆತ್ತಾಡಿ. ಪಾಲೆತ್ತಾಡಿ ಅವರು ಕಳೆದ ಮೂವತ್ತಮೂರು ವರ್ಷ ಗಳಿಂದ ಮುಂಬೈ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲರಾಗಿದ್ದಾರೆ. ಈಗ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕರ್ನಾಟಕ ಮಲ್ಲದ ಸಂಪಾದಕರಾಗಿ ಅದರ ಘನತೆಯನ್ನು ಹೆಚ್ಚಿಸಿದ ಕೀರ್ತಿ ಪಾಲೆತ್ತಾಡಿ ಅವರಿಗೆ ಸಲ್ಲುತ್ತದೆ.


ಪಾಲೆತ್ತಾಡಿ ಅವರದು ಹೋರಾಟದ ಬದುಕು. ಅವರು ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ಅವರು ಎಡಪಂಥೀಯ ನಿಲುವನ್ನು ಮೈಗೂಡಿಸಿಕೊಂಡಿದ್ದರೂ ಅವರದು ಸಮನ್ವಯ ದೃಷ್ಟಿ, ಸರ್ವೋದಯ ದೃಷ್ಟಿ. ಹೀಗಾಗಿ ಅವರು ಎಲ್ಲರೊಂದಿಗೆ ಪರಸ್ಪರ ಸಂಬಂಧ, ಸಂಪರ್ಕ ಸಮನ್ವಯವನ್ನಿಟ್ಟುಕೊಂಡಿದ್ದಾರೆ. ಅವರದು ಚಿಕಿತ್ಸಕ ಮನೋಧರ್ಮ. ತಮ್ಮದೇ ಆದ ಘನತೆ, ಗಾಂಭೀರ ಮಹತ್ತುಗಳಿಂದ ಅಪಾರ ಓದುಗರನ್ನು ಅವರು ಗಳಿಸಿಕೊಂಡಿದ್ದಾರೆ. ಕನ್ನಡ ಅಂಕಣ ಬರಹಗಾರರಲ್ಲಿ ಕರ್ನಾಟಕ ಮಲ್ಲದ ಸಂಪಾದಕ ಪಾಲೆತ್ತಾಡಿ ಅವರಿಗೆ ಉನ್ನತ ಸ್ಥಾನವೊಂದು ಯಾವತ್ತೂ ಮೀಸಲಾಗಿರುತ್ತದೆ. ದಿನಪತ್ರಿಕೆಯೊಂದಕ್ಕೆ ಸುಮಾರು ಮೂವತ್ತಮೂರು ವರ್ಷ ಗಳಿಂದ ಸಂಪಾದಕೀಯ, ಅಂಕಣಗಳನ್ನು ಬರೆಯುತ್ತಾ ಬಂದ ಎಷ್ಟು ಮಂದಿ ಸಂಪಾದಕರಿದ್ದಾರೋ ಗೊತ್ತಿಲ್ಲ. ಮಂಗಳೂರು ಮಿತ್ರ, ಹೊಸದಿಗಂತ, ಉದಯದೀಪ, ಕರ್ನಾಟಕ ಮಲ್ಲ ಹೀಗೆ ನಾನಾ ಪತ್ರಿಕೆಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ದುಡಿದ ಅನುಭವಿ ಪತ್ರಕರ್ತ ಪಾಲೆತ್ತಾಡಿ. ಸಾಮಾಜಿಕ ಪ್ರಜ್ಞೆ ಅವರ ಮಾತು, ಕೃತಿ, ನೋಟ, ನಿಲುವುಗಳಲ್ಲಿ ಎದ್ದು ಕಾಣುವ ಅಂಶ.


ಕರ್ನಾಟಕ ಮಲ್ಲ ಹಾಗೂ ಅದರ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರ ಸಾಧನೆಯನ್ನು ಖ್ಯಾತ ಪತ್ರಿಕೋದ್ಯಮಿ, ಸಾಹಿತಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಹೀಗೆ ಕಂಡಿದ್ದಾರೆ. ಮುಂಬಯಿ ಮೊದಲಿನಿಂದಲೂ ಕನ್ನಡದ ಭದ್ರ ಕೋಟೆಯೇ ಆಗಿತ್ತು. ಮುಂಬಯಿ ನಗರದ ಇತಿಹಾಸವನ್ನು ಕೆದಕಿದರೆ ಅಲ್ಲಿ ನಮಗೆ ಕಾಣ ಸಿಗುವುದು ಕನ್ನಡಿಗರ ಸಾಂಸ್ಕೃತಿಕ ಇತಿಹಾಸವೇ. ಇಂದಿಗೂ ಮುಂಬಯಿಯಲ್ಲಿ ಕನ್ನಡ ತಲೆ ಎತ್ತಿ ನಿಂತಿದೆ. ಮುಂಬಯಿ ಮಹಾನಗರದ ಕನ್ನಡಿಗರು ಮಹಾನ್ ಸಾಧಕರು. ನಾನು ಮತ್ತೆ ಮತ್ತೆ ಮುಂಬಯಿಗೆ ಬಂದು ಹೋಗುತ್ತಿದ್ದೇನೆ. ಹೀಗೆ ಬಂದಾಗಲೆಲ್ಲ ಕರ್ನಾಟಕ ಮಲ್ಲ ಪತ್ರಿಕೆಯನ್ನು ತಪ್ಪದೇ ಓದುತ್ತಾ ಬಂದಿದ್ದೇನೆ. ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರ ಸಂಪಾದಕೀಯಗಳು ನನಗೆ ತುಂಬಾ ಹಿಡಿಸಿವೆ. ಅವರ ನೇರ, ಸರಳ ಶೈಲಿ ವಾಚನೀಯವಾಗಿದೆ ಎಂದು ಪಾಟೀಲ ಪುಟ್ಟಪ್ಪ ಬಣ್ಣಿಸಿದ್ದಾರೆ.


ಪತ್ರಿಕೆ ಒಂದು ಸಶಕ್ತ ಮಾಧ್ಯಮ. ಮುಂಬಯಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಉನ್ನತಿಗೆ ಕರ್ನಾಟಕ ಮಲ್ಲ ಮಹತ್ವದ ಕೊಡುಗೆಯನ್ನು ನೀಡಿದೆ. ಹೊರನಾಡ ಕನ್ನಡಿಗರ ಸಾಧನೆಯನ್ನು ಕುರಿತು ಮಾತನಾಡುವಾಗ ಕರ್ನಾಟಕ ಮಲ್ಲ ಹಾಗೂ ಅದರ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರ ಸಾಧನೆಯನ್ನು ನಾವು ಪ್ರಸ್ತಾಪಿಸಲೇಬೇಕು’.
ದೇಶದ ಪತ್ರಿಕೋದ್ಯಮದ ಒಳಹೊರಗನ್ನು ಚೆನ್ನಾಗಿ ಬಲ್ಲ ಪಾಲೆತ್ತಾಡಿ ಅವರು ಪ್ರಬುದ್ಧ ಚಿಂತಕರೂ ರಾಜಕೀಯ ವಿಶ್ಲೇಷಕರೂ ಆಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾದ ಸಾಧನೆಗೈದವರಿಗೆ ಕೊಡಮಾಡುವ ಪ್ರತಿಷ್ಠಿತ ‘ವಡ್ಡರ್ಸೆ ರಘುರಾಮ ಶೆಟ್ಟಿ’ ಪ್ರಶಸ್ತಿಗೂ ಅವರು ಪಾತ್ರರಾಗಿದ್ದರು. ‘ಕರ್ನಾಟಕ ರಾಜ್ಯೋತ್ಸವ’ಪ್ರಶಸ್ತಿ ಪಾಲೆತ್ತಾಡಿ ಅವರಿಗೆ ಸಂದಿರುವುದು ನಿಷ್ಠಾವಂತ ಪತ್ರಿಕೋದ್ಯಮಿಯೊಬ್ಬರಿಗೆ ಸಂದ ಅರ್ಹ ಗೌರವ ಎಂದೇ ಹೇಳಬಹುದಾಗಿದೆ. ಯಾವುದೇ ಪ್ರಶಸ್ತಿಗಾಗಿ ಅವರು ಯಾವುದೇ ಲಾಬಿ ಮಾಡಿಲ್ಲ, ಅತ್ತು ಕರೆದು ವಶೀಲಿ ಹಚ್ಚಿಲ್ಲ. ಸಂದ ಎಲ್ಲ ಪುರಸ್ಕಾರಗಳು ಅವರ ಸಾಧನೆಯನ್ನು ಅರಸಿಕೊಂಡು ಬಂದಿವೆ ಎಂಬುದು ಹೇಳಲೇಬೇಕಾದ ಸಂಗತಿ. ನಾಡಿನ ಪತ್ರಕರ್ತರಿಗೆ ಪಾಲೆತ್ತಾಡಿ ಅವರು ಎಲ್ಲ ದೃಷ್ಟಿಯಿಂದಲೂ
ಆದರ್ಶಪ್ರಾಯರಾಗಿದ್ದಾರೆ. ಸಮಾಜಮುಖಿಯಾಗಿ, ಜನಮುಖಿಯಾಗಿ ನುಡಿಸೇವೆಯಲ್ಲಿ ನಿರತರಾಗಿರುವ ಪಾಲೆತ್ತಾಡಿ ಅವರ ಜೀವನ ಸಾಧನೆ ಅನುಕರಣೀಯ ಅಂಶವಾಗಿದೆ.

ಪ್ರತಿಷ್ಠಿತ ಪ್ರಶಸ್ತಿ
ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ. ಕೋವಿಡ್ ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದ 2019ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.


ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅಧ್ಯಕ್ಷತೆಯಲ್ಲಿ ರಚಿತವಾದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್, ಎಂ.ಎಸ್.ಮಣಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರಿದ್ದರು. ಈ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಅನುಮೋದಿಸಿ ಪ್ರಶಸ್ತಿ ಘೋಷಿಸಿದೆ.


ಕನ್ನಡ ಪತ್ರಿಕಾ ರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರು 1892ರ ನವೆಂಬರ್ 12ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ವಿಜಯಪುರದಲ್ಲೇ ಶಿಕ್ಷಣ ಪೂರೈಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದವರು. ನಿಷ್ಠುರ ಪತ್ರಿಕೋದ್ಯಮಕ್ಕೆ ಹೆಸರಾದವರು.
ವಿಜಯಪುರದಲ್ಲಿ ಪ್ರಕಟವಾಗುತ್ತಿದ್ದ ‘ಕರ್ನಾಟಕ ವೈಭವ’ ವಾರ ಪತ್ರಿಕೆಯ ಉಪ ಸಂಪಾದಕ, ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ, 1934ರಲ್ಲಿ ಆಗ ಬೆಳಗಾವಿಯಲ್ಲಿ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ನಂತರ ಕರ್ಮವೀರ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. 1956ರ ಸೆಪ್ಟೆಂಬರ್‍ನಲ್ಲಿ ಕನ್ನಡದ ಪ್ರಥಮ ಡೈಜೆಸ್ಟ್ ‘ಕಸ್ತೂರಿ’ ಮಾಸಿಕವನ್ನು ಲೋಕ ಶಿಕ್ಷಣ ಟ್ರಸ್ಟ್ ಪರವಾಗಿ ಪ್ರಾರಂಭಿಸಿದರು. 1958ರಲ್ಲಿ ನಿವೃತ್ತಿ ಹೊಂದಿದ ಮೊಹರೆ ಹಣಮಂತರಾಯರು 1960 ರ ಜುಲೈ 27 ರಂದು ಇಹಲೋಕ ತ್ಯಜಿಸಿದರು. ಇವರ ಸ್ಮರಣಾರ್ಥ ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಕರ್ನಾಟಕ ಸರ್ಕಾರ 2010ರಿಂದ ಪ್ರತಿ ವರ್ಷ ನೀಡುತ್ತಿದೆ. ಈ ಪ್ರಶಸ್ತಿ 2 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿದೆ. ಈವರೆಗೆ 9 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.
ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here