ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ಪುತ್ತೂರಿನಲ್ಲಿ ದೂರು ದಾಖಲು

0

ಹಿಂದೂ ಧರ್ಮಕ್ಕೆ ಅವಮಾನ ಎಸಗಿದವರ ವಿರುದ್ಧ ಕ್ರಮಕ್ಕೆ ಪುತ್ತೂರಿನ ಸುಬ್ರಹ್ಮಣ್ಯ ನಟ್ಟೋಜರಿಂದ ಆಗ್ರಹ


ಪುತ್ತೂರು: ತಿರುಪತಿ ತಿಮ್ಮಪ್ಪ ದೇವರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಖಾಸಗಿ ದೂರು ಸಲ್ಲಿಸಲಾಗಿದೆ. ಪುತ್ತೂರಿನ ಸುಬ್ರಹ್ಮಣ್ಯ ನಟ್ಟೋಜ ಅವರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರಿಗೆ ಶನಿವಾರ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರಿನ ನಾಗರಿಕ ಗಣೇಶ್ ಪ್ರಸಾದ್ ಎ ಹಾಜರಿದ್ದರು.


ದೂರಿನ ವಿವರ:
ತಿರುಪತಿ ಲಡ್ಡು ತಿರುಪತಿ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಕೊಡುವ ಪವಿತ್ರ ಪ್ರಸಾದವಾಗಿದ್ದು, ಅದನ್ನು ರಾಜಕೀಯ ಕಾರಣಗಳಿಗಾಗಿ ಅಪವಿತ್ರಗೊಳಿಸಲಾಗಿದೆ. ತನ್ಮೂಲಕ ಕೋಟ್ಯಂತರ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಪ್ರಾಣಿಗಳ ಕೊಬ್ಬನ್ನು ಬೆರಕೆ ಲಡ್ಡು ಪ್ರಸಾದದಲ್ಲಿ ಬೆರಕೆ ಮಾಡಿರುವುದು ಆಘಾತಕಾರಿ. ಇದೊಂದು ಉದ್ದೇಶಪೂರ್ವಕ ದುಷ್ಕೃತ್ಯವಾಗಿದ್ದು ಆಸ್ತಿಕರ ಭಾವನೆಗಳನ್ನು, ನಂಬಿಕೆಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ.
ಭಾರತೀಯ ಸಂವಿಧಾನದ 25ನೆಯ ವಿಧಿಯು ಧಾರ್ಮಿಕ ಹಕ್ಕನ್ನು ಮೂಲಭೂತ ಹಕ್ಕೆಂದು ಘೋಷಿಸಿದ್ದು, ಅವರವರ ಇಚ್ಚೆಯ ಧರ್ಮವನ್ನು ಪಾಲಿಸಿಕೊಂಡು ಬರುವುದಕ್ಕೆ ಪ್ರತಿಯೊಬ್ಬರೂ ಅರ್ಹರಾಗಿದ್ದಾರೆ. ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಆದರೆ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿ ಹಿಂದೂಗಳ ಧಾರ್ಮಿಕ ಹಕ್ಕಿಗೆ, ತನ್ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ 272 ಹಾಗೂ 273ನೇ ವಿಭಾಗದಲ್ಲಿ ಉಲ್ಲೇಖಿತವಾಗಿರುವ ಆಹಾರ ಕಲಬೆರಕೆ, 291ರಲ್ಲಿ ಉಲ್ಲೇಖಿತವಾಗಿರುವ ಅಧಿಕಾರ ದುರ್ಬಳಕೆ ವಿಷಯದ ನೆಲೆಯಲ್ಲಿ ದೂರು ದಾಖಲಿಸುವಂತೆ ಕೇಳಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here