puttur: ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆ ಇದರ ಕನ್ನಡ ಸಾಂಸ್ಕೃತಿಕ ಸಂಘವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಕಟಿಸುತ್ತಿರುವ ’ಕಣಾದ’ ವಾರ್ಷಿಕ ವಿಜ್ಞಾನ ಪತ್ರಿಕೆಯ 50ನೆಯ ಸಂಚಿಕೆಗಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಒಟ್ಟು 13 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 08 ವಿದ್ಯಾರ್ಥಿಗಳು ಬಹುಮಾನ ವಿಜೇತರಾಗಿದ್ದಾರೆ.
ನ.27ರಂದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು,(NAL) ಬೆಂಗಳೂರು ಇದರ ಕನ್ನಡ ವಿಜ್ಞಾನ ಪತ್ರಿಕೆ ಕಣಾದ ಮುಖ್ಯ ಸಂಪಾದಕರಾದ ಡಾ|| ಸಂಧ್ಯಾ ರಾವ್ ನಡೆಸಿಕೊಟ್ಟರು.
ಕಡಲ ನೀರಿನಿಂದ ಕುಡಿಯುವ ನೀರು ಪಡೆಯಲು ಸಹಾಯಕ ತಂತ್ರಜ್ಞಾನಗಳು ಈ ವಿಷಯದಲ್ಲಿ 10ನೇ ತರಗತಿಯ ನೇತ್ರಾ ಎಂ.ಪಿ (ಅರಿಯಡ್ಕ ಎಂ ಪ್ರಸನ್ನ ಕುಮಾರ್ ಮತ್ತು ಚಿತ್ರಾ ಎಸ್ ನಾಯ್ಕ್ ರವರ ಪುತ್ರಿ), 9ನೇ ತರಗತಿಯ ಲಿತೇಶ್ ಕೆ (ಚಿಕ್ಕಮುಡ್ನೂರಿನ ಶ್ರೀಪತಿ ಮತ್ತು ನಳಿನಿಯವರ ಪುತ್ರ) ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಹಣ್ಣು, ತರಕಾರಿ, ಧಾನ್ಯಗಳ ಸಂರಕ್ಷಣಾ ವಿಧಾನಗಳಲ್ಲಿ ಪ್ರಗತಿ ಈ ವಿಷಯದಲ್ಲಿ 10ನೇ ತರಗತಿಯ ನಿಶ್ಮಿತಾ ಎನ್ (ಕೊಡಿಪ್ಪಾಡಿಯ ನಾಮದೇವ ಆಚಾರ್ಯ ಮತ್ತು ಜಯಲಕ್ಷ್ಮಿ ಎ ಯವರ ಪುತ್ರಿ) ಪ್ರಥಮ, 10ನೇ ತರಗತಿಯ ವಿದಿಕ್ಷ ನಾಯಕ್ (ಕೋಡಿಂಬಾಡಿಯ ದಿವಾಕರ ನಾಯಕ್ ಮತ್ತು ಸುಮಿತ್ರಾ ರವರ ಪುತ್ರಿ),8ನೇ ತರಗತಿಯ ಸತ್ಯಜಿತ್ ಕೆ(ಮುಂಡೂರಿನ ಪದ್ಮನಾಭ ನಾಯ್ಕ್ ಮತ್ತು ಶೀಲಾವತಿಯವರ ಪುತ್ರ) ದ್ವಿತೀಯ ಬಹುಮಾನ ಮತ್ತು 10ನೇ ತರಗತಿಯ ಶ್ರೇಯಾ (ಇಡ್ಕಿದು ರಾಜೇಶ್ ಮತ್ತು ರಜಿತಾ ರವರ ಪುತ್ರಿ)ಮತ್ತು ಅವನಿ ನಾಯಕ್ (ತೆಂಕಿಲ ಕೆ ವಿನಾಯಕ ನಾಯಕ್ ಮತ್ತು ಧನಲಕ್ಷ್ಮಿ ಯವರ ಪುತ್ರಿ) ತೃತೀಯ ಸ್ಥಾನ ಪಡೆದಿರುತ್ತಾರೆ. ಹಿಮಪದರ ರಾಹಿತ್ಯಕ್ಕಾಗಿ (ಡಿ-ಐಸಿಂಗ್) ವೈಮಾನಿಕ ಕ್ಷೇತ್ರದಲ್ಲಿ ಹೊಚ್ಚಹೊಸ ತಂತ್ರಜ್ಞಾನಗಳು ಎಂಬ ವಿಷಯದಲ್ಲಿ 10ನೇ ತರಗತಿಯ ನಿಶಾ ಕೆ (ಚಿಕ್ಕಮುಡ್ನೂರು ವಸಂತ ಗೌಡ ಮತ್ತು ನಿರ್ಮಲಾ ಎಂ ರವರ ಪುತ್ರಿ) ತೃತೀಯ ಬಹುಮಾನ ಪಡೆದಿರುತ್ತಾರೆ. ಬಹುಮಾನವು ಪ್ರಮಾಣ ಪತ್ರ, ಕಣಾದ ಸಂಚಿಕೆ, ಸ್ಮರಣಿಕೆ ಮತ್ತು ನಗದು ಪುರಸ್ಕಾರಗಳನ್ನೊಳಗೊಂಡಿದೆ.
ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವುದರೊಂದಿಗೆ ಈ ಪ್ರಬಂಧಗಳು ಕಣಾದ ವಾರ್ಷಿಕ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.