ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ಹೆಚ್ಚುತ್ತಿದೆ ಸೈಬರ್ ಕ್ರೈಂ: ಜಂಬೂರಾಜ್ ಮಹಾಜನ್
ಪುತ್ತೂರು: ದರ್ಬೆತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನವಾದ ಫೆ.10 ರಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಂಬೂರಾಜ್ ಮಹಾಜನ್, ಉಪನಿರೀಕ್ಷಕರು ,ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಇವರು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಹೆಚ್ಚುತ್ತಿರುವ ಸೈಬರ್ ಕ್ರೈಂ ಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸರಕಾರಿ ನೌಕಾರಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನು ಈಗಿನಿಂದಲೇ ಪ್ರಾರಂಭಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಕೃಷ್ಣಪ್ರಸಾದ್ ಆಳ್ವ ಸ್ವಯಂಸೇವಕರ ಶ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪಿ.ಜೆ. ಶಂಕರ್ ನಾರಾಯಣ ಭಟ್ ಅವರು ವಿದ್ಯೆ ಜೊತೆಗೆ ದೈಹಿಕ ಶ್ರಮವು ಅವಶ್ಯಕತೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ವಹಿಸಿದ್ದ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಇವರು ಶಿಬಿರ ಆಯೋಜನೆಯಿಂದ ಜೀವನ ಶೈಲಿಯನ್ನು ಉತ್ತಮಪಡಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಬಿರದ ಸ್ವಯಂಸೇವಕರಾದ ಪ್ರಜ್ವಲ್ ಆರ್. ಸಿ ಇವರು ಎಲ್ಲರ ಪರವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಪಂ ಸದಸ್ಯ ಪ್ರದೀಪ್, ಎಸ್ಡಿಎಂಸಿ ಸದಸ್ಯ ಶೇಖರ್, ವಿದ್ಯಾರ್ಥಿ ಸಂಘದ ಪ್ರಶಾಂತ್ ಕುರಿಂಜಿಮೂಲೆ ಉಪಸ್ಥಿತರಿದ್ದರು. ಶಿಬಿರಾರ್ಥಿ ನಮನ್ ಸ್ವಾಗತಿಸಿ, ದೀಕ್ಷಾ ವಂದಿಸಿ, ದೀಕ್ಷಿತ ಕಾರ್ಯಕ್ರಮ ನಿರೂಪಿಸಿದರು.