ವಾಮನ ಪ್ರಭುರವರ ಆದರ್ಶ ಬದುಕು ಸಮಾಜಕ್ಕೆ ಮಾದರಿ- ನಿತ್ಯಾನಂದ ಭಟ್ ಕಶೆಕೋಡಿ
ಪುತ್ತೂರು: ಸವಣೂರು ಗ್ರಾಮದ ಕನ್ನಡಕುಮೇರು ನಿವಾಸಿ, ಮೂಲತ: ಕಲ್ಲಡ್ಕದ ಬಾಯಿಲ ವಾಮನ ಪ್ರಭುರವರು ಫೆ. ೨೧ ರಂದು ನಿಧನರಾಗಿದ್ದು, ವೈಕುಂಠ ಸಮಾರಾಧನೆ ಕಾರ್ಯಕ್ರಮ ಕಶೆಕೋಡಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು.
ನುಡಿನಮನ ಕಾರ್ಯಕ್ರಮದಲ್ಲಿ ನಿತ್ಯಾನಂದ ಭಟ್ ಕಶೆಕೋಡಿ-ಬರೆಪ್ಪಾಡಿರವರು ಮಾತನಾಡಿ ವಾಮನ ಪ್ರಭುರವರು ಸ್ನೇಹಜೀವಿಯಾಗಿದ್ದು, ಸುಮಾರು ೪೦ ವರ್ಷಗಳ ಕಾಲ ಪುತ್ತೂರಿನಲ್ಲಿ ರಿಕ್ಷಾ ಚಾಲಕನಾಗಿ ಅತ್ಯಂತ ಶ್ರದ್ಧೆಯಿಂದ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಸರಳ ಸಜ್ಜನಿಕೆ ವ್ಯಕ್ತಿತ್ವದ ಮೂಲಕ ಕುಟುಂಬ ಮತ್ತು ಸಮಾಜದಲ್ಲಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅವರ ಆದರ್ಶ ಬದುಕು ಸಮಾಜಕ್ಕೆ ಮಾದರಿ ಎಂದು ಹೇಳಿದರು.
ಕಶೆಕೋಡಿ ಲಕ್ಷ್ಮಿ ವೆಂಕಟ್ರಮಣ ದೇವಾಲಯದ ಅರ್ಚಕ ದೇವಿಪ್ರಸಾದ್ ಭಟ್ ಮತ್ತು ದಯಾನಂದ ಭಟ್ರವರು ಉಪಸ್ಥಿತರಿದ್ದರು.
ವಾಮನ ಪ್ರಭುರವರ ಪತ್ನಿ ಸುಜಾತ ಪ್ರಭು, ಪುತ್ರರಾದ ಸವಣೂರು ಚಂದ್ರಭವನ ಹೋಟೆಲ್ ಉದ್ಯಮಿ ರಾಮಕೃಷ್ಣ ಪ್ರಭು, ಪುತ್ತೂರು ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಉದ್ಯೋಗಿ ಶಿವರಾಮ ಪ್ರಭು, ಮಂಗಳೂರು ಎಂ.ಆರ್. ಪಿ.ಎಲ್ ಸಂಸ್ಥೆಯ ಉದ್ಯೋಗಿ ಕರುಣಾಕರ ಪ್ರಭು, ಪುತ್ರಿ ಶಾರದಾ ಪ್ರಭು ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳು, ಹಿತೈಷಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಂಘ- ಸಂಸ್ಥೆಗಳ ಮುಖಂಡರುಗಳು, ಬಂಧುಗಳು ಸೇರಿದಂತೆ ೪೦೦ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.