@ ಸಂತೋಷ್ ಕುಮಾರ್ ಶಾಂತಿನಗರ
ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿ ಹೊಂದಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಹೊಸದಾಗಿ ಆಯ್ಕೆಯಾಗಬೇಕಿರುವ 16 ನಿರ್ದೇಶಕರ ಸ್ಥಾನಗಳಿಗೆ ಎ.26ರಂದು ಪೂರ್ವಾಹ್ನ 9ರಿಂದ ಅಪರಾಹ್ನ 4ರವರೆಗೆ ಮಂಗಳೂರು ಕುಲಶೇಖರದಲ್ಲಿರುವ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ನಿಗದಿಯಾಗಿರುವ ಚುನಾವಣೆಗೆ ಸಂಬಂಧಿಸಿ ಕುತೂಹಲಕಾರಿ ಬೆಳವಣಿಗೆ ನಡೆಯುತ್ತಿದೆ.
ಸಹಕಾರಿ ಕ್ಷೇತ್ರದ ಚುನಾವಣೆಗೆ ಸಂಘ ಪರಿವಾರದ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ಚುನಾವಣೆ ನಡೆದು ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ನಡೆಯುವುದು ಸಂಪ್ರದಾಯವಾಗಿದ್ದರೂ ಕೆಎಂಎಫ್ ಚುನಾವಣೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರಾವಳಿಯ ಹೈಕಮಾಂಡ್ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಸಹಕಾರ ಕ್ಷೇತ್ರದ ಹೈಕಮಾಂಡ್ ಆಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ನಡುವೆ ಮಹತ್ವದ ಮಾತುಕತೆ ನಡೆದು ಅವಿರೋಧ ಆಯ್ಕೆ ನಡೆಯುವ ಸಾಧ್ಯತೆಗಳಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯ ಮಾದರಿಯಲ್ಲಿಯೇ ಕೆಎಂಎಫ್ ಚುನಾವಣೆಯೂ ನಡೆಯುವ ಮೂಲಕ ಸಹಕಾರಿ ಕ್ಷೇತ್ರದ ಸೌಹಾರ್ದ ರಾಜಕೀಯವನ್ನು ಮುಂದುವರಿಸಲು ಪ್ರಮುಖ ಹೆಜ್ಜೆ ಇಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
16 ಸ್ಥಾನಗಳಿಗೆ ಚುನಾವಣೆ ಘೋಷಣೆ: ಮಾ.17ರಂದು ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು ಎ.13ರಂದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏ.18ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಎ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಎ.20ರ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂತೆಗೆಯುವಿಕೆ ಪ್ರಕ್ರಿಯೆ ನಡೆಯಲಿದ್ದು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮಂಗಳೂರು ನಗರದ ಕುಲಶೇಖರದಲ್ಲಿರುವ ಒಕ್ಕೂಟದ ಕೇಂದ್ರ ಕಚೇರಿಯ ಆವರಣದಲ್ಲಿ ನಡೆಯಲಿದೆ. ಚುನಾವಣಾ ವೇಳಾಪಟ್ಟಿಯನ್ನು ಈಗಾಗಲೇ ಎಲ್ಲಾ ಅರ್ಹ ಸದಸ್ಯ ಸಹಕಾರ ಸಂಘಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿ ಒಟ್ಟು ಎಲ್ಲ 16 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ ಒಂದು ಸ್ಥಾನವನ್ನು ಮಹಿಳೆಗೆ ಮೀಸಲಿರಿಸಲಾಗಿದೆ. ಎರಡೂ ಜಿಲ್ಲೆಗಳಿಗೆ ತಲಾ 8 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಸೇರಿದಂತೆ ಪುತ್ತೂರು ಉಪವಿಭಾಗದಿಂದ 4 ನಿರ್ದೇಶಕರು ಆಯ್ಕೆಯಾಗಬೇಕಿದೆ. ಉಡುಪಿ ಜಿಲ್ಲೆಯ ಕುಂದಾಪುರ ಉಪವಿಭಾಗದಿಂದ 7, ದ.ಕ.ಜಿಲ್ಲೆಯ ಪುತ್ತೂರು ಉಪವಿಭಾಗದಿಂದ 4, ಮಂಗಳೂರು ಉಪವಿಭಾಗದಿಂದ 3 ಹಾಗೂ ದ.ಕ., ಉಡುಪಿಯಿಂದ ತಲಾ 1 ಮಹಿಳಾ ಮೀಸಲು ಸ್ಥಾನ ಸೇರಿ ಒಟ್ಟು 16 ಸ್ಥಾನಗಳಿಗೆ ನೂತನವಾಗಿ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.
ಪುತ್ತೂರು ತಾಲೂಕಿನಿಂದ ಎಸ್.ಬಿ. ಜಯರಾಮ ರೈ ಬಳಜ್ಜ ಮತ್ತು ನಾರಾಯಣ ಪ್ರಕಾಶ್ ಪಾಣಾಜೆ ನಿರ್ದೇಶಕರಾಗಿದ್ದಾರೆ. ಈ ಪೈಕಿ ಎಸ್.ಬಿ. ಜಯರಾಮ ರೈ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳ್ತಂಗಡಿಯಿಂದ ಪದ್ಮನಾಭ ಶೆಟ್ಟಿ ಅರ್ಕಾಜೆ ಅವರು ಒಕ್ಕೂಟದ ಹಾಲಿ ನಿರ್ದೇಶಕರಾಗಿದ್ದಾರೆ. ಬೆಳ್ತಂಗಡಿಯಿಂದ ಸಹಕಾರಿ ಧುರೀಣ ನಿರಂಜನ ಬಾವಂತಬೆಟ್ಟು ಅವರು ಒಕ್ಕೂಟದ ನಿರ್ದೇಶಕರಾಗಿದ್ದರು. ಉಪವಿಭಾಗದ ನಾಲ್ಕು ತಾಲೂಕುಗಳಾದ ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿಯಿಂದ ನಿರ್ದೇಶಕರ ಆಯ್ಕೆಗೆ ಅವಕಾಶವಿದ್ದರೂ ಸುಳ್ಯ ಮತ್ತು ಕಡಬದಿಂದ ಪ್ರಸ್ತುತ ಯಾರೂ ನಿರ್ದೇಶಕರಾಗಿಲ್ಲ.
ಆರ್ಎಸ್ಎಸ್ ಮತ್ತು ಸಹಕಾರ ಕ್ಷೇತ್ರದ ಹೈಕಮಾಂಡ್ ತೀರ್ಮಾನ ಫೈನಲ್: ಹಾಲು ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಲು ಸಂಘ ಪರಿವಾರದ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ಬೆಂಬಲಿತರಲ್ಲಿ ಪೈಪೋಟಿ ನಡೆದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹಾಲಿ ನಿರ್ದೇಶಕರು ಮತ್ತೆ ಸ್ಪರ್ಧೆಗೆ ಆಸಕ್ತಿ ತೋರಿದ್ದರು. ಹೊಸಬರೂ ಸ್ಪರ್ಧಿಸಲು ಉತ್ಸುಕರಾಗಿದ್ದರು. ಈ ಹಿಂದೆ ಅಧ್ಯಕ್ಷರಾಗಿದ್ದ ಕಾಂಗ್ರೆಸ್ನ ಕಾಪು ದಿವಾಕರ ಶೆಟ್ಟಿ, ಹಿರಿಯ ನಿರ್ದೇಶಕ ಪದ್ಮನಾಭ ಶೆಟ್ಟಿ ಆರ್ಕಜೆ, ಮೂರು ಬಾರಿ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಕೊನೆಯ ಮೂರು ವರ್ಷ ಆಡಳಿತ ನಡೆಸಿದ ಸುಚರಿತ ಶೆಟ್ಟಿ ಮತ್ತೆ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಆರ್ಎಸ್ಎಸ್ ಹೈಕಮಾಂಡ್ ಆಗಿರುವ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಸಹಕಾರ ಕ್ಷೇತ್ರದ ಹೈಕಮಾಂಡ್ ಆಗಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ನಿರ್ಧಾರವೇ ಇಲ್ಲಿ ಅಂತಿಮ ಆಗಿರುವುದರಿಂದ ಅವಿರೋಧ ಆಯ್ಕೆ ಸಾಧ್ಯತೆ ನಡೆಯುವುದು ಬಹುತೇಕ ನಿಚ್ಚಳವಾಗಿದೆ.
ಸಹಕಾರ ಭಾರತಿ ಆಡಳಿತ: ಕಳೆದ ಮೂರು ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಂಘಟನೆಯ ಆಡಳಿತದಲ್ಲಿ ಹಾಲು ಒಕ್ಕೂಟ ಇದೆ. ಈ ಬಾರಿಯೂ ಸಹಕಾರ ಭಾರತಿ ಮತ್ತು ಕಾಂಗ್ರೆಸ್ ನಡುವೆ ಮಾತುಕತೆ ನಡೆಸಿ ಅವಿರೋಧ ಆಯ್ಕೆಗೆ ಎರಡೂ ಕಡೆಯ ಸಹಕಾರಿ ಧುರೀಣರು ಒಲವು ಹೊಂದಿದ್ದಾರೆ. ಹಾಲು ಒಕ್ಕೂಟಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 16 ನಿರ್ದೇಶಕ ಸ್ಥಾನ ಇದೆ. ಇದರಲ್ಲಿ ದ.ಕ. ಹಾಗೂ ಉಡುಪಿಗೆ ತಲಾ 8 ನಿರ್ದೇಶಕ ಸ್ಥಾನ ನೀಡಲಾಗಿದೆ. 2009ರವರೆಗೆ ಕಾಂಗ್ರೆಸ್ ಆಡಳಿತದಲ್ಲಿದ್ದ ಹಾಲು ಒಕ್ಕೂಟ ಬಳಿಕ ಚುನಾವಣೆ ಘೋಷಣೆಯಾದಾಗ ಅವಿರೋಧ ಆಯ್ಕೆ ನಡೆದಿತ್ತು. ನಂತರ ಪರಸ್ಪರ ಒಪ್ಪಂದದ ಪ್ರಕಾರ ಮೊದಲ ಬಾರಿಗೆ ಸಹಕಾರ ಭಾರತಿ ತೆಕ್ಕೆಗೆ ಹಾಲು ಒಕ್ಕೂಟದ ಆಡಳಿತ ಬಂದಿತ್ತು. 2014ರಲ್ಲಿ ಚುನಾವಣೆ ನಡೆದು 13 ಸಹಕಾರ ಭಾರತಿ ಹಾಗೂ 3 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು. 2019ರಲ್ಲಿ ಅವಿರೋಧ ಆಯ್ಕೆಯಾಗಿ ಸಹಕಾರ ಭಾರತಿಗೆ ಮತ್ತೆ ಪಟ್ಟ ಲಭಿಸಿತ್ತು.
ನಾರಾಯಣ ಪ್ರಕಾಶ್ ಔಟ್
ಚಂದ್ರಶೇಖರ ರಾವ್ ಇನ್
ಎಸ್.ಬಿ.ಜಯರಾಮ ರೈ ಮುಂದುವರಿಕೆ?
ಡಾ.ಪ್ರಭಾಕರ ಭಟ್ ಮತ್ತು ಡಾ|ಎಂ.ಎನ್.ರಾಜೇಂದ್ರ ಕುಮಾರ್ ನಡುವಿನ ಮಾತುಕತೆ -ಲಪ್ರದವಾಗಿದೆ.ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯದೆ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಲಿದ್ದು ಸಹಕಾರ ಭಾರತಿಗೆ ಸಿಂಹಪಾಲು ದೊರಕಲಿದೆ.ಲಭ್ಯ ಮಾಹಿತಿಯ ಪ್ರಕಾರ ಪುತ್ತೂರಿನಿಂದ ಹಾಲಿ ನಿರ್ದೇಶಕ ನಾರಾಯಣಪ್ರಕಾಶ್ ನೆಲ್ಲಿತ್ತಿಮಾರು ಪಾಣಾಜೆ ಅವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ನಿಽಮುಂಡ ಅವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹಾಲಿ ಉಪಾಧ್ಯಕ್ಷ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರೂ ಆಗಿರುವ ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮುಂದಾಳು
ಎಸ್.ಬಿ.ಜಯರಾಮ ರೈಯವರಿಗೆ ಈ ಬಾರಿಯೂ ಸಹಕಾರ ಭಾರತಿಯಿಂದ ಅವಕಾಶ ನೀಡಲು ತೀರ್ಮಾನವಾಗಿದೆ ಎಂದು ತಿಳಿದು ಬಂದಿದೆ.