ಪುತ್ತೂರು: ಆನೆಗೂ ಮತ್ತು ಕೆಯ್ಯೂರಿಗೆ ಅದೆಂತಾ ನಂಟು ಅಂತ ಅರ್ಥ ಆಗ್ತಿಲ್ಲ. ಈ ಅಲೆಮಾರಿ ಆನೆ ಮಾತ್ರ ಎಲ್ಲಿಗೆ ಹೋದರೂ ಕೆಯ್ಯೂರನ್ನು ಮಾತ್ರ ಬಿಡುತ್ತಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಗ್ರಾಮಸ್ಥರ ನಿದ್ದೆಗೆಡಿಸುತ್ತಿರುವ ಒಂಟಿ ಸಲಗವೊಂದು ಮತ್ತೆ ಕೆಯ್ಯೂರಿಗೆ ಕಾಲಿಟ್ಟಿದೆ. ಕೆಯ್ಯೂರು ಗ್ರಾಮದ ದೇರ್ಲ ಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಹಾನಿಯುಂಟು ಮಾಡುವ ಮೂಲಕ ಕೃಷಿಕರ ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದ ಒಂಟಿ ಸಲಗ ಎ.17 ರಂದು ರಾತ್ರಿ ದೇರ್ಲ,ಇಳಂತಾಜೆ ಪರಿಸರದಲ್ಲಿ ಕಾಣಿಸಿಕೊಂಡಿದೆ. ದೇರ್ಲ ಗೋವಿಂದ ಭಟ್ ರವರ ಕೃಷಿ ತೋಟದಲ್ಲಿದ್ದ ಕೌಂಪೌಂಡ್ ಅನ್ನು ಮಗುಚಿ ಹಾಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಲೆಮಾರಿ ಆನೆ
ಕಳೆದ ಹಲವು ತಿಂಗಳುಗಳಿಂದ ಈ ಒಂಟಿ ಸಲಗ ಕೊಳ್ತಿಗೆ ಭಾಗದಿಂದ ಹಿಡಿದು ಈ ಕಡೆ ಉಪ್ಪಿನಂಗಡಿ ಬೆಳ್ಳಿಪ್ಪಾಡಿ ತನಕ ಹೆಜ್ಜೆ ಹಾಕಿ ಬೆಳ್ಳಿಪ್ಪಾಡಿ ಭಾಗದಿಂದ ತನ್ನ ಜೊತೆಗಾತಿ ಆನೆಯೊಂದರ ಜೊತೆ ಮತ್ತೆ ಸ್ವಸ್ಥಾನಕ್ಕೆ ಸೇರಿಕೊಂಡಿತ್ತು. ಬಳಿಕ ತಿಂಗಳ ಹಿಂದೆ ಮತ್ತೆ ಒಂಟಿಯಾಗಿ ಇಳಂತಾಜೆ ,ಅರಿಯಡ್ಕ ಪ್ರದೇಶದ ಕಡೆಗೆ ಹೆಜ್ಜೆ ಹಾಕಿತ್ತು. ಇದೀಗ ತಿಂಗಳು ಬಿಟ್ಟು ಮತ್ತೆ ದೇರ್ಲ ಪರಿಸರದಲ್ಲಿ ಕಾಣಿಸಿಕೊಂಡಿದೆ. ತಿಂಗಳು ಬಿಟ್ಟು ಮತ್ತೆ ಕೆಯ್ಯೂರು ಗ್ರಾಮಕ್ಕೆ ಗಜರಾಜ ಹೆಜ್ಜೆ ಇಡುವ ಮೂಲಕ ಹತ್ತೂರು ಬಿಟ್ಟರೂ ಕೆಯ್ಯೂರು ಬಿಡೆ ಎಂಬಂತೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇದೆ.
ಜನರಿಗೆ ಉಪದ್ರ ಕೊಡದ ಗಜರಾಜ
ಈ ಒಂಟಿ ಸಲಗ ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಣಿಸಿಕೊಂಡಿದ್ದರೂ ಯಾರಿಗೂ ಯಾವುದೇ ರೀತಿಯ ತೊಂದರೆ ಮಾಡಿಲ್ಲ . ಅಲ್ಲಲ್ಲಿ ಒಂದಿಷ್ಟು ಕೃಷಿ ಹಾನಿ ಮಾಡಿದ್ದು ಬಿಟ್ಟರೆ ಮನುಷ್ಯರಿಗೆ ತೊಂದರೆ ಮಾಡದ ಗಜರಾಜ ಇದಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಒಟ್ಟಿನಲ್ಲಿ ಆನೆ ಬಂತೊಂದು ಆನೆ ಎಂಬಂತೆ ಈ ಭಾಗದಲ್ಲಿ ಆಗಾಗ ಈ ಒಂಟಿ ಸಲಗ ಕಾಣಿಸಿಕೊಳ್ಳುತ್ತಲೆ ಇದೆ. ಈ ಆನೆಯನ್ನು ಪರ್ಮೆನೆಂಟ್ ಆಗಿ ಒಂದು ರಕ್ಷಿತಾರಣ್ಯಕ್ಕೆ ಕಳುಹಿಸುವ ಕೆಲಸ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಆಗಬೇಕಾಗಿದೆ ಎಂಬುದು ಗ್ರಾಮಸ್ಥರ ಮನವಿಯಾಗಿದೆ.