ಗುಂಡ್ಯ: ಹತೋಟಿ ತಪ್ಪಿ ಆಳ ಜಾಗಕ್ಕೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

0

ನೆಲ್ಯಾಡಿ: 20 ದಿನದ ಹಿಂದೆ ಶಿರಾಡಿ ಗ್ರಾಮದ ಗುಂಡ್ಯದಲ್ಲಿ ಸೇತುವೆಯ ಮೇಲೆ ಮಲಗಿದ್ದ ವೇಳೆ ಆಯತಪ್ಪಿ ಆಳ ಜಾಗಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಾಸನ ನಿವಾಸಿಯೊಬ್ಬರು ಚಿಕಿತ್ಸೆ ಫಲಿಸದೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಎ.18ರಂದು ಮೃತಪಟ್ಟಿರುವುದಾಗಿ ವರದಿಯಾಗಿದೆ.


ಹಾಸನ ಜಿಲ್ಲೆ ಹೊಳೆನರಸೀಪುರದ ಸಿಂಗಮ್ಮ ಟೆಂಪಲ್ ಸ್ಟ್ರೀಟ್ ನಿವಾಸಿ ಚಂದ್ರಶೇಖರ(47ವ.) ಮೃತಪಟ್ಟವರಾಗಿದ್ದಾರೆ. ಚಂದ್ರಶೇಖರ ಅವರು ಒಂದೂವರೇ ವರ್ಷದಿಂದ ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯದಲ್ಲಿ ಕಾಂತರಾಜು ಎಂಬವರ ಜೊತೆ ರಸ್ತೆ ಕೆಲಸದಲ್ಲಿ ಟ್ರಾಕ್ಟರ್ ಓಡಿಸಿಕೊಂಡಿದ್ದರು. ಚಂದ್ರಶೇಖರ ಅವರು ಮಾ.28ರಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಲೆಂದು ಬಸ್ಸು ಕಾಯುತ್ತಾ ಗುಂಡ್ಯ ಫಾರೆಸ್ಟ್ ಚೆಕ್ ಪೋಸ್ಟ್ ಹತ್ತಿರದ ಸೇತುವೆಯ ಮೇಲೆ ಮಲಗಿದ್ದವರು. ಹತೋಟಿ ತಪ್ಪಿ ಆಳ ಜಾಗಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು.

ಅವರನ್ನು ಚಿಕಿತ್ಸೆಗಾಗಿ ಹಾಸನ ಚಾಮರಾಜೇಂದ್ರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಾ.29ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಅಲ್ಲಿ 6 ದಿನ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಮನೆಯಲ್ಲಿದ್ದವರಿಗೆ ಎ.17ರಂದು ಹೊಟ್ಟೆ ಮತ್ತು ಭುಜದಲ್ಲಿ ನೋವು ಜಾಸ್ತಿಯಾದ ಕಾರಣಕ್ಕೆ ಮತ್ತೆ ಹಾಸನದ ಚಾಮರಾಜೇಂದ್ರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೇ ಎ.18ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮೃತ ಚಂದ್ರಶೇಖರ ಅವರ ಪತ್ನಿ ಮಂಜುಳಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here