ಕಡಬ: ಸಹೋದ್ಯೋಗಿಗೆ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಚುಚ್ಚಿ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿಗೆ ಪುತ್ತೂರು 2ನೇ ಎಸಿಜೆ & ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿಯವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಕೇರಳ ರಾಜ್ಯದ ಕಡಕಲ್ ತಾಲೂಕು ಕುನ್ನಪುರಂ ನಿವಾಸಿ ಅಜಿತನ್ ಶಿಕ್ಷೆಗೆ ಒಳಗಾದ ಆರೋಪಿ. 2021ನೇ ಡಿಸೆಂಬರ್ ತಿಂಗಳಿನಲ್ಲಿ ಆರೋಪಿಯು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡಿಕೊಂಡಿದ್ದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈತನ ಜೊತೆಯಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪ್ರಸಾದ್ ಎಂಬವರು ಮಾತನಾಡುವ ಕೆಲವೊಂದು ವಿಚಾರಗಳಲ್ಲಿ ತಗಾದೆ ಉಂಟಾಗಿ ಅಜಿತನ್ ಪ್ರಸಾದ್ ಅವರಿಗೆ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಚುಚ್ಚಿದ್ದರು. ಬಳಿಕ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಅಜಿತನ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಈತನನ್ನು ಕಡಬ ಪೊಲೀಸರು 2024 ನವೆಂಬರ್ ತಿಂಗಳಿನಲ್ಲಿ ಕೇರಳ ರಾಜ್ಯದ ತಿರುವನಂತಪುರದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಉಪ್ಪಿನಂಗಡಿ ವೃತ್ತ ನಿರೀಕ್ಷರ ನಿರ್ದೇಶನಂತೆ ಕಡಬ ಎಸ್.ಐ ಅಭಿನಂದನ್ ಅವರ ಮಾರ್ಗದರ್ಶನದಂತೆ ಎಚ್ ಸಿ ರಾಜು ಬಿ. ವಿ. ನ್ಯಾಯಾಲಯಕ್ಕೆ ದೋಷಾರೋಪಣಪತ್ರ ಸಲ್ಲಿಸಿದ್ದರು. ಇದೀಗ ಈತನಿಗೆ ಕಲಂ 326 ಗೆ 3 ವರ್ಷ ಕಾರಾಗೃಹ, ಪ್ರಕರಣದ ಸಂತ್ರಸ್ತರಿಗೆ 10,000 ರೂ. ಪರಿಹಾರ ನೀಡಲು ಅಪೇಕ್ಷಿಸಲಾಗಿದೆ. ಇನ್ನು ಕಲಂ 506 ಗೆ 6 ತಿಂಗಳ ಕಾರಾಗೃಹ ಮತ್ತು 1೦೦೦ ರೂ. ದಂಡ. ತಪ್ಪಿದಲ್ಲಿ 15ದಿನಗಳು ಹೆಚ್ಚುವರಿ ಜೈಲುವಾಸಕ್ಕೆ ಆದೇಶ ನೀಡಬೇಕಾಗುತ್ತದೆ ಆದೇಶದಲ್ಲಿ ಉಲ್ಲೇಖಿಸಿದೆ. ಪ್ರಕರಣದಲ್ಲಿ ಎ.ಪಿ.ಪಿ.ಯಾಗಿ ಪ್ರೀತಿ ಎಂ.ಸಿ. ಅವರು ವಾದಿಸಿದ್ದರು.