ಪುತ್ತೂರು: ಈಶ್ವರಮಂಗಲ ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆಯಲ್ಲಿ ಏ.26 ರಂದು ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸೌಮ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದಲ್ಲಿ ನಡೆದ ವಿವಿಧ ಚಟುವಟಿಕೆಗಳ ಬಗ್ಗೆ ಚುಟುಕಾಗಿ ತಿಳಿಸಿದರು. ಹಾಗೂ ಆಯೋಜಿಸಿದ ಎಲ್ಲರನ್ನು ಹೃತ್ಪೂರ್ವಕವಾಗಿ ವಂದಿಸಿದರು.
ಕಾರ್ಯಕ್ರಮದ ಅತಿಥಿಗಳಾದ ಅನ್ವಿತಾ ಹಾಗೂ ಅನನ್ಯರವರು ಮಾತನಾಡಿ ಶಿಬಿರದಲ್ಲಾದ ಸುಂದರ ಅನುಭವಗಳನ್ನು ಹಂಚಿಕೊಂಡರು. ಅತಿಥಿಗಳಿಗೆ ಹೂವು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೆಯೇ ಕರಾಟೆ ಶಿಕ್ಷಕರಾದ ನಾರಾಯಣ ಆಚಾರ್ಯರು ಮಾತನಾಡಿ ಶಿಬಿರವು ಹಳ್ಳಿಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಅವಕಾಶವನ್ನು ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿಯವರು ಮಾತನಾಡಿ ಬೇಸಿಗೆ ಶಿಬಿರವು ಮಕ್ಕಳ ಆತ್ಮವಿಶ್ವಾಸ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಶಿಬಿರದಲ್ಲಿ ಯಾವುದೇ ಭೇದವಿಲ್ಲದೆ ಸಹಭಾಗಿತ್ವ,ಸಾಮರಸ್ಯದಿಂದ ಭಾಗವಹಿಸಿ, ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸಲು ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲತಾರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಧರಣಿ ಸ್ವಾಗತಿಸಿ ಹಾಗೂ ಸೃಷ್ಟಿ ಹಾಗೂ ಶ್ರೀಯಾ ನಿರೂಪಿಸಿ, ಅನಘ ವಂದಿಸಿದರು. ಮುಂದೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.