ಉಪ್ಪಿನಂಗಡಿ: ಪದವಿ ಮುಗಿದ ಮಾತ್ರಕ್ಕೆ ವಿದ್ಯಾಭ್ಯಾಸ ಮುಗಿಯಿತು ಎಂದು ಭಾವಿಸದಿರಿ. ಕಲಿಕೆಗೆ ಮುಂದೆಯೂ ಬಹಳಷ್ಟು ಒಳ್ಳೆಯ ಅವಕಾಶಗಳಿವೆ. ಅದರ ಉಪಯೋಗ ಪಡೆಯುವುದರ ಜೊತೆಗೆ ಶ್ರಮ, ಪ್ರಾಮಾಣಿಕತೆ ಮತ್ತು ಒಳ್ಳೆಯ ಚಿಂತನೆಯ ಮೂಲಕ ಬದುಕಿನ ಹಾದಿ ಹಿಡಿದರೆ ಜೀವನದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವ ಮತ್ತು 1 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ವಿಸ್ತೃತ ತರಗತಿ ಕಟ್ಟಡದವನ್ನು ಎ.26ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ಇದೀಗ ರಾಜ್ಯ ಸರಕಾರ ವಿದ್ಯಾರ್ಥಿಗಳಿಗಾಗಿಯೇ ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಉಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಐಎಎಸ್., ಕೆಎಎಸ್ ಮಾಡಬಹುದು ಎಂದ ಅವರು, ವಿದ್ಯಾರ್ಥಿಗಳು ತಮ್ಮ ಇಚ್ಛಾಶಕ್ತಿಗೆ ಅನುಗುಣವಾಗಿ ಮುಂದೆ ಬರಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ನರೇಂದ್ರ ರೈ ದೇರ್ಲ ಮಾತನಾಡಿ, ಸರಕಾರಿ ಕಾಲೇಜಿನಲ್ಲಿ ಕಲಿಯುವವರು ಬಡವರ, ಕೂಲಿ ಕಾರ್ಮಿಕರ, ರೈತರ ಮಕ್ಕಳು ಅಧಿಕವಿದ್ದು, ಇವರಿಗೆ ಕಷ್ಟಗಳ ಅರಿವಿರುತ್ತದೆ. ಸರಕಾರಿ ಕಾಲೇಜುಗಳಲ್ಲಿ ಕಲಿಯುವ ಮಕ್ಕಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮಾನವೀಯತೆ, ದೇಶ ಪ್ರೇಮ, ಮನುಷ್ಯ ಪ್ರೇಮವನ್ನು ಇನ್ನೂ ಜೀವಂತ ಇರಿಸಿಕೊಂಡಿದ್ದಾರೆ. ಇದು ಮುಂದುವರಿಯಬೇಕು ಮತ್ತು ವಿದ್ಯಾರ್ಥಿಗಳು ನೆಲ, ಜಲ, ಜನಪದದ, ಸಮುದಾಯದ ಪ್ರತಿನಿಧಿಯಾಗಬೇಕು ಎಂದರು.
ಬೆಟ್ಟಂಪಾಡಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ದಿಗಂತವನ್ನು ವಿಸ್ತರಿಸಬೇಕು. ಹೊಸ ವಿಷಯ ತಿಳಿಯುವ, ಕಲಿಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆತ್ಮ ಗೌರವ ಮತ್ತು ಆತ್ಮವಿಶ್ವಾಸ ಹೊಂದಬೇಕು. ಈ ರೀತಿಯಾಗಿ ಮುಂದುವರಿದರೆ ಎಂತಹ ಸಮಸ್ಯೆಗಳನ್ನೂ ಎದುರಿಸಬಹುದಾಗಿದೆ ಎಂದರು.

ಕಾಲೇಜಿಗೆ ಸುಮಾರು 40 ಸಾವಿರ ರೂಪಾಯಿ ವೆಚ್ಚದ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ ವಿನ್ಸೆಂಟ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್., ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಹಾಶ ಶೆಟ್ಟಿ, ಸದಸ್ಯ ಎ. ಕೃಷ್ಣ ರಾವ್ ಅರ್ತಿಲ ಮಾತನಾಡಿದರು. ಸಮಿತಿ ಸದಸ್ಯರಾದ ಇಸ್ಮಾಯೀಲ್ ಇಕ್ಬಾಲ್, ವಿನ್ಸೆಂಟ್ ಫೆರ್ನಾಂಡಿಸ್, ಮಹಾಬಲೇಶ್ವರ ಭಟ್, ಸವಿತಾ ಹರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಡಾ. ಹರಿಪ್ರಸಾದ್ ಸ್ವಾಗತಿಸಿದರು. ಡಾ. ಸಂತೋಚ್ ವಂದಿಸಿದರು. ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.