ಪುತ್ತೂರು: ದ್ವಾರಕಾ ಕಾರ್ಪೋರೇಷನ್ ಪ್ರೈ.ಲಿ ಇದರ ಅಂಗಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ ಶಂಕರ ಜಯಂತಿ ಆಚರಣೆ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ್ವಾರಕಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಅಶ್ವಿನಿ ಜಿ.ಕೆ ಭಟ್ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಮಕುಂಜ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಚೇತನ್ ಮೊಗ್ರಾಲ್ ಅವರು ಶಂಕರಾಚಾರ್ಯರ ‘ಭಜಗೋವಿಂದಂ’ ಶ್ಲೋಕವನ್ನು ಉಲ್ಲೇಖಿಸಿ ಮಾತನಾಡಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ತಾಳಮದ್ದಳೆ ಅರ್ಥಧಾರಿಗಳಾದ ಗಣರಾಜ ಕುಂಬ್ಳೆ ಅವರು “ಭಾರತದಾದ್ಯಂತ ಸಂಚರಿಸಿ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಸಾರಿದವರು ಶಂಕರಾಚಾರ್ಯರು” ಎಂದು ತಿಳಿಸಿ ಅದ್ವೈತ ಸಿದ್ಧಾಂತದ ಬಗ್ಗೆ ವಿವರಿಸಿ ಮಾತನಾಡಿದರು.
ವೇದ ಶಿಬಿರದ ಶಿಬಿರಾರ್ಥಿ ಅಭಿನವ ರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಶ ಆರ್ ಸ್ವಾಗತಿಸಿ, ಪರೀಕ್ಷಿತ್ ಶರ್ಮ ಧನ್ಯವಾದ ಸಮರ್ಪಿಸಿದರು. ನಿಶಾಂತ್.ಪಿ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ವಸಂತ ವೇದ ಶಿಬಿರದ ಶಿಬಿರಾರ್ಥಿಗಳಿಂದ ಗಣೇಶ ಪಂಚರತ್ನ ಹಾಗೂ ತೋಟಕಾಷ್ಟಕಂ ಶ್ಲೋಕಗಳ ಸಮೂಹ ಗಾಯನ ನೆರವೇರಿತು. ಶಂಕರಾಚಾರ್ಯರ ಕುರಿತಾದ ವೀಡಿಯೋ ದಾಖಲೀಕರಣವನ್ನು ಪ್ರದರ್ಶಿಸಲಾಯಿತು.