ಪುತ್ತೂರು: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಸ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಮ್ಮ ದೇಶದ ಸೈನಿಕರಿಗೆ ಶಕ್ತಿ ತುಂಬಲು ಹಾಗೂ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮಸೀದಿಗಳಲ್ಲಿ ಮೇ.9 ಶುಕ್ರವಾರದ ಜುಮಾ ನಮಾಜಿನ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮುಂಡೂರು ಅಬೂಬಕ್ಕರ್ ಸಿದ್ದೀಕ್ ಮಸೀದಿಯಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ದೇಶದ ಸೈನಿಕರ ಜೊತೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸಾರಲಾಯಿತು. ಸ್ಥಳೀಯ ಖತೀಬ್ ಆಸಿಫ್ ಫೈಝಿ ಪ್ರಾರ್ಥನೆ ನೆರವೇರಿಸಿದರು. ಮಸೀದಿಯ ಅಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಂಡ ನಮ್ಮ ಭಾರತದಲ್ಲಿ ನಾವೆಲ್ಲರೂ ಸಹೋದರರಂತೆ ಬಾಳಬೇಕು, ಪಾಕಿಸ್ತಾನ ವಿರುದ್ಧದ ಯುದ್ದ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರಿಗೆ ಯಾವುದೇ ಹಾನಿಯಾಗದೇ ಸುರಕ್ಷಿತವಾಗಿರಲಿ, ದೇಶದ ಜನತೆ ಒಗ್ಗಟ್ಟಾಗಿದ್ದುಕೊಂಡು ವಿರೋಧಿ ದೇಶವಾದ ಪಾಕಿಸ್ತಾನದ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಮಾಅತರು ಉಪಸ್ಥಿತರಿದ್ದರು.