ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮುತುವರ್ಜಿ ವಹಿಸಬೆಕು: ಶಾಸಕ ಅಶೋಕ್ ರೈ
ಪುತ್ತೂರು: ಎಸ್.ಎಸ್.ಎಲ್.ಸಿಯು ಪ್ರತಿಯೊಬ್ಬ ವಿದ್ಯಾರ್ಥಿಯ ಮೊದಲ ನಿರ್ಣಾಯಕ ಘಟ್ಟವಾಗಿದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕವು ವಿದ್ಯಾರ್ಥಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ, ಬಳಿಕ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿ ಪದವಿ ಪರೀಕ್ಷೆ ಮುಗಿಸುವುದರ ಒಳಗಾಗಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಶಾಸಕರ ಭವನದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರತೀಯೊಬ್ಬ ವಿದ್ಯಾರ್ಥಿಯೂ ತಾನು ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಬೇಕು ಎಂಬ ಕನಸು ಕಾಣಬೇಕು, ಕನಸು ಅಥವಾ ದೃಡ ನಿರ್ಧಾರ ಇಲ್ಲದೆ ಯಾವುದನ್ನೂ ಮಾಡಲು ಸಾಧ್ಯವಿಲ್ಲ. ಈ ಬಾರಿಯ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಪುತ್ತೂರಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಜಿಲ್ಲೆಯಲ್ಲೇ ಪುತ್ತೂರು ತಾಲೂಕು ಪ್ರಥಮ ಸ್ಥಾನ ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಪಿಯುಸಿ ಮುಗಿದ ತಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗಿ
ಪಿಯುಸಿ ಪರಿಕ್ಷೆ ಮುಗಿದ ತಕ್ಷಣವೇ ಐಎಎಸ್ ಮತ್ತು ಐಪಿಎಸ್ ಪರೀಕ್ಷೆ ಬರೆಯಲು ಸಿದ್ದತೆ ಮಾಡಬೇಕು. ಪಿಯುಸಿ ಬಳಿಕ ಪರೀಕ್ಷೆ ಬರೆಯಲು ಪ್ರಾರಂಭ ಮಾಡಿದರೆ ಪದವಿ ಮುಗಿಯುವ ವೇಳೆ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ಣ ಮಾಹಿತಿಯನ್ನು ಪಡೆದುಕೊಂಡಂತಾಗುತ್ತದೆ ಇದರಿಂದ ನಿಮಗೆ ಸುಲಭದಲ್ಲಿ ಐಎಎಸ್ ಪರಿಕ್ಷೆಯನ್ನು ಎದುರಿಸಲು ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಶಾಸಕರು ಮಕ್ಕಳ ಕಲಿಕೆಗೆ ಸೂಕ್ತ ವಾತಾವರಣವನ್ನು ಕಲ್ಪಿಸಬೆಕಾದ್ದು ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಸನ್ಮಾನ
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಉಪ್ಪಿನಂಗಡಿ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಲೋಹಿತ್ ವೆಂಕಪ್ಪ ಮನಕಟ್ಟಿ, ಮಣಿಲ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶೈನಾಲಿಷಾ ಮೊಂತೆರೋ, ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯ ಆವಂತಿ ಶರ್ಮ, ಶಾಂತಿನಗರ ಸರಕಾರಿ ಪ್ರೌಢ ಶಾಲೆಯ ಟಿ ಪೂಜಾ, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಚಿನ್ಮಯ್ ಎಸ್, ಪ್ರಜ್ಞಾ ನಿಡ್ವಣ್ಣಾಯ, ಮಾನ್ಯ, ಶ್ರೀಜಿತ್, ಸಮನ್ವಿತಾ, , ಶ್ರೀರಾಮಕೃಷ್ಣ ಪ್ರೌಡ ಶಾಲೆಯ ವಿದ್ಯಾರ್ಥಿಗಳಾದ ಗಗನ್, ನಿಶ್ಮಿತಾ, ಉಪ್ಪಿನಂಗಡಿ ಇಂದ್ರಪಸ್ತ ಶಾಲೆಯ ವಿದ್ಯಾರ್ಥಿ ನಿಹಾಲ್ ಎಚ್ ಶೆಟ್ಟಿ ಅವರನ್ನು ಸಾಸಕರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಸ್ವಾಗತಿಸಿದರು. ಕಚೇರಿ ಸಿಬಂದಿಗಳಾದ ಜುನೈದ್ ಬಡಗನ್ನೂರು, ರಚನಾ ರವರು ಕಾರ್ಯಕ್ರಮ ನಿರೂಪಿಸಿದರು. ಶಾಸಕರ ಪಿ ಎ ರಂಜಿತ್ ವಂದಿಸಿದರು.