ಪುತ್ತೂರು: ಗುಲಾಬಿ ಎನ್ ಶೆಟ್ಟಿ ಕಂಪ ಅವರು ಓರ್ವ ಆದರ್ಶ ಮಹಿಳೆಯಾಗಿ ಜೀವಿಸಿ ನಮ್ಮಿಂದ ಮರೆಯಾಗಿದ್ದು ಅವರ ಅಗಲುವಿಕೆ ಸಮಾಜಕ್ಕೆ ದೊಡ್ಡ ನಷ್ಟ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಮೇ.26ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಾರ್ಯಬೀಡು ಗುಲಾಬಿ ಎನ್ ಶೆಟ್ಟಿ ಕಂಪ ಅವರ ಉತ್ತರಕ್ರಿಯೆ, ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಗುಲಾಬಿ ಶೆಟ್ಟಿ ಅವರ ಪತಿ, ಮಾಜಿ ಮಂಡಲ ಪ್ರಧಾನರಾಗಿದ್ದ ಕಂಪ ದಿ.ನಾರಾಯಣ ಶೆಟ್ಟಿ ಅವರು ಸಮಾಜಮುಖಿಯಾಗಿ, ಜನಸೇವಕರಾಗಿ ಹೆಸರು ಪಡೆದಿದ್ದರು, ಅವರ ಕುಟುಂಬಕ್ಕೆ ತನ್ನದೇ ಆದ ಹಿನ್ನೆಲೆ ಇದೆ ಎಂದ ಅವರು ಸಹಕಾರ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಗುಲಾಬಿ ಶೆಟ್ಟಿವರು ಇನ್ನಷ್ಟು ದಿನ ಜೀವಿಸಬೇಕಿತ್ತು ಎಂಬುವುದು ನಮ್ಮೆಲ್ಲರ ಅಪೇಕ್ಷೆಯಾದರೂ ವಿಧಿಯ ಮುಂದೆ ನಾವು ತಲೆಬಾಗಲೇಬೇಕಾಗಿದೆ, ಗುಲಾಬಿ ಶೆಟ್ಟಿ ಅವರ ಅಗಲುವಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಅವರ ಮಕ್ಕಳಿಗೂ, ಕುಟುಂಬ ವರ್ಗಕ್ಕೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.

ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ-ಬಾಲಕೃಷ್ಣ ಕಣ್ಣಾರಾಯ
ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕಣ್ಣಾರಾಯ ಬನೇರಿ ಮಾತನಾಡಿ ಗುಲಾಬಿ ಎನ್ ಶೆಟ್ಟಿಯವರು ಎಲ್ಲರಿಗೂ ಮಾದರಿಯಾದ ಜೀವನ ನಡೆಸಿ ನಮ್ಮನ್ನಗಲಿದ್ದು ಅವರ ನಡೆನುಡಿ, ಕೊಡುಗೆಗಳು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದರು. ತನ್ನ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡಿದ್ದ ಅವರು ತನ್ನ ದಿನಚರಿ ಮತ್ತು ವ್ಯಾವಹಾರಿಕವಾದ ವಿಚಾರಗಳೆಲ್ಲವನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು, ಇದರಿಂದ ಅವರ ಶಿಸ್ತುಬದ್ದ ಜೀವನ ಮತ್ತು ದೂರದೃಷ್ಟಿ ಚಿಂತನೆಯ ಬಗ್ಗೆ ನಾವು ತಿಳಿಯಬಹುದಾಗಿದೆ ಎಂದು ಹೇಳಿದರು. ಮುಂಡೂರು ಶಾಲೆಗೆ ಕಲಿಕಾ ಕುಟೀರವೊಂದನ್ನು ಕೊಡುಗೆಯಾಗಿ ನೀಡಿದ್ದ ಗುಲಾಬಿ ಎನ್ ಶೆಟ್ಟಿಯವರು ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದರು, ಇಂದು ಇಲ್ಲಿ ಇಷ್ಟು ಸಂಖ್ಯೆಯಲ್ಲಿ ಜನ ಸೇರಿರುವುದೇ ಅವರ ಜನಪ್ರಿಯತೆಗೆ ಸಾಕ್ಷಿ ಎಂದು ಅವರು ಹೇಳಿದರು.
ಬಡವರ ಬಗ್ಗೆ ಕಾಳಜಿ ಹೊಂದಿದ್ದರು-ಸುರೇಶ್ ಕುಮಾರ್
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ನಮ್ಮನ್ನಗಲಿರುವ ಗುಲಾಬಿ ಎನ್ ಶೆಟ್ಟಿಯವರು ಓರ್ವ ಆದರ್ಶ ಮಹಿಳೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು, ಬಡವರ ಬಗ್ಗೆ ಕಾಳಜಿ ಹೊಂದಿದ್ದ ಅವರು ತನ್ನ ಪತಿ ಕಂಪ ದಿ.ನಾರಾಯಣ ಶೆಟ್ಟಿಯವರ ಹಾದಿಯಲ್ಲೇ ಮುನ್ನಡೆಯುತ್ತಿದ್ದರು ಎಂದು ಹೇಳಿದರು.
ತಾನು ನಿರ್ದೇಶಕಿಯಾಗಿದ್ದ ಮುಂಡೂರು ಸೊಸೈಟಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಸೊಸೈಟಿಯ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು, ಸರಳ ಸಜ್ಜನಿಕೆಯ ಅವರ ಜೀವನ ನಮಗೆಲ್ಲಾ ಮಾದರಿಯಾಗಿದೆ ಎಂದು ಅವರು ಹೇಳಿದರು.
ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಹಿತ ನೂರಾರು ಮಂದಿ ಭಾಗವಹಿಸಿದ್ದರು.
ಗುಲಾಬಿ ಎನ್ ಶೆಟ್ಟಿ ಕಂಪ ಅವರ ಪುತ್ರಿಯರಾದ ರೇಷ್ಮಾ ಚಂದ್ರಶೇಖರ್ ಶೆಟ್ಟಿ, ಸುಷ್ಮಾ ದಾಮೋದರ್ ರೈ, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಾರ್ಯಬೀಡು ಕುಟುಂಬಸ್ಥರು ಉಪಸ್ಥಿತರಿದ್ದರು.
