ಅತೂರು: ಮಾರುತಿ ಕಾರಿಗೆ ಬಿದ್ದ ಬೃಹತ್‌ ಗಾತ್ರದ ಮರ-ಕಾರು ಜಖಂ – ಪ್ರಾಣಪಾಯದಿಂದ ಪಾರು

0

ರಾಮಕುಂಜ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಬೃಹತ್ ಗಾತ್ರದ ಮಾವಿನ ಮರವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ-800 ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡ ಘಟನೆ ಮೇ.26ರಂದು ಸಂಜೆ ನಡೆದಿದೆ. ಕಾರಿನಲ್ಲಿದ್ದ ಮೂವರು ಅಪಾಯದ ಅರಿವು ಆಗುತ್ತಿದ್ದಂತೆ ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಅಬ್ದುಲ್ ಸಲೀ ತನ್ನ ಕಾರನ್ನು ಆತೂರಿನಲ್ಲಿ ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು. ಅದರೊಳಗೆ ಅಬ್ದುಲ್ ರಹಿಮಾನ್, ರಮ್ಲಾನ್, ಅಬ್ಬಾಸ್ ಎಂಬವರು ಕುಳಿತು ಮಾತನಾಡಿಕೊಂಡಿದ್ದರು. ಅಷ್ಟರಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಮಾವಿನ ಮರ ವಾಲತೊಡಗುವುದನ್ನು ಗಮನಿಸಿದ ಇವರುಗಳು ಅದರಿಂದ ಇಳಿದು ಓಡಿ ಹೋಗಿ ಪ್ರಾಣ ರಕ್ಷಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂಜೆ ಬೀಸಿದ ಗಾಳಿ ಮಳೆಗೆ ಮಾವಿನ ಮರ ಬುಡ ಸಮೇತ ನೆರಕ್ಕುರುಳಿ ಬಿದ್ದಿದ್ದು 100 ಮೀಟರ್ ದೂರದ ತನಕ ರಸ್ತೆಯಲ್ಲಿ ವಿಸ್ತಾರವಾಗಿ ಬಿದ್ದುಕೊಂಡಿತ್ತು. ಸ್ಥಳೀಯ ಯುವಕರು ಮರ ತುಂಡರಿಸುವ ಯಂತ್ರ ತಂದು ಮರ ತುಂಡರಿಸಿ ತೆರವುಗೊಳಿಸಿದರು. ಬಳಿಕ ಕಾರಿನ ಮೇಲೆ ಇದ್ದ ಮರವನ್ನು ಜೆಸಿಬಿ ಯಂತ್ರದ ಮೂಲಕ ತೆಗೆಯಲಾಯಿತು.


ನೆಕ್ಕರೆ, ಕುಂಡಾಜೆಯಲ್ಲಿಯೂ ಮರ ಬಿದ್ದು ಹಾನಿ:
ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಮರವೊಂದು ಬಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ರಾಮಕುಂಜ ಗ್ರಾಮದ ಕುಂಡಾಜೆ ಎಂಬಲ್ಲಿ ಮನೆಯೊಂದರ ಮೇಲೆ ಮರ ಬಿದ್ದಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here