ನೆಲ್ಯಾಡಿ: ಇಲ್ಲಿನ ಬೆಥನಿ-ಪಡಡ್ಕ ಜಿ.ಪಂ.ರಸ್ತೆಯ ಪಾಲೆತ್ತಾಡಿ ಎಂಬಲ್ಲಿ ಚರಂಡಿಗೆ ಅಳವಡಿಸಿದ್ದ ಮೋರಿ ಬಂದ್ ಮಾಡಿರುವುದರಿಂದ ಮಳೆ ನೀರು ಪಕ್ಕದ ತೋಟಕ್ಕೆ ನುಗ್ಗಿರುವುದುರಿಂದ ತೋಟ ಜಲಾವೃತಗೊಂಡಿದೆ. ಆದ್ದರಿಂದ ಚರಂಡಿ ಬಂದ್ ಮಾಡಿರುವುದನ್ನು ತೆರವುಗೊಳಿಸಿಕೊಡುವಂತೆ ಸ್ಥಳೀಯ ನಿವಾಸಿಗಳಾದ ಸೆಬಾಸ್ಟಿನ್ ಹಾಗೂ ಚಂದ್ರಾವತಿ ಎಂಬವರು ನೆಲ್ಯಾಡಿ ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ.
ಬೆಥನಿ-ಪಡಡ್ಕ ರಸ್ತೆಯ ಪಾಲೆತ್ತಾಡಿ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಅವರ ಜಾಗಕ್ಕೆ ಮಣ್ಣು ಹಾಕಿ ಎತ್ತರಿಸಿದ್ದು ಈ ವೇಳೆ ಚರಂಡಿಯ ಮೋರಿ ಬಂದ್ ಆಗಿದೆ. ಇದರಿಂದಾಗಿ ಚರಂಡಿ ನೀರು ಪಕ್ಕದ ಎಂಡೋ ಸಲ್ಫಾನ್ ಸಂತ್ರಸ್ತರೂ ಆಗಿರುವ ಸೆಬಾಸ್ಟಿನ್ ಹಾಗೂ ಚಂದ್ರಾವತಿ ಎಂಬವರ ತೋಟಕ್ಕೆ ನುಗ್ಗಿದೆ. ಇದರಿಂದಾಗಿ ತೋಟ ಜಲಾವೃತಗೊಂಡಿದ್ದು ಕಳೆದ ೮ ದಿನಗಳಿಂದ ತೋಟದಲ್ಲಿ ಸುಮಾರು 4 ಅಡಿಯಷ್ಟು ನೀರು ನಿಂತಿದೆ. ಇದರಿಂದ ಕೃಷಿ ನಾಶವಾಗುವ ಆತಂಕ ಎದುರಾಗಿದೆ. ಆದ್ದರಿಂದ ಚರಂಡಿ ಬಂದ್ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಬೇಕು ಎಂದು ಸೆಬಾಸ್ಟಿನ್ ಹಾಗೂ ಚಂದ್ರಾವತಿಯವರು ನೆಲ್ಯಾಡಿ ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ.

ಗ್ರಾ.ಪಂ.ನಿಯೋಗ ಭೇಟಿ:
ದೂರಿನ ಹಿನ್ನೆಲೆಯಲ್ಲಿ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಷ್ಮಾಶಶಿ, ಪಿಡಿಒ ಮೋಹನ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಉಷಾಜೋಯಿ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾ.ಪಂ.ವತಿಯಿಂದ ಚರಂಡಿ ತೆರವುಗೊಳಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.