ಪಂಚೋಡಿ-ಮಯ್ಯಾಳ ಸಂಪರ್ಕ ರಸ್ತೆ ಕೆಸರುಮಯ: ವಿದ್ಯಾರ್ಥಿಗಳ ಪರದಾಟ – ಶೀಘ್ರ ಬೇಕಿದೆ ಈ ಸಮಸ್ಯೆಗೆ ಮುಕ್ತಿ!

0

ಪುತ್ತೂರು: ಮಳೆ ಬಂತೆಂದರೆ ಸಾಕು ಡಾಂಬಾರೀಕರಣಗೊಂಡಿರುವ ರಸ್ತೆಗಳು ಹೊಂಡ ಬೀಳುತ್ತವೆ. ಇನ್ನು ಮಣ್ಣಿನ ರಸ್ತೆಗಳ ಕತೆ ಹೇಳಬೇಕೇ? ಅಯ್ಯೋ ದೇವರೇ, ಈ ಕೆಸರಲ್ಲಿ ಹೇಗೆ ಹೋಗೋದಪ್ಪಾ ಎಂದು ಹೇಳಿ ಪಾದಚಾರಿಗಳು ಅಲ್ಲೊಂದು ಪಾದ ಇಲ್ಲೊಂದು ಪಾದ ಇಟ್ಟುಕೊಂಡು ಮೆಲ್ಲನೆ ಹೋಗುತ್ತಾರೆ. ಕೆಲವರು ಜಾರಿ ಬೀಳುವುದೂ ಉಂಟು. ವಾಹನ ಸವಾರರ ಪಾಡು ಹೇಳಬೇಕೇ? ಬ್ರೇಕ್ ಹಾಕಲೂ ಭಯ, ಬ್ರೇಕ್ ಹಾಕಿದರೆ ವಾಹನ ಜಾರಲು ಪ್ರಾರಂಭವಾಗುತ್ತದೆ. ಇದು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿಯಿಂದ ಕುದ್ರೋಳಿ ಮಾರ್ಗವಾಗಿ ಮಯ್ಯಾಳಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಓಡಾಡುವ ಜನರು ಅನುಭವಿಸುತ್ತಿರುವ ಸಂಕಷ್ಟ. ಇದೇ ರಸ್ತೆಯ ಒಂದು ಕಡೆಯಲ್ಲಿ ಮಾತ್ರವಲ್ಲ, ರಸ್ತೆಯ ಉದ್ದಕ್ಕೆ ಇನ್ನೆರಡು ಕಡೆಗಳಲ್ಲಿಯೂ ಇಂತಹದ್ದೇ ಪರಿಸ್ಥಿತಿ.


ಪಂಚೋಡಿ-ಮಯ್ಯಾಳ ಸಂಪರ್ಕ ರಸ್ತೆಯು ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ಜಾರಿ ಬಿದ್ದರೆ ಬಟ್ಟೆ ಕೆಸರಾಗಿ ತರಗತಿಗಳು ತಪ್ಪುತ್ತೋ ಎಂಬ ಭಯದಲ್ಲೇ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದಾರೆ. ವಾಹನ ಸವಾರರು ಸಂಚಾರಕ್ಕೆ ಹರಸಾಹಸಪಡುತ್ತಾರೆ. ಜಾರಿ ಬಿದ್ದರೆ ಸೊಂಟ, ಕೈ ಅಥವಾ ಬೆನ್ನಿಗೆ ಗಾಯ ಅಥವಾ ಮೂಳೆ ಮುರಿತಕ್ಕೊಳಗಾಗಬಹುದು. ಇತ್ತೀಚೆಗೆ ಸುರಿದ ಮಳೆಗೆ ಈ ರಸ್ತೆಯಲ್ಲಿ ಹೋಗುವಾಗ ಕೆಲವರು ಕೆಸರಿನಲ್ಲಿ ಜಾರಿ ಬಿದ್ದ ಸಂಭವವೂ ಇದೆ.

ಇದು ಗಡಿ ಪ್ರದೇಶವಾದ ಕಾರಣ ದೇಲಂಪಾಡಿಯಿಂದ ಪಂಚೋಡಿ ಮಾರ್ಗವಾಗಿ ಈಶ್ವರಮಂಗಲಕ್ಕೆ ಹೋಗುವ ವಾಹನಗಳಿಗೆ ಸುಸಜ್ಜಿತವಾದ ರಸ್ತೆ ಮಾರ್ಗವಿಲ್ಲ. ಇರುವ ರಸ್ತೆಯ ಅವಸ್ಥೆಯೂ ಹೀಗೆ.
ಈ ಹಿಂದೆ ಅನೇಕ ಕಡೆಗಳಲ್ಲಿ ರಸ್ತೆಗಳು ಮಳೆಗಾಲದಲ್ಲಿ ಕೆಸರುಮಯವಾಗುತ್ತಿದ್ದದ್ದನ್ನು ಗುರುತಿಸಿ 100 ಮೀ.ಗಳಂತೆ ಕಾಂಕ್ರೀಟ್ ರಸ್ತೆಗಳನ್ನು ಮಾಡಲಾಗಿದೆ. ಇದೀಗ ಪಂಚೋಡಿಯಲ್ಲಿ ಮಳೆ ಬಂದರೆ ರಸ್ತೆಯಲ್ಲಿ ಕೆಸರು ತುಂಬುತ್ತದೆ. ಸಾರ್ವಜನಿಕರ ಈ ಸಂಕಷ್ಟಕ್ಕೆ ಮುಕ್ತಿ ಇದೆಯೇ?. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗ್ಗೆ ಗಮನಹರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆನ್ನುವುದೇ ಸಾರ್ವಜನಿಕರ ಅಭಿಪ್ರಾಯ.

LEAVE A REPLY

Please enter your comment!
Please enter your name here