ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ-ಪೋಷಕರ ಸಮಾವೇಶ “ವಿವೇಕ ಸಂಕಲ್ಪ-2025” ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ ವಹಿಸಿದರು. ಪೋಷಕರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವಿದ್ಯಾರ್ಥಿ ಜೀವನದ ನಿರ್ಣಾಯಕ ಹಂತ ಎಂದರೆ ಪಿಯುಸಿ ವಿದ್ಯಾಭ್ಯಾಸ. ಹಾಗಾಗಿ ವಿದ್ಯಾರ್ಥಿಗಳು ಇದನ್ನು ಒಂದು ವ್ರತದಂತೆ ಸ್ವೀಕರಿಸಬೇಕು. ಈ ಸಂಸ್ಥೆಗೆ ಸಮಾಜದ ವಿವಿಧ ಸ್ತರಗಳ ವಿದ್ಯಾರ್ಥಿಗಳು ಪ್ರವೇಶವನ್ನು ಬಯಸುತ್ತಾರೆ. ಎಲ್ಲರನ್ನೂ ಸಮಾನವಾಗಿ ಸ್ವೀಕರಿಸಿ, ಸಮಾಜದಲ್ಲಿ ಗೌರವಯುತವಾಗಿ ಬಾಳಲು ಅವಶ್ಯಕತೆ ಇರುವ ಸರ್ವಗುಣ ಸಂಪನ್ನ ವಿದ್ಯಾರ್ಥಿಗಳನ್ನಾಗಿ ರೂಪಿಸಿ ಸಮಾಜಕ್ಕೆ ನೀಡುವ ಧ್ಯೇಯವನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸುತ್ತಾ, ತಮ್ಮ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ವಿವೇಕಾನಂದ ವಿದ್ಯಾಸಂಸ್ಥೆಯನ್ನು ಆರಿಸಿಕೊಂಡದ್ದಕ್ಕಾಗಿ ಹೆತ್ತವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಪೋಷಕರ ಸಭೆಯುಎರಡು ಹಂತಗಳಲ್ಲಿನಡೆಯಿತು. ಪ್ರಥಮ ಹಂತದಲ್ಲಿ ಸ್ಥಳೀಯ ವಿದ್ಯಾರ್ಥಿ-ಪೋಷಕರ ಸಮಾವೇಶ ಹಾಗೂ ದ್ವಿತೀಯ ಹಂತದಲ್ಲಿ ವಸತಿನಿಲಯ ವಿದ್ಯಾರ್ಥಿ-ಪೋಷಕರ ಸಮಾವೇಶ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎಂ.ದೇವಿಚರಣ್ ರೈ ಕಾಲೇಜಿನ ದೈನಂದಿನ ಚಟುವಟಿಕೆಗಳ ಕುರಿತು, ಕಾಲೇಜು ಗಳಿಸಿದ ಫಲಿತಾಂಶ,ಒಟ್ಟು ತರಗತಿ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರೆ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಹರೀಶ ಶಾಸ್ತ್ರಿ. ಬಿ ಇವರು ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಸ್ತು , ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೌಲಭ್ಯಗಳು, ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳಬೇಕಾದ ರೀತಿ, ಬಡ ವಿದ್ಯಾರ್ಥಿಗಳಿಗಾಗಿ ಇರುವ ಉಚಿತ ಭೋಜನ ವ್ಯವಸ್ಥೆ, ವಿದ್ಯಾನಿಧಿ ಈ ಮೊದಲಾದ ವಿಚಾರಗಳ ಕುರಿತು ಹೆತ್ತವರಿಗೆ ಮಾಹಿತಿ ನೀಡಿದರು. ಕಾಲೇಜಿನಲ್ಲಿ ಲಭ್ಯವಿರುವ ಜೆ.ಇ.ಇ, ಕೆ.ಸಿ.ಇ.ಟಿ, ನೀಟ್ ಪ್ರವೇಶ ಪರೀಕ್ಷೆಗಳ ತರಬೇತಿಯ ಮಾಹಿತಿಗಳನ್ನು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಭೀಮ ಭಾರಧ್ವಾಜ್ ನೀಡಿದರು. ದ್ವಿತೀಯ ಅವಧಿಯಲ್ಲಿ ವಸತಿನಿಲಯದ ಮುಖ್ಯ ನಿಯಮಪಾಲಕರಾದ ಚೇತನ್ ವಸತಿನಿಲಯದ ನಿಯಮಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಇಂದಿರಾ ಬಿ.ಕೆ, ವಸತಿ ನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪ್ರಭು, ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
ಸರಸ್ವತೀವಂದನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಪ್ರಥಮ ಅವಧಿಯಲ್ಲಿ ಆಂಗ್ಲಭಾಷಾ ವಿಭಾಗದ ಉಪನ್ಯಾಸಕರಾದ ಪಿ.ಕೆ ಪರಮೇಶ್ವರ ಶರ್ಮ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಿತಾ ಬಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಪಿ ನಿರೂಪಿಸಿದರು. ದ್ವಿತೀಯ ಅವಧಿಯಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ| ಸ್ನೇಹಾ ಬಿ ಎಸ್ ಸ್ವಾಗತಿಸಿ, ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ| ಶೃತಿ ಎಂ. ಎಸ್ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ದಯಾಮಣಿ ಬಿ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.