ಪುತ್ತೂರು: ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಪೂರ್ಣ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಸಾಮರ್ಥ್ಯ ಪರೀಕ್ಷೆ (aptitude) ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯ ಸಭಾಂಗಣದಲ್ಲಿ ಜೂ.1ರಂದು ನಡೆಯಿತು.
NEET, JEE ಮತ್ತು CA ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ದೀರ್ಘಾವಧಿಯ ಆಕಾಂಕ್ಷಿಗಳನ್ನು ಬೆಂಬಲಿಸುವಲ್ಲಿ ಕೇಂದ್ರೀಕೃತವಾಗಿರುವ ಈ ಪರೀಕ್ಷೆಯಲ್ಲಿ 23 ವಿದ್ಯಾರ್ಥಿಗಳು ಎದುರಿಸಿದ್ದರು. ಫೌಂಡೇಶನ್ನ ಉಪಾಧ್ಯಕ್ಷರಾದ ಅಬ್ದುಲ್ಲಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸಮಾಲೋಚಕಿ ಡಾ.ವಾಜಿದಾ ಬಾನು ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ತಮ್ಮ ಶೈಕ್ಷಣಿಕ ಗುರಿಗಳನ್ನು ಸಮರ್ಪಣಾ ಮನೋಭಾವದಿಂದ ಮತ್ತು ದೂರದೃಷ್ಟಿಯಿಂದ ಮುಂದುವರಿಸಲು ಪ್ರೇರೇಪಿಸಿದರು. ಫೌಂಡೇಷನ್ ಇಂತಹ ವಿಭಿನ್ನ ಯೋಜನೆಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಕಲಿಕೆಗೆ ಮತ್ತು ಅವರ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.