ಪುತ್ತೂರು: ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುರಿ ಇರುತ್ತದೆ, ಅದನ್ನು ತಲುಪುವಲ್ಲಿ ಅಪಾರವಾದ ಶ್ರದ್ಧೆ ಮತ್ತು ಅವಿರತವಾದ ಶ್ರಮದ ಆವಶ್ಯಕತೆ ಇದೆ ಎಂದು ಎಸ್ಎಪಿ ಲ್ಯಾಬ್ ಇಂಡಿಯಾ ಇದರ ಡೆವೆಲಪ್ಮೆಂಟ್ ಎಕ್ಸ್ಪರ್ಟ್ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿನಿ ನಿವೇದಿತಾ ಕಾಮತ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಸಮಾಜ ನಿಮ್ಮನ್ನು ಪರೀಕ್ಷಿಸುತ್ತಲೇ ಇರುತ್ತದೆ. ಅಲ್ಲಿ ನೀವು ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳಬೇಕಾದರೆ ಹೊಸತನ್ನು ಕಲಿಯುತ್ತಲೇ ಇರಬೇಕು ಎಂದರು. ಕೇವಲ ಹಣದ ಹಿಂದೆ ಹೋಗುವುದಲ್ಲ, ಗಳಿಕೆಯ ಜತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ ಕೆ ಮಾತನಾಡಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯದ ಅರಿವಿರಬೇಕು. ಸಮಾಜವನ್ನು ಎದುರಿಸಿ ನಿಲ್ಲುವ ಛಾತಿ ಇರಬೇಕು ಇದರಿಂದ ಮಾತ್ರ ಉನ್ನತಿಯನ್ನು ಸಾಧಿಸಬಹುದು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಮಾತನಾಡಿ ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಯೊಂಡು ವಿಷಯದಲ್ಲಿಯೂ ಸಾಕಷ್ಟು ಸವಾಲುಗಳಿವೆ. ಉತ್ತಮ ಸಾಧನೆಯನ್ನು ಮತ್ತು ನಡವಳಿಕೆಯನ್ನು ಹೊಂದುವುದರಿಂದ ಸಮಾಜದಲ್ಲಿ ಇತರರು ನಿಮ್ಮನ್ನು ಗುರುತಿಸುವಂತಾಗುತ್ತದೆ ಎಂದರು. ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಮಾತಾ ಪಿತರು, ಗುರುಗಳು, ವಿದ್ಯಾಸಂಸ್ಥೆಗಳು ಹಾಗೂ ಇತರರನ್ನು ನೋಯಿಸದೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ವಾರ್ಷಿಕಾಂಕ ಅಂಕುರಂ ನ್ನು ಅತಿಥಿಗಳು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಇದರ ಸಂಪಾದಕ ಪ್ರೊ.ಸುದರ್ಶನ್.ಎಂ.ಎಲ್, ಸಹ ಸಂಪಾದಕಿ ಡಾ.ಶ್ವೇತಾಂಬಿಕಾ.ಪಿ ಅಂಕುರಂನ ವಿಶೇಷತೆಗಳನ್ನು ಹಂಚಿಕೊಂಡರು. ಕಾಲೇಜಿನಿಂದ ಬೀಳ್ಕೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ, ನಿರ್ದೇಶಕಿ ವಿದ್ಯಾ.ಆರ್.ಗೌರಿ, ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ, ನೇಮಕಾತಿ ಮತ್ತು ತರಬೇತಿ ವಿಭಾಗದ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ವಿಭಾಗ ಮುಖ್ಯಸ್ಥರಾದ ಡಾ.ಮನುಜೇಶ್.ಬಿ.ಜೆ, ಡಾ.ಶ್ರೀಕಾಂತ್ ರಾವ್. ಎಸ್.ಕೆ, ಡಾ.ಗೋವಿಂದರಾಜ್.ಪಿ, ಪ್ರೊ.ಪ್ರಶಾಂತ, ಪ್ರೊ.ರೂಪ.ಜಿ.ಕೆ, ಪ್ರೊ.ಪ್ರದೀಪ್ ಕುಮಾರ್.ಕೆ.ಜಿ, ಪ್ರೊ.ರಮಾನಂದ್ ಕಾಮತ್, ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮತ್ತು ಮುಖ್ಯ ಗ್ರಂಥಪಾಲಕ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ, ಡಾ.ಶ್ರೀಕಾಂತ್ ರಾವ್.ಎಸ್.ಕೆ ವಂದಿಸಿದರು. ಶ್ರೀನಿವಾಸ್ ಹೆಗ್ಡೆ ಮತ್ತು ಸಂಜನಾ ಹರ್ಪಳ ಕಾರ್ಯಕ್ರಮ ನಿರ್ವಹಿಸಿದರು.