ಪುತ್ತೂರು: ಮಳೆ ಹಾನಿ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಪಂಚಾಯತ್ ನಲ್ಲಿ ಹಣದ ಕೊರತೆ ಇಲ್ಲ. ತಹಶೀಲ್ದಾರ್ ವ್ಯಾಪ್ತಿಯಲ್ಲಿ 30 ಲಕ್ಷ, ಡಿ ಸಿ ಕಚೇರಿಯಲ್ಲಿ 24 ಕೋಟಿ ಹಣ ಇದೆ. ಹಾಗಾಗಿ ಮಳೆ ಹಾನಿ ವರದಿ ಮಾಡುವಾಗ ಸರಿಯಾಗಿ ವರದಿ ಮಾಡಿ ತಪ್ಪು ವರದಿ ಮಾಡಿದರೆ ಆ ಮನೆಯಲ್ಲಿ ನೀವೆ ಕೂತುಕೊಳ್ಳಿ ಎಂದು ವಿ.ಎ ಗಳಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.
ಮಳೆ ಹಾನಿ ಮತ್ತು ಪ್ರಾಕೃತಿಕ ವಿಕೋಪ ಕುರಿತು ಜೂ.2 ರಂದು ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ತಿಳಿಸಿದರು. ವರದಿ ಮಾಡುವಾಗ ಮೊಸರಲ್ಲಿಕಲ್ಲು ಹುಡುಕುವ ಕೆಲಸ ಮಾಡಬೇಡಿ. ಭಾಗಶಃ ಎಂದು ವರದಿ ಮಾಡಬೇಡಿ. ಸರಿಯಾದ ವರದಿ ಮಾಡಿ. ಇದರ ಜೊತೆಗೆ ಅಡಿಕೆ ಮರ ಎಷ್ಟು ಹಾನಿ ಆಗಿದೆ ಎಂದು ವರದಿ ಮಾಡಿ ಎಂದು ಸೂಚನೆ ನೀಡಿದರು. ಪರಿಹಾರಕ್ಕೆ ಹೆಚ್ಚಿನ ಅನುದಾನ ಬೇಕಾದರೆ ತಿಳಿಸಿ ಎಂದ ಅವರು ಮನೆ ಹಾನಿಗೆ ಸಂಬಂಧಿಸಿ ವರ್ಗ ಜಾಗದಲ್ಲಿ ಬರೆ ಕುಸಿತ ತೆರವಿಗೆ ನಾವು ಏನು ಮಾಡಲು ಆಗುವುದಿಲ್ಲ. ಮನೆ ಸ್ಲಾಬ್ ಬಿರುಕು ಬಿಟ್ಟರೆ, ಅಡಿಪಾಯಕ್ಕೆ ಹಾನಿಯಾದರೆ ಮನೆ ವಾಸಕ್ಕೆ ಯೋಗ್ಯವಲ್ಲ ಎಂದು ಪೂರ್ಣ ಹಾನಿ ವರದಿ ಮಾಡಿ ಎಂದರು. ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗಿಸ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ, ಪ್ರಭಾರ ತಹಶೀಲ್ದಾರ್ ನಾಗರಾಜ್ ಸಹಿತ ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.