ಪುಣ್ಚಪ್ಪಾಡಿ: ಕಲಿಕಾ ಸಿಂಹಾಸನದಲ್ಲಿ ಕುಳ್ಳಿರಿಸಿ ಮಕ್ಕಳಿಗೆ ಸ್ವಾಗತ – ವಿನೂತನ ಶಾಲಾ ಆರಂಭೋತ್ಸವ 

0

ಸವಣೂರು: ಅಲ್ಲೊಂದು ಅದ್ಭುತವಾದ ಸಿಂಹಾಸನ. ಅಲ್ಲಿ ಹೊಸದಾಗಿ ಶಾಲೆಗೆ ಸೇರಿದ ಮಕ್ಕಳನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿ, ಅವರಿಗೆ ಆರತಿ ಬೆಳಗಿ, ತಿಲಕವನಿಟ್ಟು ಹೂಗುಚ್ಛ ನೀಡಿ ಮತ್ತೆ ಪಠ್ಯಪುಸ್ತಕ ನೀಡಿ ಸ್ವಾಗತಿಸುವ ದೃಶ್ಯ. ಮತ್ತೊಂದೆಡೆ ಸುಮಾರು 24 ಪುಟಗಳ ಪುತ್ತೂರಿನ ಶಿಕ್ಷಣ ವ್ಯವಸ್ಥೆ ಮತ್ತು ಸರಕಾರಿ ಶಾಲೆಗಳ ಶೈಕ್ಷಣಿಕ ಸೌಲಭ್ಯಗಳ ಮಾಹಿತಿಗಳನ್ನೊಳಗೊಂಡ ಶೈಕ್ಷಣಿಕ ಮಾಹಿತಿ ಕೈಪಿಡಿ ʼಸೇರೋಣ ಸರಕಾರಿ ಶಾಲೆಗೆʼ ಎಂಬ ಎಂಬ ವಿಶಿಷ್ಟ ಪುಸ್ತಕ ಬಿಡುಗಡೆ, ಇನ್ನೊಂದೆಡೆ ಸರ್ಕಾರಿ ಶೈಕ್ಷಣಿಕ ಸೌಲಭ್ಯಗಳ ಮಾಹಿತಿ. ಈ ದೃಶ್ಯ ಕಂಡು ಬಂದದ್ದು ಕಡಬ ತಾಲೂಕಿನ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಕಲಿಕಾರಥ, ಕಲಿಕಾ ಚೀಲ, ಪುಸ್ತಕ ಜೋಳಿಗೆ ಸ್ವಚ್ಛ ಕಲಿಕಾ ಆರಂಭ ಚಟುವಟಿಕೆಗಳೊಂದಿಗೆ ಶಾಲಾರಂಭೋತ್ಸವ ನಡೆಸಿದ ಪುಣ್ಚಪ್ಪಾಡಿ ಶಾಲೆ 2025 -26ನೇ ಸಾಲಿನಲ್ಲಿ ಕಲಿಕಾ ಸಿಂಹಾಸನೆಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಶಾಲಾ ಆರಂಭವನ್ನು ಆಚರಿಸಿತು. ಪುತ್ತೂರು ತಾಲೂಕಿನ ಶೈಕ್ಷಣಿಕ ಮಾಹಿತಿಗಳನ್ನೊಳಗೊಂಡ 24 ಪುಟಗಳ ಶೈಕ್ಷಣಿಕ ಮಾಹಿತಿ ಕೈಪಿಡಿ “ಸೇರೋಣ ಸರಕಾರಿ ಶಾಲೆಗೆʼ ಎಂಬ ಮಾಹಿತಿ ಕೈಬಿಡದೆ ಬಿಡುಗಡೆಗೊಳಿಸಿ ಪೋಷಕರಿಗೆ ಹಂಚಿ ಶೈಕ್ಷಣಿಕ ಮಾಹಿತಿ ನೀಡಲಾಯಿತು.

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪಿ.ಡಿ.ಕೃಷ್ಣಕುಮಾರ್ ರೈ ಅವರು, ಸರ್ವರೂ ಸುಶಿಕ್ಷಿತರಾಗಿ ಬೆಳೆಯುವಂತೆ ಮಾಡುವುದೇ ನಮ್ಮ ಜವಾಬ್ದಾರಿ ಎಂದು ಹೇಳಿದರು. ನಮ್ಮ ದೇಶದಲ್ಲಿ ಇಂದಿಗೂ ಕೂಡ ಬಹಳಷ್ಟು ಜನ ಬೇರೆ ಬೇರೆ ಕಾರಣಗಳಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರಾಥಮಿಕ ಹಂತದ ಶಿಕ್ಷಣವನ್ನು ಎಲ್ಲರಿಗೂ ಸಿಗುವಂತೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದ, ಗ್ರಾ ಪಂ ಅಧ್ಯಕ್ಷೆ ಸುಂದರಿ ಬಿ ಎಸ್, ಸರಕಾರಿ ಶಾಲೆಗಳು ಸರ್ವರಿಗೂ ಶಿಕ್ಷಣ ನೀಡುವಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸೌಲಭ್ಯಗಳ ಉಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು. ವಿನೂತನ ಶಾಲಾ ಪ್ರಾರಂಭೋತ್ಸವ ಆಚರಿಸಿದ ಪುಣ್ಚಪ್ಪಾಡಿ ಶಾಲೆ ನಮ್ಮ ಗ್ರಾಮದ ಹೆಮ್ಮೆ ಎಂದರು.

ಸವಣೂರು ಗ್ರಾ. ಪಂ. ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ, ನಮ್ಮ ಶಾಲೆಗಳು ಬೆಳೆದರೆ ಊರು ಅಭಿವೃದ್ಧಿ ಆದಂತೆ. ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲರಿಗೂ ಶುಭವಾಗಲಿ ಎಂದರು. ಎಸ್ ಡಿ ಎಂ ಸಿ ಅಧ್ಯಕ್ಷ ವಿಜಯ ಮಾತನಾಡಿ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಮೊದಲು ಮಕ್ಕಳ ಮೆರವಣಿಗೆಯನ್ನು ನಡೆಸಿ ಶಾಲೆಗೆ ನೂತನವಾಗಿ ದಾಖಲಾದ ವಿದ್ಯಾರ್ಥಿಗಳನ್ನು  ಆರತಿ ಬೆಳಗಿ ಶಾಲೆಗೆ ಸ್ವಾಗತಿಸಲಾಯಿತು.  ದಾನಿಗಳಾದ ಕೃಷ್ಣಕುಮಾರ್ ರೈ ಪಿ.ಡಿ , ಸುಹಾಸ್ ಕಾರಂತ್, ಹರೀಶ್ ಪಿ ತೋಟತ್ತಡ್ಕ, ಗಿರಿಶಂಕರ ಸುಲಾಯ, ವಿಜಯ ಕುಚ್ಚೆಜಾಲು ಇವರು ನೀಡಿದ ಲೇಖನ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು, ಅಂಗನವಾಡಿ ಕಾರ್ಯಕರ್ತೆ ಸೇಸಮ್ಮ, ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಗುರು ರಶ್ಮಿತಾ ನರಿಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶೋಭಾ ಕೆ ವಂದಿಸಿದರು.

LEAVE A REPLY

Please enter your comment!
Please enter your name here