ಉಪ್ಪಿನಂಗಡಿ: ಮುಂಬರುವ ಮುಂಗಾರು ಮಳೆಗಾಲದ ಸಮಯದಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪ ಎದುರಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ರಾಜೇಂದ್ರರವರ ಆದೇಶದಂತೆ ಈ ಬಾರಿಯೂ ಉಪ್ಪಿನಂಗಡಿಯಲ್ಲಿ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ರಚಿಸಲಾಗಿದೆ.
ಕಾರ್ಯಾಚರಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ 02 ರಬ್ಬರ್ ದೋಣಿ, 02 ಇಂಜಿನ್, ಲೈಪ್ ಜಾಕೆಟ್, ಲೈಪ್ ಬಾಯ್, ಆಸ್ಕ ಲೈಟ್, ಜನರೇಟರ್, ಮರ ಕತ್ತರಿಸುವ ಯಂತ್ರ ಸೇರಿದಂತೆ ಎಲ್ಲಾ ರಕ್ಷಾಣಾ ಸಲಕರಣೆಗಳನ್ನು ಉಪ್ಪಿನಂಗಡಿ ಉಪ ತಹಶೀಲ್ದಾರರಾದ ಚೆನ್ನಪ್ಪ ಗೌಡ ರವರು ಪರಿಶೀಲನೆ ನಡೆಸಿದರು.
ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ಸುಖಿತಾ.ಎ.ಶೆಟ್ಟಿ ರವರ ನೇತೃತ್ವದ ತಂಡದಲ್ಲಿ ಸೆಕ್ಷನ್ ಲೀಡರ್ ದಿನೇಶ್ ಬಿ., ಸಹಾಯಕ ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಗೃಹರಕ್ಷಕರಾದ ಸೋಮನಾಥ್, ವಸಂತ, ದೇವರಾಜ್, ಶಿಭುಜಾನ್, ಜುನೈದ್, ಸಮದ್ ಇರಲಿದ್ದಾರೆ
ಈ ತಂಡದಲ್ಲಿ ಎಲೇಕ್ಟ್ರೀಷಿಯನ್, ದೋಣಿ ಆಪರೇಟರ್, ಪ್ಲಂಬರ್, ಈಜುಗಾರರು, ಸಹಾಯಕರು, ಸೇರಿದಂತೆ 9 ಗೃಹರಕ್ಷಕರು ಇರುತ್ತಾರೆ. ಈ ತಂಡವು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಒಟ್ಟು 4 ತಿಂಗಳ ಕಾಲ ಉಪ್ಪಿನಂಗಡಿ ದೇವಾಲಯದ ಸ್ಥಾನ ಘಟ್ಟದ ಬಳಿ ದೋಣಿ ಸಹಿತ ರಕ್ಷಣಾ ಸಲಕರಣೆಯೊಂದಿಗೆ ಮೊಕ್ಕಂ ಇರಲಿದೆ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದರೆ ತೆರವುಗೊಳಿಸುವುದು,ನೆರೆ ಬಂದ ಸಮಯದಲ್ಲಿ ಸಾರ್ವಜನಿಕರ ಆಸ್ತಿ -ಪಾಸ್ತಿ ರಕ್ಷಣೆಗೆ ಮೊದಲ ಆದ್ಯತೆ ನೀಡಲಿದೆ.
ಈ ಪ್ರವಾಹ ರಕ್ಷಣಾ ತಂಡವು ಪುತ್ತೂರು ಸಹಾಯಕ ಆಯುಕ್ತರು/ತಹಶೀಲ್ದಾರರ ಅಧಿನದಲ್ಲಿದ್ದು ಉಪ್ಪಿನಂಗಡಿ ಉಪ ತಹಶೀಲ್ದಾರರಾದ ಚೆನ್ನಪ್ಪ ಗೌಡರವರು ಈ ಪ್ರವಾಹ ರಕ್ಷಣಾ ತಂಡದ ಉಸ್ತುವಾರಿ ವಹಿಸಿರುತ್ತಾರೆ. ಈ ತಂಡ ರಚನೆ ಸಂದರ್ಭದಲ್ಲಿ ಉಪ ತಹಶೀಲ್ದಾರರಾದ ಚೆನ್ನಪ್ಪ ಗೌಡ, ಉಪ್ಪಿನಂಗಡಿ ಪೋಲಿಸ್ ಠಾಣೆ ಸಹಾಯಕ ಪೋಲಿಸ್ ಉಪ ನೀರಿಕ್ಷಕರಾದ ದೇವಪ್ಪ ಗೌಡ, ಉಪ್ಪಿನಂಗಡಿ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಜೀದ್, ಗ್ರಾಮ ಸಹಾಯಕ ಯತೀಶರಾದ ಉಪಸ್ಥಿತರಿದ್ದರು.