ಜೂ.6 ರಿಂದ 8ರ ತನಕ ಪುತ್ತೂರಿನಲ್ಲಿ ಮೇಳೈಸಲಿದೆ : 7ನೇ ವರ್ಷದ ಹಲಸು, ಹಣ್ಣುಗಳ ಮೇಳ

0

ವಿವಿಧ ಉತ್ಪನ್ನಗಳ ನೂರಕ್ಕೂ ಮಿಕ್ಕಿ ಮಳಿಗೆಗಳು
ಕವಿಗೋಷ್ಠಿ, ವೈವಿಧದ್ಯ ಹಲಸಿನ ಮೌಲ್ಯ ವರ್ಧನೆ
ವಿವಿಧ ಸ್ಪರ್ಧೆಗಳು, ಫುಡ್ ಕೌಂಟರ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹಲಸು ಮೇಳಗಳಲ್ಲಿ ಪುತ್ತೂರಿನ ಮೇಳಕ್ಕೆ ವಿಶೇಷತೆ ಇದೆ. ಈ ಬಾರಿ ಪುತ್ತೂರಿನಲ್ಲಿ ಏಳನೇ ವರುಷದ ಹಲಸು-ಹಣ್ಣು ಮೇಳವು ಜರುಗಲಿದೆ. ಪುತ್ತೂರು ಕಿಲ್ಲೆ ಮೈದಾನದಲ್ಲಿ ಜೂ.6 ರಿಂದ 8 ತನಕ ಮೇಳ ದಿನಪೂರ್ತಿ ಮೇಳವು ನಡೆಯಲಿದೆ.


ಪತ್ರಿಕಾಗೋಷ್ಠಿಯಲ್ಲಿ ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರು ಮಾತನಾಡಿ ನವತೇಜ ಟ್ರಸ್ಟ್ ಮತ್ತು ಅನ್ಯಾನ್ಯ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಈ ಹಲಸಿನ ಮೇಳಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಮರೆತ ಹಾಗೂ ಮರೆವಿನಂಚಿಲ್ಲಿರುವ ಪಾರಂಪರಿಕ ತಿಂಡಿಗಳನ್ನು ಸ್ಥಳದಲ್ಲೇ ತಯಾರಿಸುವ ಯೋಜನೆ ರೂಪಿಸಲಾಗಿದೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ ಎಂದವರು ಹೇಳಿದರು.


ನವತೇಜ ಟ್ರಸ್ಟ್‌ನ ಕಾರ್ಯದರ್ಶಿ ಸುಹಾಸ್ ಮರಿಕೆ ಅವರು ಮಾತನಾಡಿ ಜೂ.6ರಂದು ಬೆಳಿಗ್ಗೆ ಮಳಿಗೆಗಳ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ನೆರವೇರಿಸಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಪ್ರಗತಿಪರ ಕೃಷಿಕ ಮಹದೇವ ಶಾಸ್ತ್ರಿ ಮಣಿಲಾ ಉಪಸ್ಥಿತಿಯಲ್ಲಿರುತ್ತಾರೆ. ಸಂಜೆ ಗಂಟೆ ೪ಕ್ಕೆ ಮೇಳಗಳ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶ್ಯಾಮ್ ಜ್ಯುವೆಲ್ಸ್ ಗ್ರೂಪ್‌ನ ಸಿ.ಎಂ.ಡಿ ಕೇಶವಪ್ರಸಾದ್ ಮುಳಿಯ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 6 ರಿಂದ ಹಲವು ಹಣ್ಣುಗಳ ಕವಿಗೋಷ್ಠಿ ನಡೆಯಲಿದೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷೆ ವಹಿಸಲಿದ್ದಾರೆ. ಉಮಾಶಂಕರಿ ಎ.ಪಿ.ಮರಿಕೆ ಸಂಯೋಜಿಸಲಿದ್ದಾರೆ. ಜೂ.7ಕ್ಕೆ ಬೆಳಿಗ್ಗೆ ಗಂಟೆ 11ಕ್ಕೆ ಹಣ್ಣುಗಳ ಬೆಳೆಗಳ ಕುರಿತು ಮಾಹಿತಿ ಕಾರ್ಯಗಾರ ನಡೆಯಲಿದೆ.

ಗ್ರಾಮಜನ್ಯ ರೈತೋತ್ಪಾದಕ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಅವರು ಅಧ್ಯಕ್ಷತೆ ವಹಿಸಲಿದ್ದು, ಹಲಸಿನ ತೋಟ ಮತ್ತು ವ್ಯಾಪಾರ ಮಾಡುತ್ತಿರುವ ಹಾರ್ದಿಕ್ ಹರ್ಬಲ್ಸ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಮುರಳೀಧರ ಕೆ, ಹಲಸಿಗೆ ಮೌಲ್ಯ ವರ್ಧನೆ ಮಾಡುತ್ತಿರುವ ಶ್ರೀರಾಮ್ ಆಯಿಲ್ ಮಿಲ್‌ನ ಸಂತೋಷ ಬೋನಂತಾಯ, ವಿಶ್ವಾಸ್ ಹೋಂ ಪ್ರೊಡಕ್ಟ್‌ನ ವಿನಯ ಸೇಡಿಯಾಪು, ಕೃಷಿಕ ಶಿವಪ್ರಸಾದ್ ಪಟ್ಟೆ, ಹಣ್ಣುಗಳ ಕೃಷಿಕ ಚೇತನ್ ಶೆಟ್ಟಿಯವರು ತಮ್ಮ ವಿಚಾರ ಮಂಡನೆ ಮಾಡಲಿದ್ದಾರೆ. ಸಂಜೆ ಗಂಟೆ 4.30ರಿಂದ ವಿನೂತನ ತಾಳಮದ್ದಳೆ ಪನಸೋಪಾಖ್ಯಾನ ಎಂಬ ಹಲಸಿನ ಮೌಲ್ಯ ಮತ್ತು ಅರಿವಿನ ಹರಿವಿನ ಕಾಲ್ಪನಿಕ ಕಥಾನಕ ನಡೆಯಲಿದೆ. ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ವಿ.ಜಿ.ಭಟ್ ಅವರು ಪ್ರಸಂಗ ಬಿಡುಗಡೆ ಮಾಡಲಿದ್ದಾರೆ. ಜೂ. ೮ಕ್ಕೆ ಬೆಳಿಗ್ಗೆ ಗಂಟೆ ೧೧ಕ್ಕೆ ಹಲಸಿನ ಮೌಲ್ಯವರ್ಧನೆ ಕಾರ್ಯಾಗಾರ ನಡೆಯಲಿದೆ. ಸಮೃದ್ಧಿ ಗಿಡಗಳ ಸಂಘದ ಅಧ್ಯಕ್ಷ ಶಂಕರ ಸಾರಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಾಯಾರು ಕುರವೇರಿ ಕ್ಯಾಶ್ಯೂಸ್‌ನ ವಿಶ್ವಕೇಶವ ಮತ್ತು ನವ್ಯಶ್ರೀ ಕುರುವೇರಿ ಅವರು ಗೇರು ಬೀಜದ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.

ಅನುತ್ತಮ ಚಾಕೋಲೇಟ್ ಕುರಿತು ಬಾಲಸುಬ್ರಹ್ಮಣ್ಯ ಪಿ.ಎಸ್, ಜೇನು ಕೃಷಿಯ ಕುರಿತು ಶ್ಯಾಮ ಭಟ್ ವಾದ್ಯಕೋಡಿ, ಮುಜಂಟಿ ಜೇನು ಕೃಷಿಯ ಕುರಿತು ರಾಂದ್ರ ಪುದ್ಯೋಡು ಅವರು ಮಾಹಿತಿ ನೀಡಲಿದ್ದಾರೆ. ಸಂಜೆ ಗಂಟೆ ೪ಕ್ಕೆ ಸಮಾರೋಪ ಸಮಾರಂಭದಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ್ಪಿನಂಗಡಿಯ ಡಾ. ಸುಪ್ರಿತ್ ಲೋಬೋ ಅವರು ಸಮರೋಪ ಭಾಷಣ ಮಾಡಲಿದ್ದಾರೆ. ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೇ ವಿಜಯ ಹಾರ್ವಿನ್, ರೋಟರಿ ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣಮುಳಿಯ, ಜೆಕ್ಯಾಮ್ ಅಧ್ಯಕ್ಷ ಧೀರಜ್ ಬಿ ಉದ್ಯಾವರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದ್ವಾರಕಾ ಕಾರ್ಪೋರೇಶನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಅವರು ಶುಭ ಹಾರೈಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ ಖಂಡಿಗೆ, ಸೇಡಿಯಾಪು ಜನಾರ್ದನ ಭಟ್, ಸಾಂದೀಪನಿ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಜಯರಾಮ ಕೆದಿಲಾಯ, ವಿಟ್ಲ ಪಿಂಗಾರ ರೈತೋತ್ಪಾದಕ ಸಂಸ್ಥೆಯ ಅಧ್ಯಕ್ಷ ರಾಮ್ ಕಿಶೋರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಸಹಾಸ್ ಮರಿಕೆ ತಿಳಿಸಿದರು.


ನವನೀತ್ ನರ್ಸರಿಯ ವೇಣುಗೋಪಾಲ್ ಶಿಬಿರ ಅವರು ಮಾತನಾಡಿ ನಮ್ಮ ಊರಿನಲ್ಲಿ ಸ್ಥಳೀಯ ಮಟ್ಟದಲ್ಲಿನ ತೋಟಗಾರಿಕೆಯನ್ನು ಮತ್ತು ಯುವಕರ ಕೃಷಿ ಉದ್ದಿಮೆಗಳ ಪರಿಚಯ ಮಾಡುವ ನಿಟ್ಟಿನಲ್ಲಿ ಮೇಳ ನಡೆಯಲಿದೆ. ಮೇಳದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.


ವೈವಿಧ್ಯ ಹಣ್ಣುಗಳು :
ಹುಣಸೂರು, ಸಖರಾಯಪಟ್ಟ, ದೊಡ್ಡಬಳ್ಳಾಪುರದ ರುಚಿರುಚಿಯಾದ ಹಲಸಿನ ಹಣ್ಣುಗಳು ರುಚಿಪ್ರಿಯರ ನಾಲಗೆ ಗೆಲ್ಲಲಿದೆ. ಅಂತೆಯೇ ಬ್ರಹ್ಮಾವರ, ಚನ್ನಪಟ್ಟಣದಿಂದ ಉತ್ಕೃಷ್ಟ ಮಾವಿನ ಹಣ್ಣುಗಳು ಮೇಳಕ್ಕೆ ಬರಲಿದೆ. ಹಲಸು ಹಾಗೂ ಮಾವಿನ ಹಣ್ಣುಗಳನ್ನು ಕೃಷಿಕರೇ ಸ್ವತಃ ಬೆಳೆದು, ಮಾರುತ್ತಿರುವುದು ಮೇಳದ ಹೈಲೈಟ್ ಆಗಿದೆ ಎಂದು ಸುಹಾಸ್ ಮರಿಕೆ ತಿಳಿಸಿದ್ದಾರೆ.


ಮೌಲ್ಯವರ್ಧಿತ ಉತ್ಪನ್ನಗಳು :
ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ. ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆಗಳು ಲಭ್ಯ. ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಅಗ್ರಿ ಬ್ಯುಸಿನೆಸ್ ಮಳಿಗೆಗಳು, ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ ಮಾಡಲಾಗುವುದು. ಮೇಳದಲ್ಲಿ ಎಲ್ಲಾ ಸ್ಟಾಲ್‌ಗಳು ಈಗಾಗಲೇ ಬುಕ್ ಆಗಿದೆ ಎಂದು ಸುಹಾಸ್ ಮರಿಕೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಕುಸುಮಾಧರ್ ಉಪಸ್ಥಿತರಿದ್ದರು.


ಹಲಸಿನ ಊಟ:
ಮೇಳದ ಕೊನೆಯ ದಿನದಂದು ಹಲಸು ಮತ್ತು ಮಾವಿನ ಊಟ. ಸುಮಾರು ಇಪ್ಪತ್ತೈದು ಬಗೆಯ ವೈವಿಧ್ಯ ಖಾದ್ಯಗಳು. ಮೊದಲೇ ಟಿಕೇಟ್ ಕಾದಿರಿಸಿದ 250 ಮಂದಿಗೆ ಭೋಜನ ಸವಿಯುವ ಅವಕಾಶವಿದೆ ಎಂದು ಸುಹಾಸ್ ಮರಿಕೆ ತಿಳಿಸಿದ್ದಾರೆ.


ವಿವಿಧ ಸ್ಪರ್ಧೆಗಳು:
ಜೆಕಾಮ್ ಪುತ್ತೂರು ಟೇಬಲ್ 1.0 ಇದರ ಅಧ್ಯಕ್ಷ ಪಶುಪತಿ ಶರ್ಮ ಅವರು ಮಾತನಾಡಿ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ, ಪ್ರಬಂಧ ಸ್ಪರ್ಧೆ, ಕವನ ರಚಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಹಲಸಿನ ಹಣ್ಣು ಎತ್ತುವ, ಹಲಸಿನ ಸೋಳೆ ಬಿಡಿಸುವ, ಹಣ್ಣು ತಿನ್ನುವ, ಹಲಸಿನ ತೂಕ ಹೇಳುವ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.


ಹೊಸತನ
ವಿಶೇಷವಾಗಿ ಪ್ರತಿ ವರ್ಷ ಒಂದು ಹೊಸ ವಿಚಾರವನ್ನು ಹಲಸು ಮೇಳದಲ್ಲಿ ಅಳವಡಿಸಿಕೊಂಡು ಬರಲಾಗಿದ್ದು ಈ ಬಾರಿ ಹಲಸು ಮತ್ತು ಹಣ್ಣುಗಳ ಕವಿಗೋಷ್ಠಿ ಹಾಗು ಹಲಸಿನ ಹಿರಿಮೆ ಸಾರುವ ಯಕ್ಷಗಾನ ತಾಳಮದ್ದಳೆ ಜರುಗಲಿದೆ. ಸುಮಾರು ಎರಡೂವರೆ ಮೂರು ಗಂಟೆಗಳ ಕಾಲ ತಾಳಮದ್ದಳೆ ನಡೆಯಲಿದೆ. ಯಕ್ಷಲೋದಲ್ಲಿ ಪ್ರಥಮ ಕಾರ್ಯಕ್ರಮ. ಜೊತೆಗೆ ವಿವಿಧ ಸ್ಪರ್ಧೆಗಳಲ್ಲೂ ಹೊಸ ವಿಭಾಗಳನ್ನು ಸೇರಿಸಲಾಗಿದೆ.
ಸುಹಾಸ್ ಮರಿಕೆ ಕಾರ್ಯದರ್ಶಿ, ನವತೇಜ ಪುತ್ತೂರು

LEAVE A REPLY

Please enter your comment!
Please enter your name here