ಸೈನಿಕನ ಜೀವನಶೈಲಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು: ನಾರಾಯಣ ಭಟ್
ಪುತ್ತೂರು: ವಿದ್ಯಾರ್ಥಿಗಳು ಸೃಜನಶೀಲರಾಗಿರಬೇಕು ಸದಾ ಉತ್ಸುಕರಾಗಿರಬೇಕು. ಜಡತ್ವವನ್ನು ದೂರವಾಗಿಸಿ ಯಾವ ಕೆಲಸಕ್ಕೂ ಸದಾ ತಯಾರಿರಬೇಕು. ಸೈನಿಕನೊಬ್ಬನ ಜೀವನ ಶೈಲಿಯು ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಿರಬೇಕು. ಆಗ ನಾವು ಸದಾ ಶಿಸ್ತಿನ ಸಿಪಾಯಿಗಳಂತಿರುವುದಕ್ಕೆ ಸಾಧ್ಯ ಎಂದು ಭಾರತೀಯ ನೌಕಾ ಸೇನೆಯ ನಿವೃತ್ತ ಯೋಧ, ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾರಾಯಣ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ಶೈಕ್ಷಣಿಕ ವರ್ಷದ ತರಗತಿಗಳನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ರಾಮಕುಂಜದ ರಾಮಕುಂಜೇಶ್ವರ ಪ್ರೌಢಶಾಲೆಯ ಪ್ರಾಂಶುಪಾಲ ಸತೀಶ್ ಭಟ್ ಮಾತನಾಡಿ ಶಿಕ್ಷಣವೆಂದರೆ ಕೇವಲ ಉತ್ತಮ ಅಂಕ ಗಳಿಸುವುದಕ್ಕಷ್ಟೇ ಸೀಮಿತವಲ್ಲ. ಒಬ್ಬ ವಿದ್ಯಾರ್ಥಿಯ ಇಂಟಲಿಜೆನ್ಸ್ ಕೋಶಂಟ್ ಚೆನ್ನಾಗಿದ್ದರೆ ಅವನು ಉತ್ತಮ ಅಂಕ ಗಳಿಸಬಹುದು. ಹಾಗೆಂದು ಜೀವನದಲ್ಲಿ ಸಾಧಕನಾಗಬಹುದು ಎಂಬ ಖಾತರಿ ಇರುವುದಿಲ್ಲ. ಯಾವ ವ್ಯಕ್ತಿಯು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿರುತ್ತಾನೋ ಅವನ ಎಮೋಷನಲ್ ಕೋಶಂಟ್ ಮತ್ತು ಸೋಶಿಯಲ್ ಕೋಶಂಟ್ಗಳು ಬಹಳ ಉತ್ತಮವಾಗಿರುತ್ತದೆ. ಅಂತಹವನು ಸಮಾಜದ ಕಡೆಗೆ ಉತ್ತಮ ಸ್ಪಂದನೆಯನ್ನು ಹೊಂದಿರುತ್ತಾನೆ ಎಂದು ತಿಳಿಸಿದರು.
ಒಂದು ಸಂಶೋಧನೆ ಪ್ರಕಾರ ಯಾವ ವ್ಯಕ್ತಿಯು ತನ್ನ ಹೆಚ್ಚಿನ ಅವಧಿಯನ್ನು ಮೊಬೈಲ್, ಕಂಪ್ಯೂಟರ್, ಟಿವಿ ಇತ್ಯಾದಿಗಳ ಮುಂದೆ ಕಳೆಯುತ್ತಾನೋ ಅವನ ಮೆದುಳು ಶೇಕಡ 60ರಷ್ಟು ನಿರುಪಯೋಗಿ ಎನಿಸುತ್ತದೆ. ಈ ನಿಟ್ಟಿನಲ್ಲಿ ಹಾಸ್ಟೆಲ್ಗೆ ಸೇರುವ ವಿದ್ಯಾರ್ಥಿಗಳು ತಮ್ಮ ಅಧಿಕ ಸಮಯವನ್ನು ಪುಸ್ತಕದೊಂದಿಗೆ ಕಳೆಯುವ ಮೂಲಕ ತಮ್ಮ ಮಿದುಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೆಇಇ, ನೀಟ್ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಹಾಗೂ ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮೆರೆದ ಸಾಧಕ ವಿದ್ಯಾರ್ಥಿಗಳನ್ನು ಪೋಷಕರ ಸಹಿತ ಶಾಲು ಹೊದಿಸಿ ಸ್ಮರಣೆಗೆ ನೀಡಿ ಗೌರವಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಣೆಗೆ ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯಂತೆ ಮಕ್ಕಳು ತಮ್ಮ ಪೋಷಕರ ಪಾದ ಪಾದಪೂಜೆಯನ್ನು ನೆರವೇರಿಸಿ, ಅವರ ಆಶೀರ್ವಾದವನ್ನು ಪಡೆದು ತಮ್ಮ ಶೈಕ್ಷಣಿಕ ಸಾಧನೆಗೆ ಮುಂದಡಿ ಇಟ್ಟರು.
ವಿದ್ಯಾರ್ಥಿನಿ ಧೃತಿ ಮತ್ತು ಬಳಗ ಪ್ರಾರ್ಥಿಸಿದರು. ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ ಎಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳಾಡಿದರು. ಉಪನ್ಯಾಸಕರಾದ ಅಪರ್ಣ ಉಪಾಧ್ಯಾಯ, ಜೀವಿತ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಉಪ ಪ್ರಾಂಶುಪಾಲರಾದ ಪ್ರದೀಪ್ ಕೆ. ವೈ. ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಗೀತಾ ಸಿ. ಕೆ. ಕಾರ್ಯಕ್ರಮ ನಿರೂಪಿಸಿದರು.