ಉಪ್ಪಿನಂಗಡಿ: ಕಳೆದ ಮೇ ತಿಂಗಳ 30ರಂದು ರಾತ್ರಿ ಸುರಿದ ಭೀಕರ ಮಳೆಯ ಅವಾಂತರಗಳಿಂದ ಕಂಗೆಟ್ಟವರ ನೋವಿನ ಕಥನಗಳು ಒಂದೊಂದಾಗಿ ಬಯಲಾಗುತ್ತಿದ್ದು, ನೀರಕಟ್ಟೆಯಲ್ಲಿ ಮನೆಗಪ್ಪಳಿಸಿದ ಗುಡ್ಡದಿಂದ ಮನೆಯ ಯಜಮಾನ ಮಣ್ಣಿನಡಿ ಸಿಲುಕಿಯೂ ಸಾಕು ನಾಯಿಯ ಸಮಯ ಪ್ರಜ್ಞೆಯಿಂದ ಪವಾಡಸದೃಶ್ಯರಾಗಿ ಪ್ರಾಣಾಪಾಯದಿಂದ ಪಾರಾದ ವಿದ್ಯಾಮಾನ ತಡವಾಗಿ ಬೆಳಕಿಗೆ ಬಂದಿದೆ.
ಕಿಶೋರ್ ನೀರಕಟ್ಟೆ ಉಪ್ಪಿನಂಗಡಿಯ ಟೀಮ್ ದಕ್ಷಿಣ ಕಾಶಿ ಸಂಘಟನೆಯ ಅಂಬುಲೆನ್ಸ್ ಚಾಲಕ. ಮೇ.30ರ ಶುಕ್ರವಾರ ಕರ್ತವ್ಯ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ಮನೆ ತಲುಪಿದ ಇವರು, ಮಳೆಯಿಂದಾಗಿ ಏನಾದರೂ ಹಾನಿಯಾಗಿದೆಯಾ ಎಂದು ಟಾರ್ಚ್ ಬೆಳಕಿನಲ್ಲಿ ಪರಿಶೀಲಿಸುತ್ತಿದ್ದರು. ಆ ವೇಳೆ ಅವರ ಮನೆ ನಾಯಿ ಅವರ ಪ್ಯಾಂಟನ್ನು ಕಚ್ಚಿ ಹಿಂದಕ್ಕೆ ಎಳೆಯ ತೊಡಗಿತು. ಹಸಿವೆಯಿಂದ ನಾಯಿ ಈ ರೀತಿ ಮಾಡುತ್ತಿದೆ ಎಂದು ಭಾವಿಸಿ ನಾಯಿಯನ್ನು ದೂರಕ್ಕೆ ತಳ್ಳುತ್ತಾರೆ. ಆದರೆ ನಾಯಿ ವಿಕಾರವಾಗಿ ಕಿರುಚಾಟ ನಡೆಸಿ ಅಂಗಳದಲ್ಲಿ ಮಲಗಿ ರೋಧಿಸತೊಡಗಿದಾಗ ನಾಯಿಯತ್ತ ನಾಲ್ಕು ಹೆಚ್ಚೆ ಇರಿಸುತ್ತಾರೆ. ಆ ವೇಳೆ ಮನೆ ಬಳಿಯ ಗುಡ್ಡದ ಮಣ್ಣು ಜರಿದು ಇವರಿದ್ದ ಸ್ಥಳಕ್ಕೆ ಅಪ್ಪಳಿಸುತ್ತದೆ. ಇವರ ದೇಹದ ಅರ್ಧ ಭಾಗ ಮಣ್ಣಿನಡಿ ಸಿಲುಕಿ ಅರೆ ಕ್ಷಣ ಏನಾಗುತ್ತದೆ ಎಂದು ತಿಳಿಯದೆ ತಟಸ್ಥರಾದ ಅವರು, ಬಳಿಕ ಕೈಯಲ್ಲಿದ್ದ ಮೊಬೈಲ್ ಸಹಾಯದಿಂದ ಪತ್ನಿಗೆ ಪೋನಾಯಿಸಿ ಸಹಾಯಕ್ಕಾಗಿ ಮೊರೆಯಿಡುತ್ತಾರೆ. ತವರು ಮನೆಯಲ್ಲಿದ್ದ ಪತ್ನಿ ಗಂಡನ ಗೆಳೆಯರನ್ನು ಪೋನಿನಲ್ಲಿ ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಹಾಯ ಯಾಚಿಸುತ್ತಾರೆ. ತಕ್ಷಣವೇ ದೌಡಾಯಿಸಿ ಬಂದ ಗೆಳೆಯರು ಕಿಶೋರ್ ರವರನ್ನು ಮಣ್ಣಿನ ರಾಶಿಯಿಂದ ಹೊರ ತೆಗೆದು ರಕ್ಷಿಸುತ್ತಾರೆ.
ನಾಯಿಗೆ ತಿಳಿಯಿತೇ ಅವಘಡದ ಮುನ್ಸೂಚನೆ !:
ಪ್ರಾಕೃತಿಕ ವಿಕೋಪದ ಬಗ್ಗೆ ಅರಿವು ಪಡೆದ ನಾಯಿ ತನ್ನ ಯಜಮಾನನನ್ನು ರಕ್ಷಿಸಲು ಅವರ ಪ್ಯಾಂಟ್ ಕಚ್ಚಿ ಹಿಂದಕ್ಕೆ ಎಳೆದದ್ದು, ಇದರ ಮರ್ಮ ತಿಳಿಯದೆ ನಾಯಿಯನ್ನೇ ತಳ್ಳಿದಾಗ ನಾಯಿ ವಿಕಾರವಾಗಿ ಕಿರುಚಾಟ ನಡೆಸುತ್ತಾ ಅಂಗಳದಲ್ಲಿ ಮಲಗಿ ರೋಧಿಸತೊಡಗಿದ ಕಾರಣಕ್ಕೆ ನಾಲ್ಕು ಹೆಜ್ಜೆ ನಾಯಿಯ ಹತ್ತಿರಕ್ಕೆ ಇಟ್ಟಾಗ ನಾನು ಅರ್ಧ ಭಾಗ ಮಣ್ಣಿನಲ್ಲಿ ಸಿಲುಕುವಂತಾಯಿತು. ಮೊದಲು ನಿಂತಿದ್ದ ಸ್ಥಳದಲ್ಲೇ ನಾನು ನಿಂತಿದ್ದರೆ ನಾನು ಪೂರ್ಣವಾಗಿ ಮಣ್ಣಿನಲ್ಲಿ ಮುಳುಗಿ ಹೋಗುತ್ತಿದ್ದೆ . ದೇವರೆ ನನ್ನನ್ನು ನಾಯಿಯ ರೂಪದಲ್ಲಿ ರಕ್ಷಿಸಲು ಮುಂದಾದರೆಂದು ಘಟನೆಯನ್ನು ವಿವರಿಸಿ ಘಟನೆಯ ಭೀಕರತೆ ಬಗ್ಗೆ ಕಿಶೋರ್ ತಿಳಿಸಿದ್ದಾರೆ.
ಶಾಸಕರ ಮಾತಿಗೆ ಬೆಲೆ ನೀಡದ ಅಧಿಕಾರಿಗಳು:
ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿದರೂ, ತಕ್ಷಣವೇ ನೀಡಬೇಕಾದ 10 ಸಾವಿರ ರೂಪಾಯಿ ಪರಿಹಾರ ಧನವನ್ನು ವಿಳಂಬಿಸದೆ ಸಂತ್ರಸ್ತರಿಗೆ ನೀಡಬೇಕೆಂಬ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ರವರ ನಿರ್ದೇಶನ ಈ ಬಾರಿಯ ಪ್ರಾಕೃತಿಕ ವಿಕೋಪದ ಸಮಯದಲ್ಲಿ ಪಾಲನೆಯಾದಂತಿಲ್ಲ. ಹಲವಾರು ಮನೆಗಳಿಗೆ ಅಪ್ಪಳಿಸಿದ ಗುಡ್ಡಗಳಿಂದ ಹರಿದು ಬಂದ ಮಣ್ಣಿನ ರಾಶಿಯನ್ನು ತೆರವುಗೊಳಿಸುವುದೇ ಸಂತ್ರಸ್ತರಿಗೆ ತ್ರಾಸದಾಯಕವಾಗಿದೆ.