ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 100ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಸತ್ಸಂಗ, ಭಜನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜೂ. 1 ರಂದು ಜರುಗಿತು. ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇವರಿಂದ ಭಜನೆ ನಡೆಯಿತು. ಬಳಿಕ ನಡೆದ ಸತ್ಚಿಂತನ ಕಾರ್ಯಕ್ರಮವನ್ನು ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಂಗಳೂರು ಜಿಲ್ಲಾಧ್ಯಕ್ಷ ಪ್ರಸನ್ನ ಎನ್. ಭಟ್ ನಡೆಸಿದರು. ಬಾಬಾರವರ ಪ್ರೇಮತತ್ವ, ಶಾಂತಿತತ್ವ, ದೃಢನಂಬಿಕೆ ನಮಗೆಲ್ಲಾ ಪ್ರೇರಣೆಯಾಗಿದೆ. ನಿಸ್ವಾರ್ಥ ಪ್ರಾಮಾಣಿಕ ಸೇವೆಯೇ ಭಗವಂತನ ಸೇವೆ. ಮಾನವ ಜನಾಂಗವನ್ನು ಪ್ರೀತಿಸುವ ಮೂಲಕ ಜನಮನ್ನಣೆ ಪಡೆಯಬಹುದೆಂಬುದಕ್ಕೆ ಬಾಬಾರವರ ಜೀವನ ದರ್ಶವೇ ಸಾಕ್ಷಿ. ಸತ್ಯಸಾಯಿ ಬಾಬಾರವರ ಹೆಸರಿನಲ್ಲಿ ಹಲವಾರು ಶ್ರದ್ಧಾಕೇಂದ್ರಗಳು, ವೈದ್ಯಕೀಯ ಶಿಕ್ಷಣ ಕೇಂದ್ರಗಳು, ಸಮಾಜ ಸೇವಾ ಕೇಂದ್ರಗಳು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿವೆ’ ಎಂದು ಸತ್ ಚಿಂತನೆಯ ನ್ನು ಭಜಕರ ಮುಂದೆ ಇಟ್ಟರು.
ಶ್ರೀ ಸತ್ಯಸಾಯಿ ಭಕ್ತರಾದ ಕಡಮಜಲು ಸುಭಾಸ್ ರೈ ರವರು ಕಾರ್ಯಕ್ರಮದ ಔಚಿತ್ಯವನ್ನು ಪ್ರಾಸ್ತಾವಿಕವಾಗಿ ವಿಷಧೀಕರಿಸಿ ಭಜನೆಯ ಮೂಲಕ ಭಗವಂತನನ್ನು ಸುಲಭ ವಿಧಾನದಿಂದ ಮೆಚ್ಚಿಸಬಹುದು. ಭಕ್ತರು ಭಗವಂತನನ್ನು ಭಕ್ತಿಯಿಂದ ಭಜಿಸುವುದು ಭಜನೆಯಾಗಿದೆ ಎಂದ ಅವರು ಬಾಬಾರವರ ತ್ರಿವಿಧ ಸಂಬಂಧ ನನಗಿದೆ. ಪುಟ್ಟಪರ್ತಿಯಲ್ಲಿ ಬಾಬಾ ವಿಭೂತಿ ನೀಡಿ ಹರಸಿದ್ದಾರೆ. ನನ್ನ ಮಗ ವಿಪುಲ ಮತ್ತು ಮಗಳ ಪತಿ ದುರ್ಗಾಪ್ರಸಾದ್ ಅಳಿಕೆ ಸತ್ಯಸಾಯಿ ವಿದ್ಯಾಕೇಂದ್ರದ ಉತ್ಪನ್ನ. ಅವರುಗಳ ಸಾಧನೆಗೆ ಬಾಬಾ ರವರ ಆತ್ಮಶಕ್ತಿ ಇಚ್ಛಾಶಕ್ತಿಯಾಗಿ ರೂಪುಗೊಂಡಿದೆ’ ಎಂದರು.
ಸನ್ಮಾನ
ಇದೇ ಸಂದರ್ಭ ”ಗಾಂಧಿ ತತ್ವಗಳ ಅನುಷ್ಠಾನದ ವಿಶ್ಲೇಷಣೆ ‘ಪುತ್ತೂರಿಗೆ ಸಂಬಂಧಿಸಿದಂತೆ’ ಒಂದು ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಡಾ. ಕಿರಣಚಂದ್ರ ರೈ ಬಿ. ಇವರನ್ನು ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಟಾನದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಮುಂಡಾಳಗುತ್ತು ಪ್ರಶಾಂತ್ ರೈ ವಾಚಿಸಿದರು. ಕೋಶಾಧಿಕಾರಿ ಕೆದಂಬಾಡಿ ಬೀಡು ಚಂದ್ರಹಾಸ ಬಲ್ಲಾಳ್, ಚಿಂತನಕಾರ ಪ್ರಸನ್ನ ಎನ್. ಭಟ್, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಸಾಯುಭಕ್ತ ಸದಾಶಿವ ಪಯಂದೂರು ಉಪಸ್ಥಿತರಿದ್ದರು.

ನಿವೃತ್ತ ಯೋಧನಿಗೆ ಸನ್ಮಾನ ಪತ್ರ
ಇದೇ ವೇಳೆ ನಿವೃತ್ತ ಯೋಧ ಲಕ್ಷ್ಮೀಶ ಕಡಮಜಲುರವರನ್ನು ದ.ಕ. ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಸನ್ಮಾನ ಪತ್ರ ಓದಿದರು. ಕಡಮಜಲು ಸುಭಾಸ್ ರೈ ರವರು ಲಕ್ಷ್ಮೀಶ ರನ್ನು ಗೌರವಿಸಿ ಸನ್ಮಾನಿಸಿದರು. ಇದೇ ವೇಳೆ ಗುಣವತಿಯವರ ಪುತ್ರ ಪ್ರಣವ್ ರವರಿಗೆ ಇಂಜಿನಿಯರ್ ವಿದ್ಯಾಭ್ಯಾಸಕ್ಕಾಗಿ ಕಡಮಜಲು ರವರು ಆರ್ಥಿಕ ಸಹಾಯ ಹಸ್ತಾಂತರಿಸಿದರು. ಪ್ರೀತಿ ಎಸ್. ರೈ ಜೊತೆಗಿದ್ದರು. ಕಡಮಜಲು ದಂಪತಿ ಬಾಬಾರವರಿಗೆ ಆರತಿ ಬೆಳಗುವ ಮೂಲಕ ಮಹಾಮಂಗಳಾರತಿ ನೆರವೇರಿಸಿದರು. ಸುಮಾರು ನೂರರಷ್ಟು ಭಜನಾ ಸೇವಾರ್ಥಿಗಳು, ಭಕ್ತಾದಿಗಳು ಪಾಲ್ಗೊಂಡರು. ಪ್ರಸಾದ ರೂಪದಲ್ಲಿ ಫಲಾಹಾರ ಮತ್ತು ಅನ್ನಸಂತರ್ಪಣೆ ನೀಡಲಾಯಿತು.