✒️ಕಾಕೂ
ಪವಿತ್ರ “ಹಜ್ಜ್ ” ಸೇರಿದಂತೆ ಹಲವು ಮಹತ್ವವನ್ನು ಸಾರುವ ತಿಂಗಳಾಗಿದೆ “ದುಲ್ ಹಜ್ಜ್ “. ವಿಶಾಲ ಸಂಸ್ಕ್ರತಿಯೊಂದರ ಪಿತಾಮಹರಾದ ಹಜ್ರತ್ ಇಬ್ರಾಹಿಂ (ಅ.ಸ)ರನ್ನು ಸ್ಮರಿಸದೆ ಈ ತಿಂಗಳನ್ನು ದಾಟಿ ಮುಂದೆ ಹೋಗುವಂತೆಯೇ ಇಲ್ಲ. ಒಂದಿಡೀ ತಲೆಮಾರು ಅಥವಾ ಸಮುದಾಯ ಮಾಡಿ ಮುಗಿಸಬೇಕಾದ ಕೆಲಸ ಕಾರ್ಯಗಳನ್ನು ಅವರೊಬ್ಬರೇ ಮಾಡಿದ್ದರಿಂದಾಗಿದೆ ಅವರನ್ನು ವ್ಯಕ್ತಿ ಎಂದೆನ್ನದೆ ಒಂದು ಪ್ರಸ್ಥಾನವೆನ್ನುವುದು.
ಇತರೆಲ್ಲಾ ಆರಾಧನೆಗಳನ್ನು ಒಂದು ಗೂಡಿಸಿದರೆ ಅದರ ಒಟ್ಟು ಸಾರಾಂಶವಾಗಿದೆ ಹಜ್ಜ್. ಇದರ ನಿರ್ವಹಣೆಗಿರುವ ಖರ್ಚು ವೆಚ್ಚಗಳನ್ನು ನೋಡಿದರೆ “ಝಕಾತ್” ನಂತೆ ಅದಕ್ಕೊಂದು ಆರ್ಥಿಕ ಆಯಾಮವಿರುವುದನ್ನು ಕಾಣಬಹುದು. ದೈಹಿಕ ಶ್ರಮದ ಬಗ್ಗೆ ಹೇಳುವುದಿದ್ದರೆ ನಮಾಝಿನಂತೆ, ಶಾರೀರಿಕವಾಗಿ ಮಾಡಲೇಬೇಕಾದ ಅದ್ವಾನವಿದೆ ಹಜ್ಜ್ ನಲ್ಲಿ. ಸುದೀರ್ಘವಾದ ಪ್ರಯಾಣದ ಆಯಾಸ ಮತ್ತು ಆಹಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಉಪವಾಸಿಗನಂತೆ ಕೆಲವೊಮ್ಮೆ ಹಸಿವಿನಿಂದ ಇರಬೇಕಾಗಿಯೂ ಬರಬಹುದು. ನಮ್ಮೆಲ್ಲಾ ಅಲಂಕಾರಿಕ ಸಾಮಗ್ರಿಗಳನ್ನು ನಿರ್ಲಕ್ಷಿಸಿ, ಇದುವರೆಗಿದ್ದ ವೈಭವದ ಸುಖ ಸೌಲಭ್ಯಗಳನ್ನೆಲ್ಲ ತ್ಯಜಿಸಿ, ಆದ್ಯಾತ್ಮಿಕ ಫಕೀರನ ವೇಷ ತೊಟ್ಟು, ಅಲ್ಲಾಹುವಿನ ಕರೆಗೆ ಓಗೊಟ್ಟು ಬಂದವರ ಒಂದು ಮಹಾ ಸಂಗಮವಾಗಿದೆ ಹಜ್ಜ್.
ಪೂರ್ವ ಪಿತಾಮಹ ಇಬ್ರಾಹಿಂ(ಅ.ಸ) ಆಗಿದ್ದಾರೆ ನಮ್ಮ ಅಭಿಮಾನ. ಸನಾತನ ವೆನಿಸಿದ ಯಾವುದೇ ಧರ್ಮಗಳು ಕೂಡಾ ಈ ವ್ಯಕ್ತಿತ್ವವನ್ನು ಕಡೆಗಣಿಸುವಂತಿಲ್ಲ. ಯಹೂದಿಯರಿಗೆ ಮತ್ತು ಕ್ರೈಸ್ತರಿಗೂ ಅತಿ ಪ್ರಮುಖ ವ್ಯಕ್ತಿಯಾಗಿದ್ದಾರೆ ಅಬ್ರಹಾಂ ಅಥವಾ ಇಬ್ರಾಹಿಂ ನೆಬಿ (ಅ.ಸ ).
ಇಬ್ರಾಹಿಂ (ಅ.ಸ)ಮತ್ತು ಅವರ ಪತ್ನಿ ಹಾಝರಾ(ರ) ಮತ್ತು ಮಗ ಇಸ್ಮಾಯಿಲ್ ನೆಬಿ (ಅ.ಸ) ಅವರ ದೃಢ ವಿಶ್ವಾಸದ ಜೀವನವನ್ನು, ಧರ್ಮಕ್ಕಾಗಿ ಆ ಕುಟುಂಬ ಎದುರಿಸಿದ, ಸಹಿಸಿದ, ತ್ಯಾಗೋಜ್ವಲ ಬದುಕನ್ನು ಸ್ಮರಿಸದೆ ಹಜ್ಜ್ ಪರಿಪೂರ್ಣವಾಗದು.
ಅಲ್ಲಾಹು ನಮ್ಮನ್ನು ʼಮುಸ್ಲಿಮ್ʼ ಎಂದು ಕರೆದಿದ್ದಾನೆ. ಅದು ಕೇವಲ ಅರ್ಜಿ ಫಾರ್ಮ್ ಭರ್ತಿ ಮಾಡುವ ಪದವಲ್ಲ. ಇದಕ್ಕೆ ಅಲ್ಲಾಹುವಿನ ಎಲ್ಲಾ ನಿಬಂಧನೆಗಳನ್ನೂ, ಸರ್ವ ಶ್ರೇಷ್ಠತೆಯನ್ನೂ ಒಪ್ಪಿಕೊಂಡು ʼಶರಣಾದವರುʼ ಎಂದೂ ಅರ್ಥವಿದೆ.
ಕೇವಲ ಆರಾಧನೆಯಲ್ಲ. ನಮಾಜ್, ಝಕಾತ್, ಉಪವಾಸ, ಹಜ್ಜ್ ಇವನ್ನೆಲ್ಲ ಮಾಡಿಕೊಂಡು ಆದರೊಂದಿಗೆ ಒಂದಿಷ್ಟು ಒಳಿತನ್ನೂ ಮಾಡಿ ಎಂದಾಗಿದೆ ಇಸ್ಲಾಮಿನ ಸಂದೇಶ. ಒಳಿತು ಅಂದ್ರೆ ಸಮಾಜ ಸೇವೆ. ದುರ್ಬಲರೆಡೆಗೊಂದು ಸಹಾಯಹಸ್ತ, ರೋಗಿಗಳೊಂದಿಗೆ ಕನಿಷ್ಠ ಒಂದು ಕಿರುನಗೆಯ ಮೂಲಕವಾದರೂ ಸಾಂತ್ವನ ಹೇಳಿ ಎನ್ನುವ ಅಲ್ಲಾಹು “ಒಳಿತು” ಮಾಡುವವರನ್ನು ಇಷ್ಟಪಡುತ್ತಾನೆ.
ಇದರ ಉಲ್ಲೇಖ ಇಲ್ಲಿ ಯಾಕೆಂದರೆ ಹಜ್ಜ್ ಸಂದರ್ಭದಲ್ಲಿ ಈ ಗುಣಗಳೆಲ್ಲ ಒರೆಗೆ ಹಚ್ಚಿದಂತೆ ಪರೀಕ್ಷಿಸಲ್ಪಡುತ್ತದೆ. ತ್ಯಾಗ ಸಹಿಸಿ, ಕಷ್ಟ ಅನುಭವಿಸಿ, ದೊಡ್ಡದೊಂದು ಮೊತ್ತ ಖರ್ಚನ್ನೂ ಮಾಡಿಕೊಂಡು ಶ್ರಮ ವಹಿಸಿದರೆ ಮಾತ್ರ ಪಡೆದುಕೊಳ್ಳಲು ಸಾಧ್ಯವಿರುವ ಕರ್ಮವಾಗಿದೆ ಹಜ್ಜ್.
ಇಸ್ಲಾಮಿನ ಸಂಸ್ಕೃತಿಯೊಂದರ ಭಾಗವಾಗಿ “ಮುಸ್ಲಿಮ್ ” ಹೇಗಿರಬೇಕು ಎಂಬುದರ ಪ್ರಾಯೋಗಿಕ ರೂಪವಾಗಿದೆ “ಹಜ್ಜ್”. ಅಲ್ಲಾಹುವಿನ ಸೃಷ್ಟಿಗಳಾದ ನಾವು ಅವನ ವಿಧೇಯ ದಾಸರೆಂದೂ , ಅವನನ್ನಾಶ್ರಾಯಿಸದೆ ಒಂದು ಹೆಜ್ಜೆ ಇಡುವುದು ಬಿಡಿ ಒಂದು ಮೈಕ್ರೋ ಸೆಕೆಂಡ್ ಕೂಡಾ ಚಲನೆ ನಮಗಿಲ್ಲವೆಂದು ಜಗತ್ತಿನ ಮುಂದೆ ಘಂಟಾಘೋಷವಾಗಿ ಸಾರುವ ಮಹಾ ಸಂಗಮವಾಗಿದೆ “ಹಜ್ಜ್”.
“ಹಜ್ಜ್” ಗೆ ಹೋದ ಸಮಯದಲ್ಲಿ ಹಲವು “ಇಗೋ” ಗಳಿಂದ ದೂರವಾಗಬೇಕಾಗ್ತದೆ . ಮೂರು-ನಾಲ್ಕು ಸಾವಿರ ಕೊಟ್ಟು ಇಂತದೇ ಬ್ರಾಂಡ್ ಮಾತ್ರ ಧರಿಸುತ್ತೇನೆನ್ನುವ ಅಹಂ ಉಳ್ಳವನು ಕೂಡಾ ಅಲ್ಲಿ ಸಾಮಾನ್ಯರಂತೆ ಕೇವಲ ಎರಡು ತುಂಡು ಬಟ್ಟೆಗಳಲ್ಲೇ ತೃಪ್ತಿ ಪಡುತ್ತಾನೆ.
“ಇಹ್ರಾಮ್ ” ಅಂದರೇನೇ ಹಲವು ಕಾರ್ಯಗಳನ್ನು ಹರಾಮ್ ಮಾಡುವುದಾಗಿದೆ. ದೈನಂದಿನ ಉಡುಗೆ-ತೊಡುಗೆ, ಬೆಲೆಬಾಳುವ ಪರ್ಫ್ಯೂಮ್, ಕೇಶ ವಿನ್ಯಾಸದ ಮತ್ತು ಸೌಂದರ್ಯ ವರ್ಧಿಸುವ ವಿವಿಧ ಕ್ರೀಮ್ ಗಳು ಇವೇ ಮುಂತಾದವುಗಳನ್ನು ವರ್ಜಿಸಬೇಕು. ಅನಾವಶ್ಯಕವಾಗಿ ಆಡುವ ಮಾತುಗಳಿಗೆ ಕನಿಷ್ಠ ಐದಾರು ದಿನದ ಮಟ್ಟಿಗಾದರೂ ಕಡಿವಾಣ ಹಾಕಬೇಕು. ಲೌಕಿಕವಾದ ಎಲ್ಲ ಮೋಹಗಳನ್ನು ತೊರೆದು ಅಲ್ಲಾಹುವಿನ ಆದೇಶದಂತೆ ಜನ್ಮ ವಿಶುದ್ಧಿಯತ್ತ ನಡೆಯುವುದಾಗಿದೆ “ಹಜ್ಜ್”.
ಪತಿ-ಪತ್ನಿ ಬಳಿಯಲ್ಲೇ ಇದ್ದರೂ ಸಂಪರ್ಕ ಬಿಡಿ, ಲೈಂಗಿಕ ದೃಷ್ಟಿಯಿಂದ ನೋಡುವುದಕ್ಕೂ ಅಲ್ಲಿ ಅನುಮತಿಯಿಲ್ಲ. ಮಹಿಳೆಯರ ಆಕರ್ಷಣೆಯ ಪ್ರಮುಖ ಭಾಗವಾಗಿರುವ ಮುಖವನ್ನು ತೆರೆದಿಟ್ಟು ಕೊಂಡೇ ಲಕ್ಷಾಂತರ ಮಹಿಳೆಯರು ಹಿಂದೆ ಮುಂದೆ ಇರ್ತಾರೆ. ಅದೂ ಜಗತ್ತಿನ ವಿವಿಧ ಕಡೆಗಳಿಂದ ಬರುವ ಸೌಂದರ್ಯವತಿಯರು. ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳಾದ ಆಕರ್ಷಕ ಅಂಗ ಸೌಷ್ಠವವಿರುವ ಪುರುಷರು ಕೂಡಾ ಹತ್ತಿರದಲ್ಲಿದ್ದರೂ ಅಶ್ಲೀಲ ಭಾವನೆಗಳಾಗಲೀ, ಯೋಚನೆಗಳಾಗಲಿ ಬರಲೇಬಾರದು. ಪ್ರತಿಯೊಬ್ಬರೂ ಅಲ್ಲಾಹನ ದಾಸರೆಂಬ ಪ್ರಭುದ್ಧತೆಯೊಂದಿಗೆ ಅವನ ಆದೇಶಕ್ಕೆ ವಿರುದ್ದವಾಗಿರುವ “ಯಾವುದನ್ನೂ ಮುಟ್ಟಲಾರೆ ” ಮತ್ತು ” ಯಾರನ್ನೂ ನೋಡಲಾರೆ ” ಎಂಬ ಅತಿಶಕ್ತ ಪ್ರತಿಜ್ಞೆಯೊಂದರ ಬದ್ಧತೆಗೆ “ಹಜ್ಜ್” ಎಂಬ ಪುಣ್ಯ ಕರ್ಮ ನಮ್ಮನ್ನು ಕೊಂಡೊಯ್ಯುತ್ತದೆ.
ಜಗದೊಡೆಯನ ಕಾಬಾಲಯದ ಮುಂದೆ, ಎಲ್ಲೇ ಇದ್ದರೂ ಇದುವರೆಗೂ ಅದರೆಡೆಗೆ ಮುಖ ಮಾಡಿ ಆರಾದಿಸುತ್ತಿದ್ದ ಆ ಪುಣ್ಯ ಭವನ ಇದೀಗ ನಮ್ಮ ಮುಂದೆ!. ಅಲ್ಲಾಹುವಿನ ದೇವದೂತರು (ಮಲಕ್)ಸಾಲು ಸಾಲಾಗಿ ನಿಂತಿರುವ ಆ ಪರಿಸರದಲ್ಲಿ ಬೇರೆ ಯಾವುದೇ ಚಿಂತೆ ಹೇಗೆ ಬರಲು ಸಾಧ್ಯ? ಸೌದಿ ರಾಜನೋ, ಆಫ್ರಿಕಾದ ದರಿದ್ರನೋ, ಭಾರತದ ಸೆಲೆಬ್ರಿಟಿಯೋ ಹೀಗೆ ಪ್ರತಿಯೊಬ್ಬರೂ ಒಂದೇ ವೇಷದಲ್ಲಿ , ಒಂದೇ ಮಂತ್ರ ಉಚ್ಚರಿಸುತ್ತಾ , ಏಕ ಲಕ್ಷ್ಯ ದೊಂದಿಗೆ “ಮುಜ್ದಲಿಫಾ”ದ ಅದೇ ಮಣ್ಣಿನಲ್ಲಿ ತಲೆದಿಂಬು ಕೂಡಾ ಇಲ್ಲದೆ ಎಲ್ಲರೊಂದಿಗೆ ವಾಸಿಸುತ್ತಾರೆ ಮತ್ತು ಎಲ್ಲಾ ಮರೆತು ಮಲಗುತ್ತಾರೆ ಅಂದ್ರೆ ಅದರ ಆಕರ್ಷಣೆ ಹೇಗಿರಬಹುದು?. ಮರಣದ ಬಳಿಕ ಇದೇ ರೀತಿಯಲ್ಲಿ ನಾವೆಲ್ಲಾ ನಿದ್ರಿಸಲಿಕ್ಕಿದೆ ಎಂಬ ಸ್ಮರಣೆ ಕೂಡಾ ಇಲ್ಲಿದೆ. ಬಡವ,ಶ್ರೀಮಂತ, ಪಂಡಿತ,ಪಾಮರ ಪ್ರತಿಯೊಬ್ಬರೂ ಅಕ್ಷರಶಃ ನಿಯಮಗಳನ್ನು ಪಾಲಿಸಿದಾಗಲೇ “ಹಜ್ಜ್” ಅವರ ಪಾಲಿಗೆ ಪರಿಪೂರ್ಣತೆ ಪಡೆಯುವುದು.
ಒಟ್ಟಿನಲ್ಲಿ ಸರ್ವಶಕ್ತನ ಮಹತ್ವವನ್ನು ಅರಿಯುತ್ತಾ, ಸ್ವಂತ ಶರೀರದ ನಶ್ವರತೆಯನ್ನು ಅರ್ಥ ಮಾಡಿಕೊಳ್ಳುತ್ತಲೇ ಹೋಗುವ ಆತ್ಮಾರ್ಥತೆಯ ಯಾನವಾಗಿದೆ “ಹಜ್ಜ್”.