ಮುರಳೀಧರ ರೈ ಬಗ್ಗೆ ಮಾನಹಾನಿ ಸಂದೇಶ – ಕಾಂಗ್ರೆಸ್ ನಿಯೋಗದಿಂದ ಪೊಲೀಸ್ ದೂರು

0

ಉಪ್ಪಿನಂಗಡಿ: ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿರುವ ಕಿಡಿಗೇಡಿಗಳ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಉಪ್ಪಿನಂಗಡಿ ಬ್ಲಾಕ್‌ನ ಕಾಂಗ್ರೆಸ್ ನಿಯೋಗವು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿತು.

ಕೋಡಿಂಬಾಡಿ ಗ್ರಾ.ಪಂ.ನ ಅಧ್ಯಕ್ಷರಾಗಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಮುರಳೀಧರ ರೈಯವರು ಪಕ್ಷದ ಹಿರಿಯ ನಾಯಕರಾಗಿರುತ್ತಾರೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕರ ಕೊಲೆ ನಡೆದಾಗ ಬೇಸತ್ತು ಕಾಂಗ್ರೆಸ್ ಪಕ್ಷದ ಎಲ್ಲಾ ಜವಾಬ್ದಾರಿಗಳಿಗೆ ರಾಜೀನಾಮೆಯನ್ನು ಸಲ್ಲಿಸಿರುತ್ತಾರೆ. ಈ ಕುರಿತು ಮೇ 30ರಂದು ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಗಿದ್ದು, ಈ ವರದಿಯು ಆ ಪತ್ರಿಕೆಯ ಫೇಸ್ ಬುಕ್ ಪೇಜ್‌ನಲ್ಲಿ ಕೂಡಾ ಪ್ರಕಟಗೊಂಡಿತ್ತು. ಈ ವರದಿಗೆ ಯಾರೋ ಕಿಡಿಗೇಡಿಗಳು ಮುರಳೀಧರ ರೈಯವರ ತೇಜೋವಧೆ ಹಾಗೂ ಮಾನಹಾನಿಯಾಗುವ ಹಾಗೆ ಕಮೆಂಟ್ ಮಾಡಿದ್ದಾರೆ. ಇದು ಮುರಳೀಧರ ರೈಯವರ ಮಾನಹಾನಿ ಮಾಡುವ ಉದ್ದೇಶದಿಂದ ಮಾಡಿದ ಕಮೆಂಟ್ ಆಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ. ಈ ಕಮೆಂಟ್‌ಗಳು ಸಮಾಜದಲ್ಲಿ ಕೋಮುದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಇದೆ. ಆದ್ದರಿಂದ ಇಂತಹ ಕೃತ್ಯವೆಸಗಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ನಿಯೋಗವು ದೂರಿನಲ್ಲಿ ಆಗ್ರಹಿಸಿದೆ.

ಮನವಿ ನೀಡಿದ ನಿಯೋಗದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಝೀರ್ ಮಠ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಪಮ್ಮನಮಜಲು, ಹಿರೇಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಪಟಾರ್ತಿ, ಬಜತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ವಿನೋದ್, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್, 34 ನೆಕ್ಕಿಲಾಡಿ ಬೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಹಮೀದ್ ಪಿ.ಟಿ., ಇಸಾಕ್, ಬಜತ್ತೂರು ಗ್ರಾ.ಪಂ. ಸದಸ್ಯೆ ಪ್ರೆಸಿಲ್ಲಾ ಡಿಸೋಜ, ಕಾಂಗ್ರೆಸ್ ಪ್ರಮುಖರಾದ ಯೊಗೀಶ್ ಸಾಮಾನಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಶಿವಚಂದ್ರ ನಿಡ್ಡೆಂಕಿ, ಝಕಾರಿಯಾ ನಾಗನಕೋಡಿ, ಶೌಕತ್ ಕೆಮ್ಮಾರ, ಜಯಶೀಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here