ಪುತ್ತೂರು: ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ವಿನಾ ಕಾರಣ ಪೊಲೀಸರು ಕಾನೂನು ಬಾಹಿರವಾಗಿ ತಡರಾತ್ರಿಯಲ್ಲಿ ಮನೆಗಳಿಗೆ ನುಗ್ಗಿ ಅಮಾನವೀಯವಾಗಿ ವರ್ತಿಸಿ ವೈಯುಕ್ತಿಕ ಛಾಯಾಚಿತ್ರ ತೆಗೆದು ಜಿ.ಪಿ.ಎಸ್. ದಾಖಲಿಸಿ ಭಯ ಮತ್ತು ಆತಂಕ ನಿರ್ಮಿಸುತ್ತಿರುವ ಬಗ್ಗೆ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಸಂಪ್ಯ ಪೊಲೀಸ್ ಠಾಣಾಧಿಕಾರಿಯವರ ಮೂಲಕ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ನೀಡಲಾಯಿತು.
ಸಂಪ್ಯ ಠಾಣೆಯ ಪೊಲೀಸರು ಕಳೆದ ಎರಡು ಮೂರು ದಿನಗಳಿಂದ ಯಾವುದೇ ಪೂರ್ವ ಮುನ್ಸೂಚನೆ ಅಥವಾ ತಿಳುವಳಿಕೆ ಪತ್ರ ನೀಡದೆ ಚರಣ್ ಹಾಗೂ ಇತರರ ಮನೆಗಳಿಗೆ ತಡರಾತ್ರಿಯಲ್ಲಿ ವಿನಾ ಕಾರಣ ಮಹಿಳಾ ಸಿಬಂದಿಗಳ ರಹಿತವಾಗಿ ನುಗಿ ಅಮಾನವೀಯವಾಗಿ ವರ್ತಿಸಿ ವೈಯುಕ್ತಿಕ ಛಾಯಾಚಿತ್ರಗಳನ್ನು ತೆಗೆದು ಮನೆಯ ಜಿ.ಪಿ,ಎಸ್ ದಾಖಲಿಸಿ ಭಯ ಮತ್ತು ಆತಂಕದ ವಾತಾವರಣದ ನಿರ್ಮಿಸಿರುತ್ತಾರೆ. ಮನೆಯಲ್ಲಿ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಇರುವ ಸಮಯದಲ್ಲಿ ನಿಮ್ಮ ಕಾನೂನು ಬಾಹಿರ ವರ್ತನೆ ನಮ್ಮ ಖಾಸಗಿ ಜೀವನಕ್ಕೆ ಮತ್ತು ನಮ್ಮ ಸಂವಿಧಾನಿಕ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿರುತ್ತದೆ. ತಮ್ಮ ಇಲಾಖೆಯ ಸಿಬಂದಿಗಳ ವರ್ತನೆಯನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೆ ತಪ್ಪಿತಸ್ಥ ಸಿಬಂದಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಪೊಲೀಸ್ ಇಲಾಖೆಯೇ ಮುಂದೆ ಆಗುವ ಬೆಳವಣಿಗೆಗಳಿಗೆ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೂ ಹಿತರಕ್ಷಣಾ ವೇದಿಕೆಯ ಯಶೋಧಾ ಕೆ. ಗೌಡ, ಗೀತಾ ಆರ್ಯಾಪು, ತ್ರಿವೇಣಿ ಪಲ್ಲತ್ತಾರು, ಜಯಶ್ರೀ ಪಾಣಾಜೆ, ಮಲ್ಲಿಕಾ ಬಡಗನ್ನೂರುರವರು ಮನವಿ ನೀಡಿದರು.