ಸಾವಿರಾರು ಮಂದಿ ಭೇಟಿ | ಜನರಿಂದ ಉತ್ತಮ ಸ್ಪಂದನೆ | ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಪುತ್ತೂರು: ಪುತ್ತೂರು ಕಿಲ್ಲೆ ಮೈದಾನದಲ್ಲಿ ಜೂ.6ರಂದು ಆರಂಭಗೊಂಡು ಮೂರು ದಿನ ಮೇಳೈಸಿದ ಹಲಸು-ಹಣ್ಣುಗಳ ಮೇಳವು ಜೂ.8ರಂದು ಸಂಪನ್ನಗೊಂಡಿತು. 7ನೇ ವರ್ಷದ ಈ ಹಲಸು-ಹಣ್ಣು ಮೇಳಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ಹಲಸಿನ ವಿವಿಧ ಉತ್ಪನ್ನಗಳನ್ನು ಸವಿದರು. ಮೂರು ದಿನವೂ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆಯೂ ದೊರೆತಿದೆ. ಸಮಾರೋಪದಲ್ಲಿ ಹಲಸು-ಹಣ್ಣು ಮೇಳದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಹಲಸು ಮಂಡಳಿ ಸ್ಥಾಪನೆಯಾಗಲಿ:
ಸಮಾರೋಪ ಸಮಾರಂಭದಲ್ಲಿ ಉಪ್ಪಿನಂಗಡಿಯ ವೈದ್ಯ ಡಾ. ಸುಪ್ರಿತ್ ಲೋಬೋ ಅವರು ಮಾತನಾಡಿ, ಭಾರತೀಯರು ಪ್ರಕೃತಿ ಪೂಜಕರು. ಹಲಸು ಅನ್ನುವುದು ನಮ್ಮ ಪರಂಪರೆ. ಇದರಲ್ಲಿ ನೆಲದ ಸುಹಾಸನೆಯಿದೆ. ಇಂತಹ ಹಲಸನ್ನು ದಾಖಲೀಕರಣ ಮಾಡುವಲ್ಲಿ ಎಲ್ಲೋ ಎಡವಿದ್ದೇವೆ. ಹಲಸು ಆರೋಗ್ಯದ ರಹಸ್ಯ. ಹಲವು ರೋಗಗಳಿಗೂ ಔಷಧಿಯಾಗಿ ಪರಿಣಮಿಸುತ್ತದೆ. ಆದರೆ ಇದು ನೂರು ಪರ್ಸಂಟ್ ರೀಚ್ ಆಗದಿದ್ದರೂ ಅದರ ಪರಿಣಾಮ ನೋಡಿದ್ದೇವೆ. ಈ ಕುರಿತು ಇನ್ನೂ ಅನೇಕ ಸಂಶೋಧನೆ ನಡೆಯುತ್ತಿದೆ. ಇಂತಹ ಹಲಸು ಇವತ್ತು ಮೌಲ್ಯವರ್ಧನೆಯಾಗುತ್ತಿದೆ. ನವತೇಜ ಸಂಘಟಿಸುವ ಈ ಹಲಸು ಹಣ್ಣು ಮೇಳದಲ್ಲಿ ಸಮುದಾಯದ ಏಕತೆಯನ್ನು ಕಾಣುತ್ತೇವೆ. ಎಲ್ಲಾ ಸ್ಥರದ ಜನರು ಇಲ್ಲಿಗೆ ಬಂದು ಹಲಸಿನ ವಿವಿಧ ಉತ್ಪನ್ನಗಳನ್ನು ಆಸ್ವಾಧಿಸಿದ್ದಾರೆ. ಸರಕಾರದ ಆತ್ಮನಿರ್ಭರತೆಯ ಕುರಿತು ಹೇಳುವುದಕ್ಕೆ ಇದೊಂದು ಸಣ್ಣ ಹೆಜ್ಜೆಯಾಗಿದೆ. ಇವತ್ತು ಹಲಸು ಫೈವ್ ಸ್ಟಾರ್ ಹೊಟೇಲ್ನಲ್ಲಿ ಬರಬೇಕಾದರೆ ಹಲಸು ರಾಯಭಾರಿ ಶ್ರೀಪಡ್ರೆ ಅವರೇ ಕಾರಣ. ಹಲಸಿನ ಹಣ್ಣು ವಿಶ್ವದಲ್ಲಿ ಅತ್ಯಂತ ಹೆಚ್ಚು ಬೆಳೆಯುವ ದೇಶ ಭಾರತ. ಈ ನಿಟ್ಟಿನಲ್ಲಿ ಹಲಸು ಮಂಡಳಿ ಸ್ಥಾಪನೆ ಆಗಬೇಕು ಎಂದರು.
ಹಲಸಿನ ಮೌಲ್ಯ ವೃದ್ಧಿಸಲಿ:
ದ್ವಾರಕಾ ಕಾರ್ಪೋರೇಶನ್ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ಹಲಸು ಬರಿಯ ಹಣ್ಣಲ್ಲ. ಇದು ಮನುಷ್ಯನ ಜೀವನದೊಂದಿಗೆ ಬೆರೆತಿದೆ. ಹಲಸು ಕೂಡಾ ಕಲ್ಪವೃಕ್ಷಕ್ಕೆ ಸಮಾನವಾಗಿದೆ. ಮೌಲ್ಯವರ್ಧನೆ ಈ ಮೇಳದ ಮುಖ್ಯ ಉದ್ದೇಶ. ಆಧುನಿಕ ಭರಾಟೆಯಲ್ಲಿ ವಿದೇಶಿ ಆಹಾರ ನಮ್ಮ ಮನಸ್ಸಿನಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿವೆ. ನಾವು ಹಲಸಿಗೆ ಮಹತ್ವವನ್ನು ಸಾರಬೇಕು. ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುವ ಜನರಿಗೆ ವೇದಿಕೆ ನೀಡಬೇಕೆಂದು ಹೇಳಿದ ಅವರು ಹಲಸಿನ ಮೌಲ್ಯ ವೃದ್ಧಿಸಲಿ ಎಂದರು.
ಹಲವು ಪ್ರಥಮಗಳಿಗೆ ಹಲಸು ಮೇಳ ಸಾಕ್ಷಿ:
ನವನೀತ ನರ್ಸರಿಯ ವೇಣುಗೋಪಾಲ್ ಶಿಬರ ಅವರು ಮಾತನಾಡಿ, ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಪರಿಚಯಿಸಲು ಹಲಸಿನ ಮೇಳ ರೂಪಿಸಿದ್ದೇವೆ. 7ನೇ ವರ್ಷದ ಹಲಸಿನ ಮೇಳ ಯಶಸ್ಸು ಕಂಡಿದೆ. ಊರು ಅಭಿವೃದ್ಧಿಯಾಗಲು ಸಮುದಾಯದ ನಾಗರಿಕರೇ ಕಾರಣ. ಆರ್ಥಿಕ ಅಭಿವೃದ್ಧಿಗೆ ಇಲ್ಲಿಯ ಉದ್ಯಮ ಅಭಿವೃದ್ದಿಯಾಗಬೇಕು. ನಮ್ಮ ಊರು ಕೃಷಿ ಪ್ರಧಾನ. ಇಲ್ಲಿ ಕೃಷಿ ಬೆಳೆಯಬೇಕು. ಹಣ್ಣು ಕೃಷಿಗೆ ಮಾರುಕಟ್ಟೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಇಂತಹ ಮೇಳ ಅಗತ್ಯ. ಇದಕ್ಕೆ ಸ್ಥಳೀಯರ ಪ್ರೋತ್ಸಾಹವು ಅಗತ್ಯ ಎಂದರು. ಕೇವಲ 15 ಸ್ಟಾಲ್ಗಳಿಂದ ಹಲಸು ಹಣ್ಣಿನ ಮೇಳ ಆರಂಭಗೊಂಡಿತ್ತು. ಈ ಬಾರಿ ಮೇಳದಲ್ಲಿ 90 ಮಳಿಗೆಗಳಿದ್ದವು. ಮೇಳದಲ್ಲಿ ಪ್ರತಿ ವರ್ಷವೂ ಎರಡು ಮೂರು ರೀತಿಯ ಹೊಸ ಉತ್ಪನ್ನಗಳ ಬಿಡುಗಡೆ ಆಗುತ್ತಿದೆ. ಇಲ್ಲಿ ಆಗುವ ಹಲಸು ಮೇಳವನ್ನು ಬೇರೆ ಕಡೆಯವರೂ ಫೋಲೋ ಮಾಡುತ್ತಿದ್ದಾರೆ. ಹೊಸ ಉತ್ಪನ್ನಗಳ ಬಿಡುಗಡೆ, ಹಲಸಿನ ಯಕ್ಷಗಾನ ತಾಳಮದ್ದಳೆ, ಗೇಮ್ಸ್, ಹಲಸು ಹಣ್ಣು ಮೃಷ್ಟಾನ್ನ ಬೋಜನದ ಮೂಲಕ ಹಲಸು ಹಣ್ಣು ಮೇಳ ಹಲವು ಪ್ರಥಮಗಳಿಗೆ ಕಾರಣವಾಗಿದೆ. ಕೃಷಿ ಅಕಾಡೆಮಿ ಸ್ಥಾಪನೆಗೂ ಮುಂದಿನ ದಿನ ಪ್ರಯತ್ನ ಮಾಡಲಾಗುವುದು ಎಂದರು.
ವಿದೇಶದಲ್ಲೂ ಮೇಳೈಸುತ್ತಿದೆ;
ಜೆಕ್ಯಾಮ್ ಅಧ್ಯಕ್ಷ ಧಿರಜ್ ಬಿ ಉದ್ಯಾವರ ಅವರು ಮಾತನಾಡಿ, ಹಲಸು ವಿದೇಶದಲ್ಲೂ ಮೇಳೈಸುತ್ತಿದೆ. ದೇಶಿಯ ಉತ್ಪನ್ನಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಹಲಸಿನ ಮೌಲ್ಯವರ್ಧನೆ ನಿರಂತರ ಆಗುತ್ತಿರಲಿ ಎಂದರು.
ವೇದಿಕೆಯಲ್ಲಿ ಜೆಕ್ಯಾಮ್ ಪುತ್ತೂರು ಟೇಬಲ್ 1.0 ಇದರ ಅಧ್ಯಕ್ಷ ಪಸುಪತಿ ಶರ್ಮ ಉಪಸ್ಥಿತರಿದ್ದರು. ನವತೇಜ ಟ್ರಸ್ಟ್ನ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ವಂದಿಸಿದರು. ಅಡಿಕೆ ಪತ್ರಿಕೆ ಉಪಸಂಪಾದಕ ನಾ ಕಾರಂತ ಪೆರಾಜೆ ನಿರೂಪಿಸಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ:
ಮಕ್ಕಳಿಗೆ ನಡೆದ ಪ್ರಬಂಧ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಕೊಟ್ಟಿಗೆ ಕಟ್ಟುವ ಪ್ರಾತ್ಯಕ್ಷಿತೆಯನ್ನು ರೇಖಾ ಹೇರಳೆ ಅವರು ನೀಡಿದರು. ಭಟ್ ಆಂಡ್ ಭಟ್ನ ಸುದರ್ಶನ್ ಭಟ್ ವಿವರಣೆ ನೀಡಿದರು. ಪಶುಪತಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಮೇಳದಲ್ಲಿ ಬೆಳಗ್ಗೆ ಹಲಸಿನ ಮೌಲ್ಯವರ್ಧನೆ ಕಾರ್ಯಾಗಾರ ನಡೆಯಿತು.

ಮಧ್ಯಾಹ್ನ ಹಲಸಿನ ಮೃಷ್ಟಾನ್ನ ಭೋಜನ:
ಮೇಳದಲ್ಲಿ ಮಧ್ಯಾಹ್ನ ಹಲಸು-ಹಣ್ಣಿನ ಭೋಜನ ನಡೆಯಿತು. ರೂ.250 ನೀಡಿ ಗ್ರಾಹಕರು ಭೋಜನ ಸವಿದರು. ಹಲಸಿನ ಭೋಜನದಲ್ಲಿ ಪುಳಿಂಜಿ, ಹಲಸಿನಕಾಯಿ ಪಲ್ಯ, ಹಲಸು ಗಸಿ, ಪೂರಿ, ಆಮ್ರಸ್, ಅಪ್ಪೆಸಾರು, ಕಾಡು ಮಾವಿನಹಣ್ಣು ಗೊಜ್ಜು, ಕುಚ್ಚಲು ಅನ್ನ, ಬೆಳ್ತಿಗೆ ಅನ್ನ, ಬೇಳೆಸಾರು, ಹಲಸಿನ ಹಪ್ಪಳ, ಹಲಸು ಸಾಂಬಾರು, ಬೆರಟಿ ಪಾಯಸ, ಹಹ ಸುಟ್ಟವು, ಜಾಕ್ ಬಿರಿಯಾನಿ, ರಾಯತ, ಹಲಸು ಬೋಂಡಾ, ಮ್ಯಾಂಗೋ ಮೊಹಬತ್, ಹಹ ಐಸ್ಕ್ರೀಂ, ಹಹ ಜಿಲೇಬಿ ಸಹಿತ ಹಲವು ಖಾದ್ಯಗಳು ಭೋಜನದಲ್ಲಿತ್ತೆಂದು ಸಂಘಟಕರು ತಿಳಿಸಿದ್ದಾರೆ.