ಪುತ್ತೂರು:ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ರಾಜ್ಯ ಮತ್ತು ದೇಶಾದ್ಯಂತ ಮಾರುಕಟ್ಟೆ ಜಾಲವನ್ನು ಹೊಂದಿರುವ, ಇಲ್ಲಿನ ಮುಕ್ವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಧಿ ಫುಡ್ಸ್'ನ ಮ್ಹಾಲಕ ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು
ಇನೋವೇಟಿವ್ ಎಂಟ್ರೆಪ್ರೆನ್ಯೂರ್-ಅವಾರ್ಡ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ.
ಜೂ.8ರಂದು ಬೆಂಗಳೂರಿನ ಹೆಸರಘಟ್ಟದಲ್ಲಿ `ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದಡಿಯಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಆಹಾರ ಮತ್ತು ಕೃಷಿ ಸಮ್ಮೇಳನದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ದೇಶದ 700 ಜಿಲ್ಲೆಗಳ 2,000ಕ್ಕೂ ಅಧಿಕ ವಿಜ್ಞಾನಿಗಳು ಮತ್ತು ರೈತರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ರಾಧಾಕೃಷ್ಣ ಇಟ್ಟಿಗುಂಡಿಯವರು ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಚ್ಚು ಒತ್ತುಕೊಟ್ಟು ರಾಷ್ಟ್ರಾದ್ಯಂತ ಮಾರುಕಟ್ಟೆ ಜಾಲವನ್ನು ವಿಸ್ತರಿಸುವ ಮುಂದಿನ ಗುರಿ ಹೊಂದಿದ್ದಾರೆ.
ಈಗಾಗಲೇ ಪುತ್ತೂರಿನಲ್ಲಿ ಸುಮಾರು ಐದಾರು ವರ್ಷಗಳಿಂದ ಹಲಸಿನ ಹಣ್ಣಿನ ಮೌಲ್ಯೋತ್ಪಾದಕ ಉತ್ಪನ್ನಗಳನ್ನು ತಯಾರಿಸುತ್ತಿದ್ದು ದೇಶಾದ್ಯಂತ ಇವರ ಉತ್ಪನ್ನಗಳು ಮಾರಾಟವಾಗುತ್ತಿವೆ.ಉದ್ಯಮ ಕ್ಷೇತ್ರದಲ್ಲಿನ ಇವರ ಈ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.