
ಪುತ್ತೂರು: ದ.ಕ ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕಾ ವಿಭಾಗ ಇಲಾಖೆ ಮಂಗಳೂರು ಇದರ 2024-25ನೇ ಸಾಲಿನ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಸುಧಾರಿತ ಉಪಕರಣಗಳ ವಿತರಣೆಯು ಜೂ.9ರಂದು ಶಾಸಕರ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಸವಲತ್ತುಗಳನ್ನು ವಿತರಿಸಿದ ಶಾಸಕ ಅಶೋಕ್ ಕುಮಾರ ರೈ ಮಾತನಾಡಿ, ಸರಕಾರ ವಿವಿಧ ವೃತ್ತಿಗಳಿಗೆ ಅನುಸಾರವಾಗಿ ಹಲವು ಸವಲತ್ತುಗಳನ್ನು ವಿತರಿಸುತ್ತಿದೆ. ಇದು ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದ್ದು, ಇವುಗಳ ಸದ್ಬಳಕೆಯಾಗಬೇಕು. ಉಚಿತವಾಗಿ ದೊರೆತಿದೆ ಎಂದು ಯಾರೂ ಕೂಡ ತುಕ್ಕು ಹಿಡಿಯುವಂತೆ ಮಾಡಬಾರದು ಎಂದರು. ಕಾರ್ಮಿಕ ಇಲಾಖೆಯಿಂದಲೂ ವಿವಿಧ ಕಿಟ್ಗಳನ್ನು ವಿತರಿಸುತ್ತಿದೆ. ಕಟ್ಟಡ ಕಾರ್ಮಿಕರು, ಚಾಲಕರಿಗೆ ಟ್ರಸ್ಟ್ನಿಂದ ಉಚಿತ ನೋಂದಣಿಯನ್ನು ಮಾಡಲಾಗುತ್ತಿದೆ. ನಾವು ಮೈಕ್ನಲ್ಲಿ ಮಾತನಾಡಿದನ್ನು ಅನುಷ್ಠಾನ ಮಾಡುತ್ತೇವೆ ಎಂದ ಅವರು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಯಾರೂ ನಿವೇಶನ ರಹಿತರಿಬಾರದು. ನಿವೇಶನ ವಿತರಣೆಯ ಜೊತೆಗೆ ಸಂಕಷ್ಟದಲ್ಲಿರುವವರಿಗೆ ಮನೆ ಕಟ್ಟಿಕೊಡುವ ಯೋಜನೆಯೂ ಇದೆ ಎಂದು ಶಾಸಕರು ಹೇಳಿದರು.
99 ಮಂದಿಗೆ ವಿವಿಧ ಸವಲತ್ತು ವಿತರಣೆ:
ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ 23 ಮಂದಿ ಗಾರೆ ಕೆಲಸಗಾರರು, 31 ಮಂದಿ ಬಡಗಿ, 30 ಮಂದಿಗೆ ಹೊಲಿಗೆ ಯಂತ್ರ, 9 ಮಂದಿಗೆ ಇಲೆಕ್ಟ್ರಿಕಲ್, 6 ಮಂದಿಗೆ ಆಟೋಮೊಬೈಲ್ ಕಿಟ್ ಸೇರಿದಂತೆ ಒಟ್ಟು 99 ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.
ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಹೆಗ್ಡೆ ಸ್ವಾಗತಿಸಿ, ವಂದಿಸಿದರು.