ಆಲಂಕಾರು: ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ಮೇ.30ರಂದು ಸುರಿದ ಧಾರಕಾರ ಮಳೆಗೆ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದ್ದು, ಇದರ ಪಕ್ಕದ ಕೃಷಿ ಭೂಮಿಗಳಿಗೆ ಹಾನಿಯಾಗಿರುವ ಪ್ರದೇಶಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಜೂ.10 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸ್ಥಳದಿಂದಲೇ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲ ವರ್ಗೀಸ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿ ಘಟನೆಯ ಬಗ್ಗೆ ವಿವರಿಸಿ ಸಂಬಂಧಪಟ್ಟ ಇಂಜಿನಿಯರ್ ಸಮೇತ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ ಎಸ್ಟೀಮೇಟ್ ತಯಾರಿಸಿ ವರದಿ ನೀಡುವಂತೆ ತಿಳಿಸಿದರು.
ರಸ್ತೆ ಕುಸಿದ ಭಾಗದ ಮುಂದುವರಿದ ಎರಡು ಕಡೆಗಳ ರಸ್ತೆ ಇಳಿಜಾರು ಪ್ರದೇಶವಾಗಿದ್ದು, ಮಳೆ ನೀರು ಈಗಾಗಲೇ ಕುಸಿದ ಜಾಗಕ್ಕೆ ಬಾರದ ರೀತಿಯಲ್ಲಿ ಇಕ್ಕೆಡೆಗಳಲ್ಲಿ ಸಮರ್ಪಕ ಚರಂಡಿ ನಿರ್ಮಾಣ ಮಾಡಲು ಗ್ರಾ.ಪಂ ಗೆ ಸೂಚಿಸಿದರು. ನೀರು ಸಂಚರಿಸುವ ಜಾಗದಲ್ಲಿ ಸ್ಥಳೀಯರ ತಕರಾರು ಇದ್ದು ಗ್ರಾ.ಪಂ ವತಿಯಿಂದ ಚರಂಡಿ ನಿರ್ಮಿಸುವಾಗ ಸ್ಥಳಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಗೊಂದಲಕ್ಕೆ ಆಸ್ಪದ ನೀಡದಂತೆ ಕ್ರಮವಹಿಸಬೇಕೆಂದು ಗ್ರಾ.ಪಂಗೆ ಸಲಹೆ ನೀಡಿದರು. ಸಹಾಯಕ ಆಯುಕ್ತರ ವರದಿಯ ಮೇಲೆ ಕ್ರಮಕೈಗೊಳ್ಳಲಾಗುವುದು ಸ್ಥಳೀಯರಿಗೆ ಭರವಸೆ ನೀಡಿದರು.
ಕಕ್ವೆಯ ಈ ರಸ್ತೆಯೇ 10 ಮನೆಗಳಿಗೆ ಸಂಪರ್ಕಕೊಂಡಿಯಾಗಿದೆ. ರಸ್ತೆ ಕುಸಿತದಿಂದ ಭಾಹ್ಯ ಸಂಪರ್ಕ ಕಳೆದುಕೊಂಡಿದ್ದೇವೆ. ಈ ಭಾಗದ ಹೈನುಗಾರರು, ಶಾಲಾ ವಿದ್ಯಾರ್ಥಿಗಳು ದಿನ ನಿತ್ಯ ತೆರಳಲು ಈ ರಸ್ತೆಯನ್ನು ಅವಲಂಬಿಸಿದ್ದೇವೆ. ಈ ಭಾಗದಲ್ಲಿ ಯುವಕನೋರ್ವ ಅನಾರೋಗ್ಯ ಪೀಡಿತನಾಗಿ ಮಲಗಿದ ಸ್ಥಿತಿಯಲ್ಲಿದ್ದಾನೆ, ಆರೋಗ್ಯ ತಪಾಸಣೆ ನಡೆಸಲು 15ದಿನಕೊಮ್ಮೆ ಆಸ್ಪತ್ರೆಗೆ ತೆರಳಬೇಕಾಗಿದೆ ರಸ್ತೆ ಕುಸಿತದಿಂದ ಸಂಕಷ್ಟ ಎದುರಾಗಿದೆ ಎಂದು ಶಾಸಕರಿಗೆ ಸ್ಥಳಿಯರು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಪ್ರಸಾದ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರಾಮಚಂದ್ರ ನಾಯ್ಕ ಏಣಿತ್ತಡ್ಕ, ಚಾರ್ವಾಕ ಸಿ. ಎ ಬ್ಯಾಂಕ್ ಅಧ್ಯಕ್ಷ ಗಣೇಶ್ ಉದನಡ್ಕ, ಆಲಂಕಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಶೀಲ,ಉಪಾಧ್ಯಕ್ಷ ರವಿಕುಂಞಲಡ್ಡ. ಸದಸ್ಯೆ ಸುಮತಿ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ತಾಲೂಕು ಪಂಚಾಯತಿ ಮಾಜಿ ಸದಸ್ಯ ದಯಾನಂದ ಗೌಡ ಆಲಡ್ಕ, ಆಲಂಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಕೇಶವ ಗೌಡ ಆಲಡ್ಕ,ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಶಿವಣ್ಣ ಗೌಡ ಕಕ್ವೆ ಮನವಿ ನೀಡಿದರು.