ಪುತ್ತೂರು: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ, ಹಾಗೂ ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇವರ ಸಹಯೋಗದೊಂದಿಗೆ ಜೂ.7ರಂದು ಕೊಂಬೆಟ್ಟು ಮರಾಠಿ ಸಮಾಜ ಭವನ ಮತ್ತು ಪುಣಚ ತೋರಣಕಟ್ಟೆ ಮರಾಠಿ ಸಮಾಜ ಭವನದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಡಿ ಪೂರ್ವ ಮುಂಗಾರು ಕೃಷಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜರ್ಬೀಜೋಪಚಾರದ ಪದ್ಧತಿ ಪ್ರಾತ್ಯಕ್ಷಿಕೆ, ಗೇರು ಕೃಷಿಯ ಮಾಹಿತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆಯ ಕುರಿತ ಮಾಹಿತಿ, ಮಣ್ಣು ಪರೀಕ್ಷೆ ಆಧಾರಿತ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಲಾಯಿತು. ಅಡಿಕೆ ಬೆಳೆಯಲ್ಲಿ ಪೂರ್ವ ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳಾದ ಬೋರ್ಡೋ ದ್ರಾವಣ ತಯಾರಿಕೆ ಹಾಗೂ ಕೊಳೆ ರೋಗ ನಿರ್ವಹಣೆಗಾಗಿ ಅದರ ಸರಿಯಾದ ಸಿಂಪಡನೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ್, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧಾ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ. ಜೆ. ರಮೇಶ, ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ. ಅಶ್ವತಿ, ವಿಜ್ಞಾನಿ ಡಾ. ಭಾಗ್ಯ ಹೆಚ್. ಪಿ., ಕೆವಿಕೆಯ ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್. ಹಾಗೂ ಪುತ್ತೂರು ತಾಲೂಕಿನ ಮತ್ತು ಪುಣಚ ಗ್ರಾಮದ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದರು.