ಸಿಗದ ತಂದೆ-ತಾಯಿ ಪ್ರೀತಿ – ಸಾಕು ತಂದೆ, ತಾಯಿಯೇ ಆಸರೆ- ’ಅಗ್ನಿವೀರ’ನಾದ ಮರ್ದಾಳದ ಪುನೀತ್‌ರಾಜ್

0

@ಹರೀಶ್ ಬಾರಿಂಜ

ಕಡಬ: ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡರೂ ಧೃತಿಗೆಡದೆ ಸಾಕು ತಂದೆ-ತಾಯಿಯ ಆಸರೆಯಲ್ಲಿ ಬೆಳೆದ ಯುವಕನೋರ್ವ ತನ್ನ ಸಾಧನೆಯಿಂದ ಈಗ ಅಗ್ನಿವೀರನಾಗಿ ಆಯ್ಕೆಗೊಂಡು ದೇಶಸೇವೆಗೆ ಸಿದ್ಧನಾಗಿ ನಿಂತಿರುವುದು ಊರೇ ಹೆಮ್ಮೆ ಪಡುವಂತಾಗಿದೆ.

ಇಂತಹ ಸಾಧನೆ ಮಾಡಿರುವುದು 21ರ ಹರೆಯದ ಯುವಕ ಐತ್ತೂರು ಗ್ರಾಮದ ಮಾಲ ನಿವಾಸಿ ಪುನೀತ್‌ರಾಜ್. ಪುನೀತ್ ಮೂಲತಃ ಸಕಲೇಶಪುರ ತಾಲೂಕಿನ ಹೊಂಗದಹಳ್ಳ ನಿವಾಸಿ ಅಪ್ಪಣ್ಣ ಹಾಗೂ ಗಿರಿಜಾ ದಂಪತಿ ಪುತ್ರ. 2004ರಲ್ಲಿ ಗಿರಿಜಾ ಅವರು 7 ತಿಂಗಳ ಗರ್ಭವಾಸ್ಥೆಯಲ್ಲಿರುವಾಗಲೇ ಅಪ್ಪಣ್ಣ ಅವರು ಆಕಸ್ಮಿಕ ಘಟನೆಯೊಂದರಲ್ಲಿ ಮೃತಪಟ್ಟಿದ್ದರು. ಇಂತಹ ಪರಿಸ್ಥಿತಿಯಲ್ಲೇ ಗಂಡನನ್ನು ಕಳೆದುಕೊಂಡ ಗಿರಿಜಾ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ಆಸರೆಯಾಗಿದ್ದು ಐತ್ತೂರು ಗ್ರಾಮದ ಮಾಲ ಕುಟುಂಬದಲ್ಲಿದ್ದ ಅಕ್ಕ ಸೇಸಮ್ಮ ಮತ್ತು ಅವರ ಗಂಡ ಶೀನಪ್ಪ ಗೌಡ. ಬಳಿಕ ಪುನೀತ್‌ರಾಜ್ ಹುಟ್ಟು ಮಾಲ ಮನೆಯಲ್ಲೇ ಆಯಿತು. ಮಾಲ ಮನೆಯಲ್ಲೇ ಪುನೀತ್‌ರಾಜ್ ತನ್ನ ಬಾಲ್ಯ ಕಳೆಯಬೇಕಾಗಿ ಬಂತು. ಇಲ್ಲಿಂದಲೇ ಅಂಗನವಾಡಿ, 5ನೇ ತರಗತಿ ತನಕ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಳಿಕ ಪುತ್ತೂರಿನ ಸರಕಾರಿ ಹಾಸ್ಟೆಲ್‌ವೊಂದರಲ್ಲಿ ಉಳಿದುಕೊಂಡು 6ನೇ ತರಗತಿಯಿಂದ ಪದವಿ ತನಕ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಅಂತಿಮ ಪದವಿ ಕಲಿಯುತ್ತಿದ್ದಾರೆ. ಈ ನಡುವೆ 2021ನೇ ಇಸವಿಯಲ್ಲಿ ಪುನೀತ್‌ರಾಜ್ ಅವರ ತಾಯಿಯೂ ಅನಾರೋಗ್ಯದಿಂದ ನಿಧನರಾದರು. ಹೆತ್ತ ತಾಯಿಯನ್ನೂ ಕಳೆದುಕೊಂಡ ಪುನೀತ್‌ರಾಜ್ ತಬ್ಬಲಿಯಾದರೂ ಧೃತಿಗೆಡದೆ ವಿದ್ಯಾಭ್ಯಾಸ ಮುಂದುವರಿಸಿದರು. ರಜೆಯ ಸಮಯದಲ್ಲಿ ಊರಿಗೆ ಬರುತ್ತಿದ್ದ ಪುನೀತ್‌ರಾಜ್ ಸಣ್ಣಪುಟ್ಟ ಕೆಲಸಗಳಿಗೆ ಹೋಗುತ್ತಿದ್ದರು.

ಮಿಲಿಟರಿಗೆ ಸೇರಬೇಕೆಂಬ ಹಂಬಲ:
ಬಾಲ್ಯದ ದಿನದಿಂದಲೇ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಪ್ರದರ್ಶಿಸುತ್ತಿದ್ದ ಪುನೀತ್‌ರಾಜ್‌ಗೆ ಅವನ ಸಾಕು ತಂದೆಯ ತಮ್ಮ ದೇವಯ್ಯ ಗೌಡ ಅವರು, ನೀನು ದೊಡ್ಡವನಾದ ಮೇಲೆ ಮಿಲಿಟರಿ ಸೇವೆಗೆ ಸೇರಬೇಕು ಎಂದು ಕಿವಿ ಮಾತು ಹೇಳುತ್ತಾ ಬಂದಿದ್ದರು. ಇದಕ್ಕೆ ಪೂರಕವಾಗಿ ಪುನೀತ್‌ರಾಜ್ ಚಿಕ್ಕ ಪ್ರಾಯದಿಂದಲೇ ಆಟೋಟ ಸ್ಪರ್ಧೆಗಳು, ಯೋಗ, ವ್ಯಾಯಾಮ ಮುಂತಾದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾ ಬಂದಿದ್ದರು. ದೇವಯ್ಯ ಗೌಡರು ಪುನೀತ್‌ರಾಜ್‌ಗೆ ಸಲಹೆ ಸೂಚನೆ ನೀಡುತ್ತಾ ಅವನ ಬೆಳವಣಿಗೆಗೆ ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರ ನೀಡಿದರು. ಇವೆಲ್ಲದರ ಫಲವಾಗಿಯೇ ಪುನೀತ್‌ರಾಜ್ ಈಗ ದೇಶಸೇವೆಗೆ ಸಿದ್ಧರಾಗಿ ನಿಂತಿದ್ದಾರೆ.

ಅಗ್ನಿವೀರನಾಗಿ ಆಯ್ಕೆ:
2024ರ ಸೆಪ್ಟಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ ಆಯೋಜನೆ ಮಾಡಿದ ಅಗ್ನಿವೀರ ನೇಮಕಾತಿ ಶಿಬಿರದಲ್ಲಿ ಸುಮಾರು 25,೦೦೦ ಅಭ್ಯರ್ಥಿಗಳು ಭಾಗವಹಿಸಿ ಕೇವಲ 7೦೦ ಯುವಕರು ಆಯ್ಕೆಯಾಗಿದ್ದರು. ಅದರಲ್ಲಿ ಪುನೀತ್‌ರಾಜ್ ಕೂಡ ಒಬ್ಬರು. ಈತ ಯೋಗಾಸನ, ಖೋಖೋ, ಅಥ್ಲೆಟಿಕ್ಸ್ ಮತ್ತು ಎನ್‌ಸಿಸಿ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡು ವಿಶ್ವವಿದ್ಯಾನಿಲಯ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು ಅಗ್ನಿವೀರ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ಹೊರ ಹೊಮ್ಮಲು ಪೂರಕವಾಯಿತು.

ತರಬೇತಿಯೂ ಪೂರ್ಣ:
ಅಗ್ನಿವೀರನಾಗಿ ಆಯ್ಕೆಗೊಂಡ ಪುನೀತ್‌ರಾಜ್ ಮಹಾರಾಷ್ಟ್ರದ ನಾಸಿಕ್‌ನಲ್ಲಿ 7 ತಿಂಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪಂಜಾಬ್‌ನ ಫರೀದ್ಕೋಟ್‌ನಲ್ಲಿ ದೇಶಸೇವೆಗೆ ಹಾಜರಾಗಲು ಕರೆಯೂ ಬಂದಿದೆ.
ಒಟ್ಟಿನಲ್ಲಿ ಬಾಲ್ಯದಲ್ಲೇ ತಂದೆ, ತಾಯಿ ಪ್ರೀತಿಯಿಂದ ವಂಚಿತನಾಗಿ ಸಾಕು ತಂದೆ, ತಾಯಿಯ ಹಾಗೂ ತನ್ನನ್ನು ಬೆಳೆಸಿದವರ ಪ್ರೀತಿಗೆ ವಂಚನೆ ಮಾಡದೇ ಬೆಳೆದ ಪುನೀತ್‌ರಾಜ್ ಕುಮಾರ್ ಕೋಟ್ಯಾಂತರ ಭಾರತೀಯರು ತಾಯಿಯಂತೆ ಪೂಜಿಸುವ ಭಾರತ ಮಾತೆಯ ಸೇವೆಗೆ ಸಿದ್ಧನಾಗಿ ನಿಂತಿರುವುದು ಹೆಮ್ಮೆಯ ವಿಚಾರವಾಗಿದೆ. ಪುನೀತ್‌ರಾಜ್‌ಗೆ ಶುಭವಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ.


ಮಾಲ ಕುಟುಂಬಕ್ಕೆ ಕೀರ್ತಿ;
ಪುನೀತ್‌ರಾಜ್ ಅಗ್ನಿವೀರನಾಗಿ ದೇಶಸೇವೆಗೆ ಸೇರ್ಪಡೆಯಾಗಿರುವುದು ನಮ್ಮ ಮಾಲ ಕುಟುಂಬಸ್ಥರಿಗೆ ಕೀರ್ತಿ ತಂದಂತಾಗಿದೆ. ಮಾಲ ಮನೆಯ ನಿಸ್ವಾರ್ಥ ಸೇವೆಯೂ ಒಬ್ಬ ಯೋಧನನ್ನು ದೇಶ ಸೇವೆಗೆ ಕಳಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇವನ ಯಶಸ್ವಿನ ಮೂಲ ಆಧಾರ ಸ್ತಂಭಗಳಾದ ತಾಯಿ ದಿ| ಗಿರಿಜ, ಸಾಕು ತಂದೆ ಮಾಲ ಶೀನಪ್ಪ ಗೌಡ, ತಾಯಿ ಶೇಷಮ್ಮ, ಸೋದರ ಮಾವ ಕಮಲಾಕ್ಷ ಮತ್ತು ಪುನೀತ್‌ರಾಜ್‌ಗೆ ವಿದ್ಯಾಭ್ಯಾಸ ನೀಡಿದ ಗುರುಗಳಾಗಿದ್ದಾರೆ. ಇವರೆಲ್ಲರ ಶ್ರಮ ಪುನೀತ್‌ರಾಜ್ ದೇಶ ಸೇವೆಗೆ ಸೇರುವುದರೊಂದಿಗೆ ಫಲಶೃತಿಯಾಗಿದೆ. ಇವನ ಸಾಧನೆ ಇತರ ಮಕ್ಕಳಿಗೆ ಪ್ರೇರಣೆಯಾಗಲಿ.
-ದೇವಯ್ಯ ಗೌಡ ಮಾಲ
(ಸಾಕು ತಂದೆ ಶೀನಪ್ಪ ಗೌಡರ ಸಹೋದರ)

ನಿವೃತ್ತ ಮಾನವ ಸಂಪನ್ಮೂಲ ವ್ಯವಸ್ಥಾಪಕರು ಮತ್ತು ಗೌರವ ಕಾರ್ಯದರ್ಶಿ ಎನ್‌ಐಪಿಎಂ ಕರ್ನಾಟಕ ಚಾಪ್ಟರ್
ನಾನು ಮಾಲ ಮನೆಯಲ್ಲಿ ಮಗುವಾಗಿ ಬೆಳೆದು ದೊಡ್ಡವನಾಗಿ ಪುತ್ತೂರಿನ ಶಾಲೆಗೆ ಸೇರಿದೆ. ನನ್ನ ಯಶಸ್ಸಿಗೆ ಕಾರಣವಾದ ಈ ಮಾಲ ಮನೆ ಹಾಗೂ ಆಸರೆಕೊಟ್ಟು ಸಾಕಿದ ಅಪ್ಪ-ಅಮ್ಮನ ಋಣ ತೀರಿಸಲು ನನ್ನಿಂದ ಸಾಧ್ಯವಿಲ್ಲ. ಪ್ರೀತಿಯಿಂದ ನೋಡಿಕೊಂಡ ಸೋದರ ಮಾವ ಕಮಲಾಕ್ಷ, ಮಾರ್ಗದರ್ಶನ ನೀಡಿದ ಶಿಕ್ಷಕರಿಗೂ ಚಿರಋಣಿಯಾಗಿರುತ್ತೇನೆ.
-ಪುನೀತ್‌ರಾಜ್, ಅಗ್ನಿವೀರ

LEAVE A REPLY

Please enter your comment!
Please enter your name here