ನಿವೇಶನ ಹಂಚಿಕೆ: ಸಚಿವ ಜಮೀರ್‌ಗೆ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನ ಹಂಚುವಲ್ಲಿ ಶೀಘ್ರಕ್ರಮ ಕೈಗೊಳ್ಳುವಂತೆ ಪುತ್ತೂರು ಶಾಸಕ ಅಶೋಕ್ ರೈ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್‌ಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.


ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ13 ಗ್ರಾಮಗಳಲ್ಲಿ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ರಾಜೀವ ಗಾಂಧಿ ವಸತಿ ನಿಗಮದ ಅಧೀನದಲ್ಲಿ ಈ ನಿವೇಶನವನ್ನು ಬಡವರಿಗೆ ವಿತರಿಸಬೇಕಿದೆ. ಇದಕ್ಕಾಗಿ ತನ್ನ ಕ್ಷೇತ್ರದಲ್ಲಿ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು , ನಿವೇಶನ ಹಂಚಿಕೆಗೆ ಪೂರ್ಣಗೊಂಡ ಜಾಗವನ್ನು ನಿವೇಶನ ರಹಿತರಿಗೆ ಹಂಚುವಲ್ಲಿ ಸರಕಾರ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಕನಿಷ್ಠ 500 ನಿವೇಶನಗಳನ್ನಾದರೂ ಹಂಚುವಲ್ಲಿ ಆದ್ಯತೆ ನೀಡಬೇಕು ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದ್ದಾರೆ.
ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಶಾಸಕ ಅಶೋಕ್ ರೈ ಅವರು ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಶಾಸಕರಾದ ಬಳಿಕ ನಿವೇಶನ ರಹಿತರಿಂದ ಅರ್ಜಿಯನ್ನು ಸ್ವೀಕಾರ ಮಾಡಿದ್ದರು. ಬಡವರಿಗೆ ನೀಡಲೆಂದೇ 13 ಗ್ರಾಮಗಳಲ್ಲಿ ಈಗಾಗಲೇ ಸರಕಾರಿ ಜಾಗವನ್ನು ಗುರುತಿಸಲಾಗಿದ್ದು, ಸೈಟ್ ಅಭಿವೃದ್ದಿ ಮಾಡುವುದು ಮಾತ್ರ ಬಾಕಿ ಉಳಿದಿದೆ.

ಪ್ರಾರಂಭದಲ್ಲಿ 500 ನಿವೇಶನ ಹಂಚಿಕೆ : ಸಚಿವರ ಭರವಸೆ
ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸಚಿವ ಜಮೀರ್ ಅಹ್ಮದ್‌ರವರು ಪ್ರಾರಂಭದಲ್ಲಿ 500ನಿವೇಶನವನ್ನು ಹಂಚುವಲ್ಲಿ ಕ್ರಮಕೈಗೊಳ್ಳಲಾಗುವುದು. ನಿವೇಶನರಹಿತರನ್ನು ಗುರುತಿಸಿ ಅವರಿಗೆ ನಿವೇಶನ ನೀಡುವ ಶಾಸಕರ ಮುತುವರ್ಜಿಯನ್ನು ಸಚಿವರು ಪ್ರಶಂಸಿಸಿದರು.


ಕೊಟ್ಟಮಾತನ್ನು ಎಂದೂ ನಾನು ಮರೆಯಲಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ನಿವೇಶನ ರಹಿತರ ಕುಟುಂಬಗಳಿವೆ. ಈಗಾಗಲೇ ಹಲವು ಗ್ರಾಪಂಗಳಲ್ಲಿ ಅವರು ನಿವೇಶನಕ್ಕಾಗಿ ಅರ್ಜಿ ಹಾಕಿದ್ದಾರೆ. ಅರ್ಜಿ ಹಾಕಿರುವ ಫಲಾನುಭವಿಗಳ ಪೈಕಿ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ಗ್ರಾಮೀಣ ಭಾಗದಲ್ಲಿ ನಿವೇಶನವನ್ನು ನೀಡಲಾಗುತ್ತದೆ. ಜಾಗವನ್ನು ಗುರುತಿಸಲಾಗಿದ್ದು ಇನ್ನು ಸೈಟ್ ಅಭಿವೃದ್ದಿ ಮಾಡಿ ಅದನ್ನು ಹಂಚುವ ಕಾರ್ಯ ಮಾತ್ರ ಉಳಿದಿದೆ. ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಬಡವರಿಗೆ ನಿವೇಶನದ ಹಕ್ಕು ಪತ್ರವನ್ನು ಹಂಚಲಾಗುವುದು. ಈ ಬಗ್ಗೆ ವಸತಿ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ಶೀಘ್ರವೇ ಈ ಕಾರ್ಯ ನೆರವೇರಲಿದೆ.
ಅಶೋಕ್ ರೈ, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here