ಐತ್ತೂರು-ಮಾಲ; ಅಗ್ನಿವೀರ ಪುನೀತ್‌ರಾಜ್‌ಗೆ ಸನ್ಮಾನ

0

ಕಡಬ: ಭಾರತೀಯ ಸೇನೆಗೆ ಅಗ್ನಿವೀರ ಆಗಿ ಆಯ್ಕೆಗೊಂಡ ಪುನೀತ್‌ರಾಜ್‌ರವರಿಗೆ ಅವರ ಸಾಕು ತಂದೆ-ತಾಯಿಗಳಾದ ಐತ್ತೂರು ಗ್ರಾಮದ ಮಾಲ ನಿವಾಸಿ ಶೀನಪ್ಪ ಗೌಡ ಮತ್ತು ಸೇಸಮ್ಮ ಅವರು ತಮ್ಮ ಮಾಲ ಮನೆಯಲ್ಲಿ ಸನ್ಮಾನಿಸಿ ಗೌರವಿಸಿದರು.


ಅತಿಥಿಯಾಗಿದ್ದ ಕಡಬ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅವರು ಮಾತನಾಡಿ, ಪುನೀತ್‌ರಾಜ್ ದೇಶ ಸೇವೆಗೆ ಸೇರಿಕೊಂಡಿರುವುದು ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಊರಿಗೆ ಹೆಸರು ಬಂದಿದೆ. ಒಂದು ಗಿಡನೆಟ್ಟು ಅದನ್ನು ಬೆಳೆಸಲು ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಈ ಮಾಲ ಮನೆಯವರು ಕೊಟ್ಟಿದ್ದೀರಿ. ಅವನಿಗೆ ನಕಾರಾತ್ಮಕವಾಗಿ ಯೋಚನೆ ಮಾಡಲು ಅಥವಾ ಚಿಂತೆ ಮಾಡಲು ಅವಕಾಶ ಕೊಡದೆ ಅವನನ್ನು ಪ್ರೋತ್ಸಾಹಿಸಿದರು. ಪುನೀತ್‌ರಾಜ್ ತನ್ನ ಸ್ವಂತ ತಾಯಿಯ ಸೇವೆ ಮಾಡುವುದರಿಂದ ವಂಚಿತರಾಗಿರಬಹುದು, ಆದರೆ ಭಾರತ ದೇಶದ 144 ಕೋಟಿ ಜನರು ತಾಯಿ ಎಂದು ಪೂಜಿಸುತ್ತಿರುವ ಭಾರತ ಮಾತೆಯ ಸೇವೆ ಮಾಡಲು ಅವಕಾಶ ಪಡೆದಿದ್ದಾನೆ. ಅದಕ್ಕೆ ಅವನಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿ ಶುಭಕೋರಿದರು.
ನಿವೃತ್ತ ಮುಖ್ಯಶಿಕ್ಷಕ, ಐತ್ತೂರು ಗ್ರಾಮದ ಊರ ಗೌಡರಾದ ತಮ್ಮಯ್ಯ ಗೌಡರವರು ಮಾತನಾಡಿ, ತಂದೆ, ತಾಯಿಯನ್ನು ಕಳೆದುಕೊಂಡ ಪುನೀತ್‌ರಾಜ್‌ರವರನ್ನು ತನ್ನ ಕುಟುಂಬ ಸದಸ್ಯನಾಗಿ ಬೆಳೆಸಿ ಅವನನ್ನು ದೇಶ ಸೇವೆಗೆ ಸಮರ್ಪಣೆ ಮಾಡಿರುವ ಮಾಲ ಮನೆಯ ಸೇವೆ ಇಡೀ ಸಮಾಜಕ್ಕೆ ಒಂದು ಮಾದರಿ. ಇದರಲ್ಲಿ ಪುನೀತ್‌ರಾಜ್ ಅವರ ಸಾಕು ತಾಯಿ ಶ್ರೀಮತಿ ಸೇಸಮ್ಮ ಅವರ ಪಾತ್ರ ಬಹಳ ಪ್ರಮುಖ. ಶೀನಪ್ಪ ಗೌಡ ಅವರ ಉದಾರ ಮನಸ್ಸು ಶ್ಲಾಘನೀಯ ಎಂದರು.


ನಿವೃತ್ತ ಸೈನಿಕರಾದ ಓಡಿಯಪ್ಪ ಅವರು ಮಾತನಾಡಿ, ಅಗ್ನಿವೀರ ಸೇವೆಯ ನಾಲ್ಕು ವರ್ಷದ ನಂತರ ಶೇಕಡ 25 ಅಭ್ಯರ್ಥಿಗಳಿಗೆ ಸೇನೆಗೆ ಖಾಯಂ ಆಗಿ ಸೇರ್ಪಡೆಗೊಳ್ಳುವ ಅವಕಾಶವಿದೆ. ಅದನ್ನು ಬಳಸಿಕೊಳ್ಳಲು ಪುನೀತ್‌ರಾಜ್ ಪ್ರಾರಂಭದಿಂದಲೇ ತನ್ನ ಕಾರ್ಯಕ್ಷಮತೆಯನ್ನು ಅಭಿವೃದ್ಧಿಪಡಿಸಿಕೊಂಡು ತಯಾರು ಮಾಡಿಕೊಳ್ಳಬೇಕು ಎಂದರು. ಪುನೀತ್‌ರಾಜ್ ಅವರ ಅಂಗನವಾಡಿ ಟೀಚರ್ ಆದ ಶರ್ಲಿ ಅವರು ಮಾತನಾಡಿ, ಪುನೀತ್ ಕೇವಲ ಮಾಲ ಮನೆಯ ಮಗನಲ್ಲ, ಒಬ್ಬ ವಿದ್ಯಾರ್ಥಿಯಾಗಿ ಅವನು ನನ್ನ ಮಗನು ಕೂಡ ಎಂದು ಭಾವಿಸಿದ್ದೇನೆ. ಪುನೀತ್‌ನ ಬೆಳವಣಿಗೆಯಲ್ಲಿ ಮಾಲ ಮನೆಯ ಕೊಡುಗೆ ಅತ್ಯಂತ ದೊಡ್ಡದು. ಶೀನಪ್ಪ ಗೌಡ ಮತ್ತು ಸೇಸಮ್ಮನವರು ಬಹಳ ದೊಡ್ಡ ಪುಣ್ಯ ಕಾರ್ಯ ಮಾಡಿದ್ದಾರೆ ಎಂದರು.

ನಿವೃತ್ತ ಮಾನವ ಸಂಪನ್ಮೂಲ ವ್ಯವಸ್ಥಾಪಕ, ಎನ್‌ಐಪಿಎಂ ಕರ್ನಾಟಕ ಚಾಪ್ಟರ್ ಇದರ ಗೌರವ ಕಾರ್ಯದರ್ಶಿಯಾಗಿರುವ ದೇವಯ್ಯ ಗೌಡ ಮಾಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಉದ್ದೇಶಿತ ಜೀವನದ ಗುರಿಯನ್ನು ತಲುಪಲು ಅವರಿಗೆ ನಿರಂತರವಾಗಿ ಪ್ರೋತ್ಸಾಹ ನೀಡಿದಲ್ಲಿ ಖಚಿತವಾಗಿ ಯಶಸ್ಸು ದೊರಕುತ್ತದೆ ಎಂಬುದಕ್ಕೆ ಪುನೀತ್‌ರಾಜ್ ಅವರ ಸಾಧನೆಯೇ ಸಾಕ್ಷಿ ಎಂದರು.

ಪುನೀತ್‌ರಾಜ್‌ನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಮಿನಿ, ಮರ್ದಾಳದ ಸಂತ ಮೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಫಿಲಿಪ್, ಸುಬ್ರಹ್ಮಣ್ಯದಲ್ಲಿ ಉಪಮುಖ್ಯಶಿಕ್ಷಕರಾಗಿರುವ ಆನಂದ, ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವತ್ಸಲ, ಪುತ್ತೂರಿನ ತಾಂತ್ರಿಕ ತರಬೇತಿ ಕೇಂದ್ರದ ಪ್ರಕಾಶ್, ಮಾಲ ಮನೆಯ ಕುಟುಂಬಸ್ಥರು, ನೆಂಟರಿಷ್ಟರು ಶುಭ ಹಾರೈಸಿದರು.

ಕೊಣಾಜೆ ಸರಕಾರಿ ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಪ್ರಭಾಶ್ ಮಾಲ ದೇಶ ಭಕ್ತಿಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸನ್ಮಾನ:
ಪುನಿತ್‌ರಾಜ್‌ನ ಸಾಕು ತಂದೆ ತಾಯಿ ಶೀನಪ್ಪ ಗೌಡ-ಸೇಸಮ್ಮ ದಂಪತಿ ಹಾಗೂ ಅತಿಥಿಗಳು ಪುನೀತ್‌ರಾಜ್‌ಗೆ ಹೂಮಾಲೆ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟ ಧರಿಸಿ, ಹಣ್ಣು ಹಂಪಲು ನೀಡಿ ಗೌರವ ಸಮರ್ಪಣೆ ಮಾಡಿದರು. ಕಡಬ ತಾಲೂಕು ಒಕ್ಕಲಿಗ ಸಂಘದ ವತಿಯಿಂದ ಸುರೇಶ ಗೌಡ ಬೈಲು ಮತ್ತು ತಮ್ಮಯ್ಯ ಗೌಡ ಅವರು ಕಲ್ಪವೃಕ್ಷ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಪುನೀತ್‌ರಾಜ್ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

LEAVE A REPLY

Please enter your comment!
Please enter your name here