ರೋಟರಿ ಕ್ಲಬ್ ಪುತ್ತೂರು, ವಿವಿಧ ಸಂಘ-ಸಂಸ್ಥೆಗಳಿಂದ ವಿಶ್ವ ರಕ್ತದಾನಿಗಳ ದಿನ, ಸ್ವಯಂಪ್ರೇರಿತ ರಕ್ತದಾನ ಶಿಬಿರ

0

ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಹಾಗೂ ಡೈಮಂಡ್ ಜ್ಯುಬಿಲಿ ಆಚರಿಸುತ್ತಿರುವ ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿ ಇನ್ನರ್‌ವೀಲ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜ್ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಜೂ.14ರಂದು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ವಿಶ್ವ ರಕ್ತದಾನಿಗಳ ದಿನ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವು ನೆರವೇರಿತು.

ರಕ್ತದಾನ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ-ಸಂತೋಷ್ ಕುಮಾರ್:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ದಿನಾಚರಣೆ ಪ್ರಯುಕ್ತ ನಮ್ಮ ಸಂಘಟನೆಯ ವತಿಯಿಂದ ಪುತ್ತೂರು ಬ್ಲಡ್‌ಬ್ಯಾಂಕ್‌ನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರುತ್ತಿದ್ದು ಇದು ಪುತ್ತೂರಿಗೆ ಮಾದರಿಯಾಗಿ ಪರಿಣಮಿಸಿದೆ. ರಕ್ತ ಕೊಟ್ಟರೆ ದೇಹವು ಶಕ್ತಿಹೀನವಾಗುತ್ತದೆ ಎಂಬುದು ತಪ್ಪು ಕಲ್ಪನೆ. ಆ ಹೆದರಿಕೆ ಬಿಟ್ಟು ರಕ್ತದಾನ ಮಾಡಿದಾಗ ಮತ್ತೊಬ್ಬರ ಜೀವವನ್ನು ಉಳಿಸಿದಂತಾಗುತ್ತದೆ ಮಾತ್ರವಲ್ಲ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ ಎಂದರು.


ಬ್ಲಡ್‌ಬ್ಯಾಂಕ್ ಇಂದು ಯಶಸ್ವಿಯಾಗಿ ಕಾರ್ಯಾಚರಿಸಬೇಕಿದ್ದರೆ ಅದು ರಕ್ತದಾನಿಗಳಿಂದ-ಡಾ.ಶ್ರೀಪತಿ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ವಿಶ್ವ ರಕ್ತದಾನಿಗಳ ದಿನವೂ ಒಂದಾಗಿದೆ. ರೋಟರಿ ಸಂಸ್ಥೆಯು 1997ರಲ್ಲಿ ಪುತ್ತೂರಿನಲ್ಲಿ ಬ್ಲಡ್‌ಬ್ಯಾಂಕ್ ಅನ್ನು ಸ್ಥಾಪಿಸಿ ಪುತ್ತೂರಿಗೆ ಹಾಗೂ ಪುತ್ತೂರಿನ ಆಸುಪಾಸಿನ ಜನರಿಗೆ ಪ್ರಯೋಜನವನ್ನು ಕಲ್ಪಿಸಿದ ಕೀರ್ತಿಯಾಗಿದೆ. ರಕ್ತ ಕೊಡಲು ಪ್ರೋತ್ಸಾಹಿಸಿದಾಗ ಅದು ಮತ್ತೊಬ್ಬರ ಜೀವ ಉಳಿಯುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಪುತ್ತೂರಿನ ಈ ಬ್ಲಡ್‌ಬ್ಯಾಂಕ್ ಇಂದು ಯಶಸ್ವಿಯಾಗಿ ಕಾರ್ಯಾಚರಿಸಬೇಕಿದ್ದರೆ ಅದು ರಕ್ತದಾನಿಗಳಿಂದ ಎಂದರು.


ಒಬ್ಬರ ರಕ್ತವು ಮೂರು ಜನರ ಜೀವ ಉಳಿಸುವಲ್ಲಿ ಸಫಲ-ಡಾ.ರಾಮಚಂದ್ರ ಭಟ್:

ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಹಿರಿಯ ವೈದ್ಯ ಹಾಗೂ ಮೆಡಿಕಲ್ ಆಫೀಸರ್ ಆಗಿರುವ ಡಾ.ರಾಮಚಂದ್ರ ಭಟ್ ಮಾತನಾಡಿ, ದಕ್ಷಿಣ ಕನ್ನಡದ ಮಂಗಳೂರು ಬಿಟ್ರೆ ಪ್ರಸ್ತುತ ಪುತ್ತೂರಿನಲ್ಲಿ ಬ್ಲಡ್‌ಬ್ಯಾಂಕ್ ಕೇಂದ್ರವು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಮಳೆಗಾಲ ಆರಂಭವಾದಾಗ ಅನೇಕ ರೋಗಗಳು ವ್ಯಾಪಿಸಿದ ಸಂದರ್ಭದಲ್ಲಿ ರಕ್ತದ ಅಗತ್ಯತೆ ಹೆಚ್ಚಾಗುತ್ತದೆ. ಒಬ್ಬರ ರಕ್ತವು ಮೂರು ಜನರ ಜೀವ ಉಳಿಸುವಲ್ಲಿ ಸಫಲವಾಗುತ್ತದೆ. ರೋಟರಿ ಸಂಸ್ಥೆ, ಕ್ಯಾಂಪ್ಕೋ ಪುತ್ತೂ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಇಂದು ಎಲ್ಲಾ ವ್ಯವಸ್ಥೆಗಳೊಂದಿಗೆ ಬ್ಲಡ್‌ಬ್ಯಾಂಕ್ ಉನ್ನತೀಕರಣಗೊಂಡಿದೆ ಎಂದರು.


ರಕ್ತದಾನ ಎಂಬುದು ಸಮಾಜ ಸೇವೆ, ದೇಶ ಸೇವೆ-ಡಾ.ಸೀತಾರಾಮ ಭಟ್:
ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಗೌರವ ಮೆಡಿಕಲ್ ಆಫೀಸರ್ ಆಗಿರುವ ಡಾ.ಕೆ.ಸೀತಾರಾಮ ಭಟ್ ಮಾತನಾಡಿ, ಕಳೆದ ಎರಡ್ಮೂರು ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಜಾಸ್ತಿಯಾಗಿತ್ತು. ಪ್ರಸ್ತುತ ವಿದ್ಯಾಮಾನದಲ್ಲಿ ಘಟಿಸುತ್ತಿರುವ ಘಟನೆಗಳನ್ನು ನೋಡುವಾಗ ರಕ್ತದ ಅವಶ್ಯಕತೆ ಜಾಸ್ತಿಯೇ ಬೇಕಾಗುತ್ತದೆ. ರಕ್ತದಾನ ಎಂಬುದು ಅದು ಸಮಾಜ ಸೇವೆ, ದೇಶ ಸೇವೆಯಾಗಿದೆ ಎಂದರು.


ರಕ್ತದಾನದಲ್ಲಿ ಶ್ರೀಮಂತ, ಬಡವ ಎಂಬುದಿಲ್ಲ-ರೂಪಲೇಖ:
ಇನ್ನರ್‌ವೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ರೂಪಲೇಖ ಮಾತನಾಡಿ, ರಕ್ತದಾನ ಎಂಬುದು ಶ್ರೇಷ್ಟ ದಾನ. ರಕ್ತದಾನ ಮಾಡುವುದರಲ್ಲಿ ಶ್ರೀಮಂತ ಅಥವಾ ಬಡವ ಎಂಬುದಿಲ್ಲ. ಯಾರು ಆರೋಗ್ಯವಂತರಿದ್ದಾರೋ ಅವರು ರಕ್ತದಾನ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ರೋಟರಿ ಪುತ್ತೂರು ಕ್ಲಬ್ ವಿವಿಧ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಆರಂಭದಲ್ಲಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈರವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿ ತುರ್ತು ಕಾರ್ಯಕ್ರಮದ ನಿಮಿತ್ತ ತೆರಳಿದ್ದರು. ರೋಟರಿ ಕ್ಲಬ್ ಪುತ್ತೂರು ಸದಸ್ಯ ಪ್ರೊ|ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ಸುಬ್ರಮಣಿ, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜ್ ಪುತ್ತೂರು ಉಪಾಧ್ಯಕ್ಷ ರಂಜಿತ್‌ರವರಿಗೆ ಹೂ ನೀಡಿ ಅಭಿನಂದಿಸಲಾಯಿತು. ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಎ.ಜಗಜ್ಜೀವನ್‌ದಾಸ್ ರೈರವರು ಕಳೆದ ವರ್ಷದ ರಕ್ತದ ಸಂಗ್ರಹ ಹಾಗೂ ವಿತರಣೆಯ ಕುರಿತು ಮಾಹಿತಿ ನೀಡಿ ವಂದಿಸಿದರು. ಪಿಆರ್‌ಒ ಕುಲ್‌ದೀಪ್ ಹಾಗೂ ಬ್ಲಡ್‌ಬ್ಯಾಂಕ್ ಸಿಬ್ಬಂದಿ ಸಹಕರಿಸಿದರು.


ಅಧಿಕ ರಕ್ತದಾನ ಮಾಡಿದವರಿಗೆ/ರಕ್ತದಾನ ಶಿಬಿರ ನಡೆಸಿದವರಿಗೆ ಅಭಿನಂದನಾ ಸನ್ಮಾನ..
ಜೀವನದಲ್ಲಿ ಅಧಿಕ ಬಾರಿ ರಕ್ತದಾನ ಮಾಡಿದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸದಸ್ಯ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್(70 ಬಾರಿ), ಸೀತಾರಾಮ ಮುಂಡಾತೋಡಿ(65 ಬಾರಿ), ಸಿದ್ದೀಕ್ ತಿಂಗಳಾಡಿ(38 ಬಾರಿ)ರವರುಗಳನ್ನು ಹಾಗೂ ಅತೀ ಹೆಚ್ಚು ರಕ್ತದಾನ ಶಿಬಿರ ನಡೆಸಿದ ಸಂಘ-ಸಂಸ್ಥೆಗಳಾದ ಬ್ಲಡ್ ಹೆಲ್ಪ್ ಲೈನ್ ಸಂಘಟಕರಾದ ಇರ್ಫಾಜ್, ಮೊಹಮ್ಮದ್ ಆಲಿ, ರಫೀಕ್, ಎಸ್.ಎಸ್.ಎಫ್ ಸಂಘಟಕ ಶಿಹಾಬ್, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್, ವಿವೇಕ ಜಾಗೃತ ಬಳಗದ ಸಂಘಟಕ ಸುಂದರ ಗೌಡ, ಎಸ್.ಕೆ.ಎಸ್.ಎಸ್.ಎಫ್ ಕುಂಬ್ರ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಮನ್ಸೂರ್ ಅಸ್ಲಾಮಿ, ಸಂಘಟಕ ಸಿದ್ದೀಕ್ ತಿಂಗಳಾಡಿ, ಮಂಗಳೂರು ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಕಾರ್ಯದರ್ಶಿ ರಝಾಕ್, ಸತ್ಯಸೇವಾ ಸೇವಾ ಸಮಿತಿ ಪುತ್ತೂರು ಅಧ್ಯಕ್ಷ ದಯಾನಂದ, ರೋಟರಿ ಕ್ಲಬ್ ಸುಳ್ಯ ಮಾಜಿ ಅಧ್ಯಕ್ಷ ಸಂಜೀವ ಕುದುಪಾಜೆ, ಅಕ್ಷಯ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಸಿದ್ದೀಕ್ ರವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here