ಸವಣೂರು: ಅಕ್ರಮವಾಗಿ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಆರೋಪದಡಿ ಬೆಳ್ಳಾರೆ ಪೊಲೀಸರು ಕೆಂಪು ಕಲ್ಲು ಗಣಿಗಾರಿಕಾ ಸ್ಥಳಕ್ಕೆ ದಾಳಿ ಮಾಡಿ ಎರಡು ಲಾರಿಗಳು, ಕಲ್ಲು ಸೈಜ್ ಮಾಡುವ ಯಂತ್ರ, ಹಾಗೂ ಆರೋಪಿ ಸುಲೈಮಾನ್ ಅನ್ಯಾಡಿ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಜೂ.15ರಂದು ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ನಡೆದಿದೆ.

ಬೆಳ್ಳಾರೆ ಠಾಣೆ ಪೊಲೀಸ್ ಉಪನಿರೀಕ್ಷಕ ಡಿ.ಎನ್. ಈರಯ್ಯ ಅವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರ ಜೊತೆಯಲ್ಲಿ ಮಾಹಿತಿ ಬಂದ ಸ್ಥಳವಾದ ಕಡಬ ತಾಲೂಕು ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿಗೆ ಜೂ.15ರಂದು ರಾತ್ರಿ ತಲುಪಿದಾಗ ಪೊಲೀಸ್ ಜೀಪನ್ನು ನೋಡಿ ಸ್ಥಳದಲ್ಲಿದ್ದ ಲಾರಿಯೊಂದರಿಂದ ಅನ್ಯಾಡಿಯ ಸುಲೈಮಾನ್ ಎಂಬವನು ಇಳಿದು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು ಲಾರಿಯ ಬಳಿಗೆ ತೆರಳಿ ಪರಿಶೀಲಿಸಲಾಗಿ ಲಾರಿಯಲ್ಲಿ ಕೆಂಪು ಕಲ್ಲನ್ನು ತುಂಬಿಸಿಟ್ಟಿರುವುದು ಕಂಡುಬಂದಿದ್ದು, ಅಲ್ಲದೆ ಸ್ಥಳದಿಂದ ಸ್ವಲ್ಲ ದೂರದಲ್ಲಿ ನಿಂತಿದ್ದ ಇನ್ನೊಂದು ಲಾರಿಯಲ್ಲಿ ಕೂಡಾ ಕೆಂಪು ಕಲ್ಲನ್ನು ತುಂಬಿಸಿಟ್ಟಿರುವುದು ಕಂಡು ಬಂದಿದ್ದು, ಸ್ವಲ್ಪ ದೂರದಲ್ಲಿ ಅಲ್ಲಿ ಯಂತ್ರದ ಮೂಲಕ ಕೆಂಪು ಕಲ್ಲನ್ನು ಸೈಜು ಗಳನ್ನಾಗಿ ಕತ್ತರಿಸಿರುವುದು ಕಂಡುಬಂದಿದ್ದು, ಕಲ್ಲನ್ನು ಕತ್ತರಿಸುವ ಯಂತ್ರ ಕೂಡಾ ಸ್ಥಳದಲ್ಲಿಯೇ ಇರುವುದು ಕಂಡು ಬಂದಿದೆ.
ಘಟನೆಗೆ ಸಂಬಂಧಿಸಿದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಪರವಾನಿಗೆ ಪಡೆಯದೆ ಅಕ್ರಮವಾಗಿ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಮಾರಾಟಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಆರೋಪದಡಿ ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ. 27/2025 ಕಲಂ:42, 43, 44, ಕರ್ನಾಟಕ ಮೈನರ್ ಮಿನರಲ್ ಕನ್ಸಿಸ್ಟೆಂಟ್ ರೂಲ್ 1994,ಮತ್ತು ಕಲಂ:4(1),4(1ಎ),21(1),(1ಎ) ಎಮ್, ಎಮ್, ಆರ್, ಡಿ, 1957 ಮತ್ತು ಕಲಂ:303(2),ಬಿ. ಎನ್. ಎಸ್. 2023 ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದಿನ ಕ್ರಮ ಕೈಗೊಂಡಿದ್ದಾರೆ.