ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವ ಜನಸೇವಕ ಪ್ರವೀಣ್ ಆಚಾರ್ಯ
ಪುತ್ತೂರು: ಆಪತ್ಕಾಲದ ಸಂದರ್ಭಗಳಲ್ಲಿ ಜನರ ಪಾಲಿನ ಆಪತ್ಭಾಂವಧನಾಗಿ ಗುರುತಿಸಿಕೊಳ್ಳುವ ಮೂಲಕ ನರಿಮೊಗರಿನ ಪ್ರವೀಣ್ ಆಚಾರ್ಯ ಸುದ್ದಿಯಾಗಿದ್ದಾರೆ.
ಸ್ಥಳೀಯವಾಗಿ ಯಾವುದೇ ತುರ್ತು ಸಂದರ್ಭಗಳಲ್ಲಿ ಮಾಹಿತಿ ಸಿಕ್ಕಿದ ಕೂಡಲೇ ಘಟನೆ ನಡೆದ ಸ್ಥಳಕ್ಕೆ ಧಾವಿಸುವ ಪ್ರವೀಣ್ ಆಚಾರ್ಯ ಅವರು ತಮ್ಮಿಂದಾಗುವ ಗರಿಷ್ಠ ಸಹಕಾರವನ್ನು ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಮಳೆಯಿಂದ ಆಗುವ ಅನಾಹುತಗಳು, ಪ್ರಾಕೃತಿಕ ವಿಕೋಪಗಳು, ಸಾರ್ವಜನಿಕ ಸಮಸ್ಯೆಗಳು, ವಿದ್ಯಾರ್ಥಿಗಳ ಸಮಸ್ಯೆ ಹೀಗೇ ಯಾವುದೇ ಸಮಸ್ಯೆಗಳು ತಮ್ಮ ವ್ಯಾಪ್ತಿಯಲ್ಲಿ ಕಂಡು ಬಂದರೆ ತಕ್ಷಣವೇ ಕಾರ್ಯಪ್ರವೃತ್ತರಾಗುವ ಪ್ರವೀಣ್ ಆಚಾರ್ಯ ಅವರು ಅದಕ್ಕೊಂದು ಪರಿಹಾರ ಕಲ್ಪಿಸಿಯೇ ವಿರಮಿಸುತ್ತಾರೆ. ಅಷ್ಟಕ್ಕೂ ಇವರು ಜನಪ್ರತಿನಿಧಿ ಅಲ್ಲ, ಆದರೂ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಊರವರ ಹೃದಯ ಗೆಲ್ಲುತ್ತಿದ್ದಾರೆ.

ಪಾಪೆತ್ತಡ್ಕದಲ್ಲಿ ಇತ್ತೀಚೆಗೆ ಮನೆಯೊಂದರ ಬಳಿ ರಾತ್ರಿ ವೇಳೆ ಗುಡ್ಡ ಕುಸಿತಗೊಂಡು ಮನೆಗೆ ಹಾನಿಯಾದಾಗ ಅಲ್ಲಿಗೆ ಆಗಮಿಸಿ ಮನೆಯವರಿಗೆ ಸಂಪೂರ್ಣ ಸಹಕಾರ ನೀಡಿದ್ದಲ್ಲದೇ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ಪರಿಹಾರ ವ್ಯವಸ್ಥೆಯನ್ನು ಮಾಡಿಕೊಡುವಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಕೊಂಬಳ್ಳಿ ಸಮೀಪ ಮನೆಯೊಂದಕ್ಕೆ ಹಾನಿಯುಂಟಾದಾಗ ಅಲ್ಲಿಗೆ ಆಗಮಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಸಹಕಾರ ನೀಡಿದ್ದರು. ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಜಂಕ್ಷನ್ ಬಳಿ ಹೆದ್ದಾರಿಗೆ ನೀರು ಬರುತ್ತಿರುವುದನ್ನು ಗಮನಿಸಿ ಅದನ್ನು ತಕ್ಷಣವೇ ಗುತ್ತಿಗೆದಾರರಿಗೆ ತಿಳಿಸಿದ್ದಲ್ಲದೇ ತಾನೂ ಜೊತೆ ನಿಂತು ಅದಕ್ಕೆ ಪರಿಹಾರ ಕಲ್ಪಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು. ರಸ್ತೆಗೆ ನೀರು ಬರುವ ಇದೇ ರೀತಿಯ ಅನೇಕ ಸ್ಥಳಗಳ ಬಗ್ಗೆ ಗುತ್ತಿಗೆದಾರರಿಗೆ ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಸರಿಪಡಿಸುವ ಕಾರ್ಯವನ್ನು ಮಾಡಿದ್ದಾರೆ. ಕೆಲವು ಕಡೆ ಖುದ್ದು ಅವರೇ ಚರಂಡಿ ಸರಿಪಡಿಸುವ ಕಾರ್ಯ ಮಾಡಿದ್ದಾರೆ. ಪಾಪೆತ್ತಡ್ಕ ಎಂಬಲ್ಲಿ ಗುಡ್ಡದ ಮೇಲಿರುವ ಗ್ರಾ.ಪಂ ನೀರಿನ ಟ್ಯಾಂಕ್ ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ತಿಳಿದು ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಿ ನೀರಿನ ಟ್ಯಾಂಕ್ನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯದಲ್ಲೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು. ಸ್ಥಳೀಯವಾಗಿ ವಿದ್ಯುತ್ ಕಡಿತಗೊಂಡು 5 ತಿಂಗಳಿನಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಕ್ಕೆ ವಿದ್ಯುತ್ ನೀಡುವ ಸಲುವಾಗಿ ಮೆಸ್ಕಾಂ ಇಲಾಖೆ ಜೊತೆ ಸಹಕರಿಸಿ ಎರಡು ಕಂಬ ಅಳವಡಿಸಲು ಸಹಕಾರ ನೀಡಿದ್ದರು.
ಮುಂಡೂರು ಗ್ರಾಮದ ಆಲಡ್ಕದಲ್ಲಿ ಪ್ರಯಾಣಿಕರ ತಂಗುದಾಣದ ಶೀಟ್ ಮುರಿದು ಬಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ದಾನಿಗಳ ಸಹಕಾರ ಪಡೆದು ಮುಂಡೂರು ವಲಯ ಕಾಂಗ್ರೆಸ್ ಸದಸ್ಯರನ್ನು ಸೇರಿಸಿಕೊಂಡು ಶ್ರಮದಾನ ಮಾಡುವ ಮೂಲಕ ಹೊಸ ಶೀಟ್ ಅಳವಡಿಸುವ ಕಾರ್ಯ ಮಾಡಿದ್ದರು. ಇದು ಸ್ಥಳೀಯವಾಗಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ಮುಂಡೂರು ಶಾಲಾ ಬಳಿ ಸ್ಪೀಡ್ ಬ್ರೇಕರ್ ಅಳವಡಿಸುವ ವೇಳೆ ಮತ್ತು ನರಿಮೊಗರು ಶಾಲೆಗೆ ಉಚಿತ ಸಾವಯಯ ಗೊಬ್ಬರ ನೀಡಲು ಮತ್ತು ನರಿಮೊಗರುನಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸುವ ವೇಳೆ ಮಧ್ಯರಾತ್ರಿಯಲ್ಲಿ ನಿಂತು ಸಹಕಾರ, ನರಿಮೊಗರು ಶಾಲಾ ಸಮೀಪ ಮಕ್ಕಳಿಗೆ ನಡೆದುಕೊಂಡು ಹೋಗಲು ಕಷ್ಟ ಆಗುತ್ತಿರುವುದನ್ನು ಮನಗಂಡು ಎಸ್ಡಿಎಂಸಿ ಅಧ್ಯಕ್ಷ ಸಹಕಾರದೊಂದಿಗೆ ಸರಿಯಾದ ದಾರಿ ನಿರ್ಮಾಣ ಮಾಡಲು ಹಾಗೂ ಸ್ಥಳೀಯವಾಗಿ ಬಡ ಕುಟುಂಬವೊಂದರ ಮನೆಯ ಶೀಟ್ ಗಾಳಿಗೆ ಬಿದ್ದ ವೇಳೆ ಅದನ್ನು ಮರು ಜೋಡಿಸುವಲ್ಲಿಯೂ ಇವರು ಪ್ರಮುಖ ಪಾತ್ರ ವಾಹಿಸಿದ್ದಾರೆ. ಮಳೆ ಬಂದು ಪ್ರಾಕೃತಿಕ ವಿಕೋಪದ ಸಂದರ್ಭದ ಸೇವೆ ಸೇರಿದಂತೆ ಇಂತಹ ಹತ್ತು ಹಲವು ಸಣ್ಣ ಪುಟ್ಟ ಕಾರ್ಯಗಳನ್ನು ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರವೀಣ್ ಆಚಾರ್ಯ ಅವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಇವರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೂ ತಂದು ಅದನ್ನು ಪರಿಹರಿಸುವ ಕಾರ್ಯ ಮಾಡುತ್ತಿದ್ದಾರೆ.
ಪ್ರವೀಣ್ ಆಚಾರ್ಯ ಅವರು ಕಳೆದ ಬಾರಿ ಮುಂಡೂರು ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು, ಆದರೂ ಜನ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಜನಪ್ರತಿನಿಧಿಗಳನ್ನೂ ತಮ್ಮತ್ತ ನೋಡುವಂತೆ ಮಾಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.
ಪ್ರವೀಣ್ ಆಚಾರ್ಯ ಅವರ ಸಮಾಜಮುಖಿ ಕಾರ್ಯಗಳಿಗೆ ಬೆಂಬಲ ಸೂಚಿಸಿ ಪಾಪೆತ್ತಡ್ಕ ಎಂಬಲ್ಲಿ ಸಾರ್ವಜನಿಕರು ಕಟೌಟ್ ಅಳವಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.ಸಮಾಜದ ಮೇಲೆ ಪ್ರತಿಯೊಬ್ಬರಿಗೂ ಜವಾಬ್ದಾರಿಯಿದೆ, ಯಾರೇ ಆದರೂ ಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸುವುದು ನಮ್ಮ ಧರ್ಮ. ಈ ನಿಟ್ಟಿನಲ್ಲಿ ನನ್ನಿಂದಾಗುವ ಸಣ್ಣ ಮಟ್ಟಿನ ಸೇವೆಯನ್ನು ನೀಡುತ್ತಿದ್ದೇನೆ, ಇದರಿಂದ ನನಗೆ ಆತ್ಮತೃಪ್ತಿಯಿದೆ. ನನ್ನ ಜೊತೆ ನನ್ನ ಗೆಳೆಯರು, ಕಾಂಗ್ರೆಸ್ ಕಾರ್ಯಕರ್ತರು ಸಹಕಾರ ನೀಡುತ್ತಿದ್ದಾರೆ ಎಂದು ಪ್ರವೀಣ್ ಆಚಾರ್ಯ ತಿಳಿಸಿದ್ದಾರೆ.
ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಪ್ರವೀಣ್ ಆಚಾರ್ಯ ಅವರು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾಗಿದ್ದು ದ.ಕ ಜಿಲ್ಲಾ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾಗಿ ಮತ್ತು ನರಿಮೊಗರು ಸ.ಉ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.