ಕಠಿಣ ಪರಿಶ್ರಮದಿಂದ ಪ್ರತಿಫಲ ಖಂಡಿತ ದೊರೆಯುತ್ತದೆ-ವಂ|ಲಾರೆನ್ಸ್ ಮಸ್ಕರೇನಸ್
ಪುತ್ತೂರು: ಮಾಯ್ ದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ SSLC ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಮಾಯ್ ದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ 87 ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಮಾತನಾಡಿ ಪ್ರತಿಭಾ ಪುರಸ್ಕಾರ ಎಂಬುದು ವಿದ್ಯಾರ್ಥಿಗಳ ಪ್ರತಿಭೆಗೆ ಸಲ್ಲುವ ಗೌರವ. ಕಠಿಣ ಪರಿಶ್ರಮ ಪಟ್ಟವರಿಗೆ ಪ್ರತಿಫಲ ಖಂಡಿತ ದೊರೆಯುತ್ತದೆ. ಉತ್ತಮ ಕೆಲಸಗಳು ನಮಗೆ ಸಂತೋಷ ತಂದು ಕೊಡುತ್ತದೆ. ನಿಮ್ಮ ಮುಂದಿನ ಕಲಿಕೆಯಲ್ಲೂ ಸಾಧನೆ ಮಾಡಿ ಕಲಿತ ಸಂಸ್ಥೆಗೆ, ಶಿಕ್ಷಕರಿಗೆ, ಹೆತ್ತವರಿಗೆ ಕೀರ್ತಿಯನ್ನು ತಂದು ಕೊಡಿ ಎಂದು ಹೇಳಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಆಶೀರ್ವದಿಸಿದರು.
ಮುಖ್ಯ ಅತಿಥಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ| ಸಾಜಿದ ಶಾಲಾ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಸಾಧಕರಿಗೆ ಸಾಧಿಸುವ ಛಲವಿದ್ದರೆ ಕಲಿಯುವ ಮಾಧ್ಯಮ ಅಡ್ಡಿ ಬರುವುದಿಲ್ಲ. ನಾನು ಕನ್ನಡ ಮಾಧ್ಯಮದಲಿದ್ದುಕೊಂಡೇ ಈ ಸಾಧನೆಯನ್ನು ಮಾಡಿದ್ದೇನೆ. ಇದಕ್ಕೆ ಕಾರಣ ನನ್ನ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರು. “ಗುರುಭಕ್ತಿ ಯಶಸ್ಸಿನ ಶಕ್ತಿ” ಕಠಿಣ ಪರಿಶ್ರಮ, ಸತತ ಪ್ರಯತ್ನ, ಸಾಧಿಸುವ ದೃಢನಿರ್ಧಾರ, ಶಿಸ್ತುಬದ್ಧ ಜೀವನದಿಂದ ಗುರಿ ಸುಲಭ ಸಾಧ್ಯ. ಎಂದು ಹೇಳಿದರು. ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ ಮಾತನಾಡಿ ಸಾಧನೆಯ ಹಾದಿ ಸುಗಮವಲ್ಲ. ನಿರಂತರ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ದೂರದೃಷ್ಟಿಯುಳ್ಳ ಸಂಚಾಲಕರು, ಮುಂದಾಳತ್ವ ವಹಿಸುವ ಮುಖ್ಯಗುರುಗಳು, ಕರ್ತವ್ಯ ಬದ್ಧತೆಯಿರುವ ಶಿಕ್ಷಕರು ಕೂಡಾ ನಿಮ್ಮ ಸಾಧನೆಗೆ ಕಾರಣಕರ್ತರು ಎಂದು ತಿಳಿಸಿ ಸಾಧಕರನ್ನು ಅಭಿನಂದಿಸಿದರು.
ಕಳೆದ ಸಾಲಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಪಿ.ಎಂ ಅಶ್ರಫ್ ಮಾತನಾಡಿ ವಿಶಿಷ್ಟ ಸಾಧನೆಗೈದು ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತಮ ಫಲಿತಾಂಶವು ನಮಗೆ ಬಂದಿರುವುದು ಸಂತಸದ ವಿಚಾರ. ಈ ಯಶಸ್ಸಿಗೆ ಸರ್ವರೂ ಕಾರಣಕರ್ತರು. ಈ ಶೈಕ್ಷಣಿಕ ವರ್ಷದಲ್ಲೂ 10ನೇ ತರಗತಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಂದು ಕರೆ ನೀಡಿದ ಅವರು ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಶುಭ ಹಾರೈಸಿದರು.
ಪ್ರತಿಭಾನ್ವಿತರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಕು. ಶ್ರೇಯಾ ಎಮ್. ಆರ್ ಮತ್ತು ಶಮಾ ಫಾತಿಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಹಾಗೂ ಗಣ್ಯರನ್ನು ಶಾಲಾ ವಾದ್ಯವೃಂದದೊಂದಿಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಭವ್ಯ ವಂದಿಸಿದರು. ಶಿಕ್ಷಕಿ ರೂಪ ಡಿಕೋಸ್ಟ ಪ್ರತಿಭಾನ್ವಿತ ವಿದ್ಯಾರ್ಥಿನಿಯರ ಹೆಸರುಗಳನ್ನು ವಾಚಿಸಿದರು. ಶಿಕ್ಷಕಿ ಡೋರಿನ್ ವಿಲ್ಮಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.