ಡಿಜಿಟಲ್ ಮೀಡಿಯಾದ ಅಬ್ಬರ… ಗ್ರಂಥಾಲಯದ ಬಾಗಿಲು ತಟ್ಟುವರೇ ಇಲ್ಲ…!

0

ಪುಸ್ತಕಗಳಿದ್ದರೂ ಓದುವವರಿಲ್ಲದೆ ಬರಡಾಗುತ್ತಿರುವ ಗ್ರಾ.ಪಂ ಗ್ರಂಥಾಲಯಗಳು..!


@ ಸಿಶೇ ಕಜೆಮಾರ್


ಪುತ್ತೂರು:
ಒಂದು ಕಾಲದಲ್ಲಿ ಅಂಗಡಿಯಿಂದ ಕಡ್ಲೆ ಕಟ್ಟಿಕೊಟ್ಟ ಪೇಪರ್‌ನ ತುಂಡನ್ನು ಕೂಡ ಬಿಡಿಸಿ ಓದುತ್ತಿದ್ದ ನಾವುಗಳು ಇಂದು ಪುಸ್ತಕ ಎದುರಿದ್ದರೂ ಬಿಡಿಸಿ ಓದುವ ಗೋಜಿಗೆ ಹೋಗುವುದಿಲ್ಲ ಕಾರಣ ಇಷ್ಟೇ ನಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ಗಳು ಪುಸ್ತಕ,ಪತ್ರಿಕೆ ಓದುವ ಹವ್ಯಾಸವನ್ನು ದೂರ ಮಾಡಿದೆ. ಒಂದೊಮ್ಮೆ ಗ್ರಂಥಾಲಯದ ಬೆಂಚುಗಳಲ್ಲಿ ಕೂತು ಪುಸ್ತಕಗಳನ್ನು ಓದುತ್ತಿದ್ದ ವಿದ್ಯಾರ್ಥಿಗಳನ್ನು ಇವತ್ತು ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಮೊಬೈಲ್‌ನಂತಹ ಡಿಜಿಟಲ್ ಮೀಡಿಯಾದ ಮೊರೆ ಹೋಗಿರುವುದೇ ಇಂದು ಪುಸ್ತಕ, ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ. ಗ್ರಾಮಕ್ಕೊಂದು ಗ್ರಂಥಾಲಯವಿದ್ದು ಗ್ರಂಥಾಲಯ ತುಂಬಾ ಪುಸ್ತಕಗಳಿದ್ದರೂ ಓದುವವರು ಮಾತ್ರ ಇಲ್ಲದಾಗಿದ್ದಾರೆ. ಗ್ರಾಮಸ್ಥರಲ್ಲಿ ಅದರಲ್ಲೂ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಸರಕಾರ ಗ್ರಂಥಾಲಯಗಳಿಗೆ ಡಿಜಿಟಲ್ ಟಚ್ ಕೊಟ್ಟಿದ್ದರೂ ಹೆಚ್ಚಿನ ಗ್ರಂಥಾಲಯಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಇನ್ನು ಒಂದು ಹಂತಕ್ಕೆ ಮುಂದುವರಿದ ಸರಕಾರ ಗ್ರಂಥಾಲಯಗಳನ್ನು ‘ಅರಿವು ಕೇಂದ್ರ’ಗಳನ್ನಾಗಿ ಮಾರ್ಪಡಿಸುವ ಮೂಲಕ ಜನರಿಗೆ ಸರಕಾರದ ಸೌಲಭ್ಯಗಳ ಮಾಹಿತಿಗಳೊಂದಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದೆ ಆದರೂ ಗ್ರಂಥಾಲಯದ ಬಾಗಿಲು ತಟ್ಟುವವರೇ ಇಲ್ಲದಾಗಿರುವುದು ಮಾತ್ರ ವಿಪರ‍್ಯಾಸವೇ ಸರಿ. ಇದನ್ನು ಸರಿದೂಗಿಸಲು ಸರಕಾರ ಅರಿವು ಕೇಂದ್ರ ಸಲಹಾ ಸಮಿತಿ ರಚನೆ ಮಾಡಿದ್ದು ಅವರಿಗೆ ತರಬೇತಿ ಕೂಡ ನೀಡಿದೆ. ಈ ಸಮಿತಿ ಎಷ್ಟರಮಟ್ಟಿಗೆ ಕಾರ್ಯಪ್ರವೃತ್ತರಾಗುತ್ತೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


ತಾಲೂಕಿನಲ್ಲಿವೇ 22 ಗ್ರಂಥಾಲಯಗಳು
ಪ್ರತಿ ಗ್ರಾಮ ಪಂಚಾಯತ್‌ಗೊಂದು ಗ್ರಂಥಾಲಯವಿದ್ದು ಪುತ್ತೂರು ತಾಲೂಕಿನಲ್ಲಿ 22 ಗ್ರಾಮ ಪಂಚಾಯತ್‌ಗಳಿಗೆ 22 ಗ್ರಂಥಾಲಯಗಳು ಇವೆ. ಎಲ್ಲವೂ ಕೂಡ ಡಿಜಿಟಲ್ ಗ್ರಂಥಾಲಯಗಳಾಗಿವೆ. ಬಹುತೇಕ ಗ್ರಂಥಾಲಯಗಳು ಗ್ರಾಮ ಪಂಚಾಯತ್‌ನ ಕಟ್ಟಡದಲ್ಲೇ ಇದೆ. 18 ಗ್ರಂಥಾಲಯಗಳು ಪಂಚಾಯತ್ ಕಟ್ಟಡದಲ್ಲೇ ಇದ್ದು 4 ಗ್ರಂಥಾಲಯಗಳಿಗೆ ಸರಕಾರದಿಂದ ಸ್ವಂತ ಕಟ್ಟಡ ಇದೆ. ಸ್ವಂತ ಕಟ್ಟಡವಿರುವ 4 ಗ್ರಂಥಾಲಯಗಳು ಯಾವುದೆಂದರೆ ನರಿಮೊಗರು, ಕಬಕ, ಆರ್ಯಾಪು ಮತ್ತು ಬಜತ್ತೂರು ಆಗಿದೆ. 22 ಗ್ರಂಥಾಲಯಗಳಲ್ಲಿ 20 ರಲ್ಲಿ ಮೇಲ್ವಿಚಾರಕರಿದ್ದು 2 ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರ ಹುದ್ದೆ ಖಾಲಿ ಇದೆ.


ಗ್ರಂಥಾಲಯಗಳು ತೆರೆಯುವ ಮುಚ್ಚುವ ಸಮಯ
ಗ್ರಂಥಾಲಯಗಳನ್ನು ನೋಡಿಕೊಳ್ಳುವುದು ಗ್ರಂಥಾಲಯ ಮೇಲ್ವಿಚಾರಕರ ಕೆಲಸವಾಗಿದ್ದು ಪ್ರತಿಯೊಂದು ಗ್ರಂಥಾಲಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ಹಾಗೇ ಅಪರಾಹ್ನ 3 ರಿಂದ ಸಂಜೆ 7 ಗಂಟೆಯವರೇಗೆ ತೆರೆದಿರುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಹಾಗೂ ಅಪರಾಹ್ನ 2 ರಿಂದ ಸಂಜೆ 6 ಗಂಟೆಯವರೇಗೆ ತೆರೆದಿರುತ್ತದೆ. ಪ್ರತಿ ಸೋಮವಾರ ಹಾಗೂ ಪ್ರತಿ ತಿಂಗಳ 2 ನೇ ಮತ್ತು 4 ನೇ ಮಂಗಳವಾರ ಗ್ರಂಥಾಲಯಗಳಿಗೆ ರಜೆ ಇರುತ್ತದೆ.


ಗ್ರಂಥಾಲಯ ಅಥವಾ ಅರಿವು ಕೇಂದ್ರ
ಗ್ರಾಮದ ಪ್ರತಿ ಗ್ರಂಥಾಲಯವನ್ನು ಸರಕಾರ ‘ಅರಿವು ಕೇಂದ್ರ’ ವನ್ನಾಗಿ ಮಾಡಿದ್ದು ಇದರ ಮುಖ್ಯ ಉದ್ದೇಶವೆಂದರೆ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಹಾಗೂ ಉದ್ಯೋಗ ಮಾಹಿತಿಯನ್ನು ಗ್ರಾಮಸ್ಥರಿಗೆ ಇಲ್ಲಿ ನೀಡಬೇಕಾಗಿದೆ. ಪುಸ್ತಕ ಓದುವ ಮೂಲಕ ಜ್ಞಾನದ ಅರಿವು ಹೆಚ್ಚಿಸಿಕೊಳ್ಳುವುದರ ಜೊತೆಯಲ್ಲಿ ಸರಕಾರದಿಂದ ಸಿಗುವ ಸವಲತ್ತು ಹಾಗೇ ಸರಕಾರಿ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಇಲ್ಲಿಂದ ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಕೆಲಸದ ಸಮಯವನ್ನು ಹೆಚ್ಚಿಸಿದ್ದು ಇದಕ್ಕಾಗಿಯೇ ಸರಕಾರ ತಿಂಗಳಿಗೆ ರೂ.17,500/ ಸಂಬಳ ಕೂಡ ನೀಡುತ್ತಿದೆ.


ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳನ್ನು ಬಳಸಲು ಪ್ರೋತ್ಸಾಹಿಸಬೇಕು
ಮಕ್ಕಳಿಂದ ಹಿಡಿದು ವೃದ್ಧರ ತನಕ ಪ್ರತಿಯೊಬ್ಬರು ಮೊಬೈಲ್‌ನಲ್ಲಿಯೇ ಬ್ಯುಸಿ, ಬೇಕದ್ದು ಬೇಡದ್ದು ಎಲ್ಲವನ್ನು ಬ್ರೌಸ್ ಮಾಡುತ್ತೇವೆ. ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದ್ದರೂ ವಿದ್ಯಾರ್ಥಿಗಳು ಗ್ರಂಥಾಲಯಗಳನ್ನು ಬಳಸಲು ಮತ್ತು ಅದರಲ್ಲಿರುವ ಪುಸ್ತಕಗಳಿಂದ ಅಗತ್ಯವಿರುವ ಮಾಹಿತಿಯನ್ನು ಹುಡುಕಲು ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ. ಒಳಮೊಗ್ರು ಗ್ರಾಪಂ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿ 1200 ವಿದ್ಯಾರ್ಥಿಗಳನ್ನು ಉಚಿತವಾಗಿ ನೋಂದಣಿ ಮಾಡಿಕೊಳ್ಳಲಾಗಿದ್ದು ಉಳಿದಂತೆ 640 ಇತರ ಸದಸ್ಯರಿದ್ದಾರೆ. ಗ್ರಂಥಾಲಯದಲ್ಲಿ ಬೇಕಾದಷ್ಟು ಪುಸ್ತಕವಿದ್ದು ಜನರು, ವಿದ್ಯಾರ್ಥಿಗಳು ಕೂಡ ಓದಲು ಬರುತ್ತಿದ್ದಾರೆ ಎನ್ನುತ್ತಾರೆ ಗ್ರಂಥಾಲಯ ಮೇಲ್ವಿಚಾರಕಿ ಸಿರಿನಾರವರು.


ಪುಸ್ತಕಗಳಿದ್ದರೂ ಓದುವವರಿಲ್ಲ…!?
ಗ್ರಂಥಾಲಯಗಳಿಗೆ ಪ್ರತಿ ವರ್ಷ ಅವರ ಬೇಡಿಕೆಗೆ ಅನುಗುಣವಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ, ರಾಜ್ಯ ಕೇಂದ್ರ ಗ್ರಂಥಾಲಯ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಿಂದ ಪುಸ್ತಕಗಳು ಬರುತ್ತವೆ. ಇದಲ್ಲದೆ ಸ್ಥಳೀಯ ಸಾಹಿತಿ, ಬರಹಗಾರರು, ದಾನಿಗಳು ತಮ್ಮಲ್ಲಿರುವ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಎಲ್ಲಾ ಗ್ರಂಥಾಲಯಗಳಲ್ಲೂ ಪುಸ್ತಕಗಳ ರಾಶಿಯೇ ಇದೆ ಆದರೆ ಓದುವವರು ಮಾತ್ರ ಕಡಿಮೆಯಾಗಿದ್ದಾರೆ. ಶುಲ್ಕ ಪಾವತಿಸಿ ಸದಸ್ಯರಾದರೂ ಬಂದು ಓದುವವರೂ ಇಲ್ಲ ಪುಸ್ತಕ ಮನೆಗೆ ಕೊಂಡೋಗಿ ಓದುವವರೂ ಇಲ್ಲ ಒಟ್ಟಿನಲ್ಲಿ ಮೊಬೈಲ್‌ನಂತಹ ಡಿಜಿಟಲ್ ಮೀಡಿಯಾ ಎಲ್ಲವನ್ನು ಹಾಳು ಮಾಡಿಬಿಟ್ಟಿದೆ ಎಂದರೆ ತಪ್ಪಾಗಲಾರದು.

‘ ಡಿಜಿಟಲ್ ಮಾಧ್ಯಮದಿಂದ ಗ್ರಂಥಾಲಯಗಳಿಗೆ ತೊಂದರೆಯಾಗಿದೆ ಎಂದು ನಾನು ಹೇಳಲಾರೆ ಆದರೆ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಾಗಿದೆ. ಇದಕ್ಕಾಗಿ ‘ಬನ್ನಿ ಒಂದು ದಿನ ಓದೋಣ’ ಎಂಬ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಗ್ರಂಥಾಲಯಗಳಿಗೆ ಕರೆಸಿಕೊಂಡು ಓದುವ ಬಗ್ಗೆ ತಿಳಿಸಿಕೊಡಬೇಕು. ಅರಿವು ಕೇಂದ್ರ ಸಲಹಾ ಸಮಿತಿ ರಚನೆಯಲ್ಲೂ ಯಾವುದೇ ರಾಜಕೀಯ, ಜಾತಿ,ಧರ್ಮವಿಲ್ಲದೆ ಪುಸ್ತಕ ಓದುವ ಹವ್ಯಾಸವಿರುವವರನ್ನು ಮಾತ್ರ ಸೇರಿಸಿಕೊಂಡು ಮಾಡಬೇಕು. ಪುಸ್ತಕದ ಅರಿವೇ ಇಲ್ಲದವರನ್ನು ಸಮಿತಿಗೆ ಸೇರಿಸಿಕೊಂಡರೆ ಯಾವುದೇ ಪ್ರಯೋಜನವಿಲ್ಲ. ಗ್ರಂಥಾಲಯಗಳಲ್ಲೂ ಪುಸ್ತಕ ಜೋಡಣೆ ಹಾಗೇ ಓದುವ ರೀತಿ ಬಗ್ಗೆ ಅರಿವು ಇರಬೇಕು ಇದಕ್ಕೂ ತರಬೇತಿಯ ಅಗತ್ಯವಿದೆ. ಪಂಚಾಯತ್ ಮತ್ತು ಗ್ರಂಥಾಲಯ ಮೇಲ್ವಿಚಾರಕರು ಮನಸ್ಸು ಮಾಡಿದರೆ ಓದುಗರನ್ನು ಸೆಳೆಯಲು ಕಷ್ಟವಿಲ್ಲ.’
ಕುಂಬ್ರ ದುರ್ಗಾಪ್ರಸಾದ್ ರೈ, ನ್ಯಾಯವಾದಿ, ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ


‘ ತಾಲೂಕಿನಲ್ಲಿ 22 ಡಿಜಿಟಲ್ ಗ್ರಂಥಾಲಯಗಳಿವೆ. 20 ಗ್ರಂಥಾಲಯ ಮೇಲ್ವಿಚಾರಕರಿದ್ದಾರೆ. 2 ಹುದ್ದೆ ಖಾಲಿ ಇದೆ. 18 ಗ್ರಂಥಾಲಯಗಳು ಪಂಚಾಯತ್ ಕಟ್ಟಡದಡಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದರೆ 4 ಗ್ರಂಥಾಲಯಗಳಿಗೆ ಸರಕಾರದಿಂದ ಮಂಜೂರಾದ ಸ್ವಂತ ಕಟ್ಟಡವಿದೆ. ಗ್ರಂಥಾಲಯಗಳು ಪ್ರಸ್ತುತ ‘ಅರಿವು ಕೇಂದ್ರ’ಗಳಾಗಿ ಕಾರ್ಯನಿರ್ವಹಿಸುತ್ತಿವೆ.’
-ಶೇಖ್ ಖಲಂದರ್ ಅಲಿ, ಗ್ರಂಥಾಲಯ ವಿಷಯ ನಿರ್ವಾಹಕರು ತಾಲೂಕು ಪಂಚಾಯತ್

LEAVE A REPLY

Please enter your comment!
Please enter your name here