ಪುತ್ತೂರು:ಸಮಾಜಕ್ಕೆ ಸಲ್ಲಿಸಿದ ಸೇವೆ, ಪರಿಸರ ಕುರಿತ ಜಾಗೃತಿ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಅವಿನಾಶ ಕೊಡಂಕಿರಿ ಹಾಗೂ ಆಡಳಿತಾಧಿಕಾರಿ ಶುಭಾ ಅವಿನಾಶ್ ದಂಪತಿಯನ್ನು ಯಕ್ಷಾಂತರಂಗ ಪೆರ್ಲ, ಸರಸ್ವತಿ ಶಾಲಾ ಶಿಕ್ಷಕರಕ್ಷಕ ಸಂಘ ಮತ್ತು ಸುರಕ್ಷಾ ಸಮಿತಿಯ ವತಿಯಿಂದ ಸನ್ಮಾನಿಸಿದರು.
ಅಭಿನಂದನಾ ಭಾಷಣ ಮಾಡಿದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಮಾತನಾಡಿ, ಸದಾ ನೀಡುವ ಗುಣ ಹೊಂದಿರುವ ಕೊಡಂಕಿರಿಯವರು ಕಳೆದುಕೊಂಡಲ್ಲೇ ಮತ್ತೆ ಪುಟಿದೆದ್ದು ಸಂಸ್ಥೆ ನಿರ್ಮಿಸಿದರು. ಶಿಕ್ಷಣ ಸಂಸ್ಥೆಗೊಂದು ವಿಷನ್ ಇರಬೇಕು. ಜೀವನ ಮತ್ತು ವೃತ್ತಿ ಎರಡರಲ್ಲೂ ವಿಷನ್ ಹೊಂದಿರುವ ಅವಿನಾಶ್ ಕೊಡಂಕಿರಿಯವರು ಅಭಿನಂದನೀಯರು ಎಂದು ಹೇಳಿದರು.
ಯಕ್ಷಾಂತರಂಗ ಪೆರ್ಲ ಇದರ ಅಧ್ಯಕ್ಷ ಭಾಗವತ ಸತೀಶ್ ಪುಣಚಿತ್ತಾಯರು ಮಾತನಾಡಿ, ನಿರಂತರ ಕೆಲಸ ಮಾಡುವ ಕೊಡಂಕಿರಿಯವರನ್ನು ಸಮಾಜ ಗುರುತಿಸಿದ್ದು ಕಡಿಮೆ. ಆದರೆ ನಮ್ಮ ಸಂಸ್ಥೆ ಅವರ ಕಲಾಭಿಮಾನಕ್ಕೆ ಸ್ಪಂದಿಸಿ ಅಭಿನಂದಿಸುತ್ತಿದೆ ಎಂದರು.
ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಬಲ್ಯಾಯ ಅಭಿನಂದನಾ ಮಾತುಗಳನ್ನಾಡಿದರು. ಸುರಕ್ಷಾ ಸಮಿತಿಯ ಸುರೇಶ್ ಭಟ್ ಸೂರ್ಡೇಲು ಪ್ರಸ್ತಾವನೆಗೈದರು. ಶ್ರೀಲಕ್ಷ್ಮೀ ಮೊಳೆಯಾರ್ ಸನ್ಮಾನ ಪತ್ರ ವಾಚಿಸಿದರು. ಮುಖ್ಯಗುರು ಅಖಿಲಾ ಕೆ.ಬಿ, ಪೋಷಕರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುಸ್ತಕ ಸಂತ ಪ್ರಕಾಶ್ ಕೊಡಂಕಿರಿ ಪುಸ್ತಕಗುಚ್ಛ ಸ್ಮರಣಿಕೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಾಂತರಂಗ ವತಿಯಿಂದ ಯಕ್ಷನಾಟ್ಯ ಪ್ರದರ್ಶನ ನಡೆಯಿತು.