ಅನುಕೂಲಸ್ಥರು ಬಡವರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು-ಪುರುಷೋತ್ತಮ ರೈ
ಪುತ್ತೂರು: ಸರಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡವರ ಮಕ್ಕಳು ಕಲಿಯುತ್ತಿದ್ದು ಉತ್ತಮ ವಿದ್ಯಾಭ್ಯಾಸ ದೊರೆಯುತ್ತಿದೆ, ಸರಕಾರಿ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ದೊಡ್ಡ ಮಟ್ಟದ ಸಾಧನೆ ಮಾಡಿದವರಿದ್ದಾರೆ, ಹಾಗಾಗಿ ಸರಕಾರಿ ಶಾಲೆಗಳ ಬಗ್ಗೆ ಯಾರೂ ನಿರ್ಲಕ್ಷ್ಯ ಭಾವನೆ ಹೊಂದಬಾರದು ಎಂದು ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯರು, ಆರ್ಯಾಪು ಗ್ರಾ.ಪಂ ಸದಸ್ಯರೂ ಆದ ಬೂಡಿಯಾರು ಪುರುಷೋತ್ತಮ ರೈ ಹೇಳಿದರು. ಅವರು ಜೂ.19ರಂದು ಇಡ್ಯೊಟ್ಟು ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಿಸಿ ಮಾತನಾಡಿದರು.

ನಾನು ಶ್ರೀಮಂತನೇನಲ್ಲ. ಇಲ್ಲಿ ಕಲಿಯುವ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಪುಸ್ತಕ ವಿತರಣೆ ಮಾಡಿದ್ದೇನೆ. ನಾನು ದುಡಿದ ಒಂದಂಶವನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ಸಮಾಜದಲ್ಲಿರುವ ಅನುಕೂಲಸ್ಥರು ಬಡವರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.

ಆರ್ಯಾಪು ಗ್ರಾ.ಪಂ ಸದಸ್ಯೆ ರೇವತಿ ಮಾತನಾಡಿ ಬೂಡಿಯಾರ್ ಪುರುಷೋತ್ತಮ ರೈಯವರು ಬಡವರ ಪರವಾಗಿ ವಿಶೇಷ ಕಾಳಜಿ ವಹಿಸುತ್ತಿರುವುದು ಅಭಿನಂದನೀಯ ಎಂದರು.
ಪತ್ರಕರ್ತ ಯೂಸುಫ್ ರೆಂಜಲಾಡಿ, ಎಸ್ಡಿಎಂಸಿ ಸದಸ್ಯ ಸುರೇಶ್ ಮಾತನಾಡಿದರು. ವಿದ್ಯಾರ್ಥಿಗಳಾದ ಕೌಶಿಕ್ ಮತ್ತು ಸಿಂಚನ್ ಅನಿಸಿಕೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅದ್ರಾಮ ಮಾತನಾಡಿ ಬೂಡಿಯಾರ್ ಪುರುಷೋತ್ತಮ ರೈ ಅವರು ಪ್ರತೀ ವರ್ಷ ನಮ್ಮ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸುತ್ತಿದ್ದು ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಇಡ್ಯೊಟ್ಟು ಶಾಲಾ ಮುಖ್ಯ ಶಿಕ್ಷಕಿ ಪ್ರೇಮಾ ಸ್ವಾಗತಿಸಿ ಪ್ರಸ್ತಾವನೆಗೈದು ಬೂಡಿಯಾರ್ ಪುರುಷೋತ್ತಮ ರೈಯವರು ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹ ಪುಣ್ಯದ ಕಾರ್ಯವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಶಾಲೆಗೆ ಕೊಡುಗೆ ನೀಡಿದವರ ಪಟ್ಟಿ ವಾಚಿಸಿದ ಶಿಕ್ಷಕ ದೇವಪ್ಪ ಮಾತನಾಡಿ ಪುರುಷೋತ್ತಮ ರೈಯವರು ಪುಸ್ತಕ ನೀಡುವುದು ಯಾವಾಗ ಎಂದು ಮೊನ್ನೆಯಿಂದ ಹಲವರು ಕೇಳುತ್ತಿದ್ದಾರೆ, ಪುಸ್ತಕ ಕೊಟ್ಟ ಅವರ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ ಎಂದು ಹೇಳಿದರು.
ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಸುಂದರಿ, ಇಡ್ಯೊಟ್ಟು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್, ಶ್ರೀಪತಿ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಸಂಧ್ಯಾ ವಂದಿಸಿದರು. ಶಿಕ್ಷಕಿ ಆಶಾ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.
