ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪುತ್ತೂರು ಇದರ ಹಿಂದುಳಿದ ವರ್ಗಗಳ ಘಟಕದ ಪ್ರಥಮ ಸಭೆಯು ಜೂ.21ರಂದು ಎಪಿಎಂಸಿ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆಯಿತು.
ಹೊಸ ಯುವಕರನ್ನು ಸೇರಿಸಿ ಘಟಕ ಬಲೀಷ್ಠಗೊಳಿಸಬೇಕು-ಹೇಮನಾಥ ಶೆಟ್ಟಿ:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪಕ್ಷವು ಬಲೀಷ್ಠವಾಗಿರಲು ವಿವಿಧ ಘಟಕಗಳನ್ನಾಗಿ ಮಾಡಿ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದೆ. ಘಟಕಗಳಲ್ಲಿ ಹುದ್ದೆ, ಜವಾಬ್ದಾರಿ ಪಡೆದ ಬಳಿಕ ಯಾರೂ ನಿಷ್ಕ್ರಿಯವಾಗಿರಬಾರದು. ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಹಿಂದುಳಿದ ವರ್ಗಗಳ ಘಟಕದಲ್ಲಿ ಬಿಲ್ಲವ, ಗಾಣಿಗ, ಮಡಿವಾಳ, ಮಾಣಿಯಾಣಿ, ಕೊಂಕಣಿ ಸೇರಿದಂತೆ 17 ಪ್ರಮುಖ ಜಾತಿಗಳನ್ನು ಒಳಗೊಂಡಿರುವ ದೊಡ್ಡ ಘಟಕವಾಗಿದೆ. ಪಕ್ಷದ ಸಂಘಟನೆಗಾಗಿರುವ ಪ್ರಮುಖ ಘಟಕವಾಗಿದ್ದು ಈ ಘಟಕವು ಸಕ್ರಿಯ ಕೆಲಸ ಮಾಡಬೇಕು. ಘಟಕದ ಉದ್ದೇಶ ತಿಳಿಸಿ ಹೊಸ ಯುವಕರನ್ನು ಘಟಕಕ್ಕೆ ಸೇರಿಸಬೇಕು. ಶಾಸಕರ ಅಭಿವೃದ್ಧಿ ಕಾರ್ಯಗಳ ಜೊತೆಗೆ ಘಟಕಗಳು ಪಕ್ಷಕ್ಕೆ ಶಕ್ತಿ ನೀಡಬೇಕು. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಸಕ್ರೀಯವಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದ ಅವರು ಹಿಂದುಳಿದ ವರ್ಗಗಳ ಘಟಕಕ್ಕೆ ಎಲ್ಲಾ ಪದಾಧಿಕಾರಗಳ ಆಯ್ಕೆ ಮಾಡಿ ಪುತ್ತೂರಿನಲ್ಲಿ ಹಿಂದುಳಿದ ವರ್ಗದ ದೊಡ್ಡ ಸಮಾವೇಶ ಮಾಡಬೇಕು ಎಂದು ತಿಳಿಸಿದರು.
ಘಟಕ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಕ್ರೀಯವಾಗಿರಬೇಕು-ಕೃಷ್ಣಪ್ರಸಾದ್ ಆಳ್ವ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಮಾತನಾಡಿ, ಬ್ಲಾಕ್ ಕಾಂಗ್ರೆಸ್ನ ಆಡಳಿತ ಮಂಡಳಿ ಬದಲಾವಣೆಯಾಗುವಾಗ ಎಲ್ಲಾ ಘಟಕಗಳ ಪದಾಧಿಕಾರಿಗಳ ಬದಲಾವಣೆ ಸಾಮಾನ್ಯ. ಪ್ರಧಾನ ಕಾರ್ಯದರ್ಶಿಗಳು, ವಕ್ತಾರರು, ಉಪಾಧ್ಯಕ್ಷರು, ಸಂಘಟನ ಕಾರ್ಯದರ್ಶಿ, ಕಾರ್ಯದರ್ಶಿಗಳನ್ನು ಒಳಗೊಂಡ 81 ಮಂದಿಯ ಬ್ಲಾಕ್ ಕಾಂಗ್ರೆಸ್ನ ಆಡಳಿತ ಸಮಿತಿ ಸಿದ್ದವಾಗಿದೆ. ನನ್ನ ಅಧ್ಯಕ್ಷತೆಯ ಬಳಿಕ ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬ್ಲಾಕ್ ಕಾಂಗ್ರೆಸ್ನ ಕಾರ್ಯಚಟುವಟಿಗಳ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಲಾಕ್ನ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಗಳು, ವಲಯ ಅಧ್ಯಕ್ಷರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ನಗರವನ್ನು ಆರು ವಲಯಗಳನ್ನಾಗಿ ಮಾಡಿದೆ. ಬ್ಲಾಕ್ ಕಾಂಗ್ರೆಸ್ ಬಲೀಷ್ಠವಾಗಿರಲು ವಿವಿಧ ಘಟಕಗಳು ಮುಖ್ಯವಾಗಿದ್ದು 15 ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅದರ ಪದಾಧಿಕಾರಿಗಳ ಪಟ್ಟಿಯೂ ಸಿದ್ದವಾಗಿದೆ. ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷತೆ ಮೋನಪ್ಪ ಪೂಜಾರಿಯವರೇ ಸಮರ್ಥವಾಗಿದ್ದು ಅವರಿಗೆ ಘಟಕದ ಹೊಣೆ ವಹಿಸಲಾಗಿದೆ. ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಹಿಂದುಳಿದ ವರ್ಗಗಳ ಘಟಕ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬೃಹತ್ ಸಮಾವೇಶ ನಡೆಸಿ ಇತಿಹಾಸ ನಿರ್ಮಾಣ-ಮೋನಪ್ಪ ಪೂಜಾರಿ:
ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ ಮಾತನಾಡಿ, ಬ್ಲಾಕ್ ಕಾಂಗ್ರೆಸ್ಗೆ ಪೂರಕವಾಗಿ ಹಿಂದುಳಿದ ವರ್ಗಗಳ ಘಟಕಗಳು ಕೆಲಸ ಮಾಡಲಿದೆ. ಇದಕ್ಕಾಗಿ ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲಿಯೇ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಹೊಸ ಸಮಿತಿ ಮೂಲಕ ಹಿಂದುಳಿದ ವರ್ಗಗಳ ಘಟಕಕ್ಕೆ ಹೊಸ ಹೊಸ ಯುವಕರನ್ನು ಸೇರಿಸಿಕೊಳ್ಳುವ ಮೂಲಕ ಬಲೀಷ್ಠ ಸಂಘಟನೆಯನ್ನಾಗಿ ಮಾಡಲಾಗುವುದು. ಪುತ್ತೂರಿನಲ್ಲಿ ದೊಡ್ಡ ಹಿಂದುಳಿದ ವರ್ಗದ ದೊಡ್ಡ ಸಮಾವೇಶ ನಡೆಸಿ, ಇತಿಹಾಸ ನಿರ್ಮಿಸಲಾಗುವುದು. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸುವಂತೆ ವಿನಂತಿಸಿದರು.
ಪದಾಧಿಕಾರಿಗಳ ಆಯ್ಕೆ:
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ಪೂಜಾರಿ ಸುರುಳಿಮೂಲೆ, ತೇಜಸ್ ಪಡ್ಡಾಯೂರು, ಚಿತ್ರ, ಉಪಾಧ್ಯಕ್ಷರಾಗಿ ಕೇಶವ ಸುವರ್ಣ ಸಂಪ್ಯ, ಬೆಳಿಯಪ್ಪ ಪೂಜಾರಿ ರೋಟರಿಪುರ, ಚಂದ್ರಕಲಾ ಮುಕ್ವೆ, ಪರಮೇಶ್ವರ ಭಂಡಾರಿ, ಕೋಶಾಧಿಕಾರಿಯಾಗಿ ಭಾಸ್ಕರ ಕರ್ಕೇರಾ ನಿಡ್ಪಳ್ಳಿ, ಕಾರ್ಯದರ್ಶಿಗಳಾಗಿ ಆಶಾ ಶಾಂತಿಗೋಡು, ಸಂತೋಷ್ ಕುಲಾಲ್ ಕೌಡಿಚ್ಚಾರು ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ೨೦ ಜನರ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡುವುದಾಗಿ ತೀರ್ಮಾನಿಸಲಾಯಿತು.
ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಅರ್ಷದ್ ದರ್ಬೆ, ಶರೂನ್ ಸಿಕ್ವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ ಸ್ವಾಗತಿಸಿ, ವಂದಿಸಿದರು. ಪಕ್ಷದ ಪದಾಧಿಕಾರಿಗಳು, ವಲಯ, ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.