ಉಪ್ಪಿನಂಗಡಿ: ಓಮ್ನಿ ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ 34ನೇ ನೆಕ್ಕಿಲಾಡಿಯ ಬೊಳಂತಿಲದ ಎಂಆರ್ ಪಿ ಎಲ್ ಪೆಟ್ರೋಲ್ ಪಂಪಿನ ಎದುರುಗಡೆ ನಡೆದಿದೆ.

ನಿವೃತ್ತ ಸೈನಿಕ, ಪ್ರಸ್ತುತ ಕೆನರಾ ಬ್ಯಾಂಕ್ನ ಸಿಬ್ಬಂದಿಯಾಗಿರುವ 34 ನೆಕ್ಕಿಲಾಡಿ ಗ್ರಾಮದ ಚೀಮುಳ್ಳು ನಿವಾಸಿ ಜನಾರ್ದನ (59) ಗಾಯಗೊಂಡ ವ್ಯಕ್ತಿ. ಇವರು ಜೂ.20ರಂದು ಸಂಜೆ 6.30ಕ್ಕೆ ಕೆಎ 21. ಎಚ್ 6400 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಪುತ್ತೂರಿನಿಂದ ಉಪ್ಪಿನಂಗಡಿ ಮಾರ್ಗವಾಗಿ ಬರುತ್ತಿದ್ದ ಕೆಎ 19 ಎಂಇ 3057 ನೋಂದಣಿ ಸಂಖ್ಯೆಯ ಓಮ್ನಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಅಕ್ಬರ್ ಅಲಿ ಎಂಬವರ ಓಮ್ನಿ ಕಾರು ಬೈಕ್ ಗೆ ಢಿಕ್ಕಿಯಾಗಿದೆ.
ಆಟೋ ರಿಕ್ಷಾವೊಂದನ್ನು ಓವರ್ಟೇಕ್ ಮಾಡಲೆತ್ನಿಸಿದ ವೇಳೆ ಓಮ್ನಿ ಬೈಕ್ ಗೆ ಢಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರ ಜನಾರ್ದನ ಎಂಬವರು ಬೈಕ್ನಿಂದ ಎಸೆಯಲ್ಪಟ್ಟಿದ್ದು, ನೆಲಕ್ಕೆ ಬಿದ್ದು ಅವರ ಬಲಕಾಲು ಹಾಗೂ ಎಡಕಾಲಿಗೆ ತೀವ್ರ ತರದ ಗಾಯಗಳಾಗಿವೆ ಹಾಗೂ ಎಡ ಭುಜ ಹಾಗೂ ಸೊಂಟಕ್ಕೆ ಗಾಯವಾಗಿದೆ. ಗಾಯಾಳುವನ್ನು ಸಾರ್ವಜನಿಕರು ಸೇರಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.