ರಾಜ್ಯ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿ ವಿರೋಧಿಸಿ ಆರ್ಯಾಪು ಗ್ರಾ.ಪಂ ಮುಂಭಾಗದಲ್ಲಿ ಪ್ರತಿಭಟನೆ

0

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ 60 ಪರ್ಸೆಂಟ್ ಸರಕಾರ ಆಡಳಿತ-ಆರ್.ಸಿ ನಾರಾಯಣ

  • ಕಾಂಗ್ರೆಸ್‌ನಿಂದ ಬೆಲೆ ಏರಿಕೆ, ತೆರಿಗೆ ಏರಿಕೆಯ ಮೂಲಕ ಬಡ ವರ್ಗದವರ ಶೋಷಣೆ -ವಿರೂಪಾಕ್ಷ ಭಟ್

ಪುತ್ತೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಭ್ರಷ್ಟಾ ದುರಾಡಳಿತದ ವಿರುದ್ಧ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಜೂ.23ರಂದು ಆರ್ಯಾಪು ಗ್ರಾ.ಪಂ.ಮುಂಭಾಗ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಕಾಂಗ್ರೆಸ್‌ನ ಗ್ಯಾರಂಟಿಗಾಗಿ ಅನುದಾನ ಕಡಿತಗೊಳಿಸಿ, ಅಲ್ಪ ಸಂಖ್ಯಾತರ ಓಲೈಕೆ ಮಾಡುತ್ತಿದೆ. ಅಭಿವೃದ್ಧಿ ನಡೆಸದೆ ವಿವಿಧ ಇಲಾಖೆಗಳಲ್ಲಿ ಹಗರಣ ನಡೆಸಿ ಅದನ್ನು ಕಾಂಗ್ರೆಸ್ ಪಕ್ಷದ ಚುನಾವಣೆಗೆ ಬಳಕೆ ಮಾಡಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರದಲ್ಲಿ ವಸತಿ ಯೋಜನೆಗಳನ್ನು ತರಬೇಕಾದರು ಶಾಸಕರೂ ಹಣ ನೀಡುವಂತಹ ಪರಿಸ್ಥಿತಿ ಇದೆ. ಅಂದರೆ ರಾಜ್ಯದಲ್ಲಿ 60 ಪರ್ಸೆಂಟ್ ಸರಕಾರ ಆಡಳಿತ ನಡೆಸುತ್ತಿದೆ. ಹೀಗಿರುವಾಗ ಸದಾ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವ ಪುತ್ತೂರಿಗೆ ವಸತಿ ಯೋಜನೆಗಳನ್ನು ತರುವಾಗ ಎಷ್ಟು ಹಣ ನೀಡಲಾಗಿದೆ ಎನ್ನುವುದನ್ನು ಪುತ್ತೂರಿನ ಶಾಸಕರಲ್ಲಿ ಕೇಳಬೇಕಾಗಿದೆ. ಗ್ರಾಮ ಮಟ್ಟದಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಳ್ಳಲು ಕಾರ್ಮಿಕ ಇಲಾಖೆಯ ಮುಂದೆ ಸಾಲು ನಿಲ್ಲಬೇಕಾಗಿದೆ. ಇದು ಭ್ರಷ್ಟಾಚಾರಕ್ಕೆ ಎಡೆ ನೀಡುವ ವ್ಯವಸ್ಥೆಯಾಗಿದೆ. ಪಂಚಾಯತ್‌ನಲ್ಲಿ ನೀಡಲಾಗುತ್ತಿದ್ದ 9/11 ನ್ನು ಪೂಡಾಕ್ಕೆ ನೀಡುವ ಮೂಲಕ ಜನಸಾಮಾನ್ಯರನ್ನು ಅಲೆದಾಡುವಂತೆ ಮಾಡಿದ್ದಾರೆ.


ರಾಜ್ಯದಲ್ಲಿ ತುಘಲಕ್ ಸರಕಾರ ಆಡಳಿತದಲ್ಲಿದ್ದು, ಮೌಲ್ವಿಗಳ ಮಾತನ್ನು ಕೇಳುತ್ತಾ ಆಡಳಿತ ನಡೆಸುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 10ರಷ್ಟಿದ್ದ ಮೀಸಲಾತಿಯನ್ನು ಶೇ. 15ಕ್ಕೆ ಏರಿಸಿದ್ದು, ಮೌಲ್ವಿ ಆಡಳಿತ ಎನ್ನುವುದನ್ನು ನಿರೂಪಿಸಿದೆ. ಬಡವರ ಪರ ಆಡಳಿತ ನಡೆಸುವ ಬದಲು, ಬಡವರ ವಿರೋಧಿಯಾಗಿ ವರ್ತಿಸುತ್ತಿದೆ. ಬೆಲೆ ಏರಿಕೆ ಬಿಸಿಯ ಜೊತೆಗೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ. ಅನುದಾನಗಳಿಲ್ಲದೇ ಪಂಚಾಯತ್ ಸೊರಗಿದೆ. ವಿದ್ಯುತ್ ಬಿಲ್‌ನಲ್ಲೂ 36 ಪೈಸೆ ಪಿಂಚಣಿ ಹಣ ಸಂಗ್ರಹಿಸುತ್ತಿದ್ದು, ಬಡವರ ಜೇಬಿಗೆ ಸರಕಾರ ಕೈ ಹಾಕಿದೆ. ಆಂಟಿ ಕಮ್ಯುನಲ್ ವಿಂಗ್ ಜಾರಿ ತರುವ ಮೂಲಕ ಜಿಲ್ಲೆಗೆ ಕೆಟ್ಟ ಹೆಸರು ಬರುವಂತೆ ಕಾಂಗ್ರೆಸ್ ಸರಕಾರ ಮಾಡಿದೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ನಾಯಕರ ಮನೆಗಳಿಗೆ ರಾತ್ರೋರಾತ್ರಿ ನುಗ್ಗಿ ಅವರ ಫೋಟೋ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯ ನಿಲ್ಲಿಸದೇ ಹೋದರೆ, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಾತನಾಡಿ, ನಾವು ಪಂಚಾಯತ್ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಪಂಚಾಯತ್‌ನ ಅಭಿವೃದ್ಧಿಗೆ ಅನುದಾನ ನೀಡದೇ ತೆರಿಗೆ ಏರಿಕೆ ಮಾಡಿ ಬಡ ವರ್ಗದವರ ಶೋಷಣೆ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನಿರಂತರವಾಗಿ ದರ ಏರಿಕೆಯ ಮೂಲಕ ಬಡವರು, ಕೃಷಿಕರಿಗೆ ತೊಂದರೆ ಕೊಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ಸ್ಥಬ್ಧವಾಗಿದೆ. ಅನುದಾನ ನೀಡದೇ ಪಂಚಾಯತ್‌ಗಳನ್ನು ಶಕ್ತಿ ಹೀನವಾಗಿಸಿದೆ. ಜನ ವಿರೋಧಿ ನೀತಿಯ ವಿರುದ್ಧ ಸಾಂಕೇತಿಕವಾಗಿ ಪ್ರತಭಟನೆ ನಡೆಸುತ್ತಿದ್ದು ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.


ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಎಂ., ಸದಸ್ಯರಾದ ಯತೀಶ್ ದೇವಾ, ಹರೀಶ್ ನಾಯಕ್ ಬಳಕ್ಕ, ವಸಂತ ಕುಂಜೂರುಪಂಜ, ಚೇತನ್ ಗೌಡ ದೇವಸ್ಯ, ಶ್ರೀನಿವಾಸ್ ರೈ ವಳತಡ್ಕ, ಕಸ್ತೂರಿ ಕೂರೇಲು, ಸರಸ್ವತಿ ಮೇಗಿನಪಂಜ, ಬಿಜೆಪಿ 4ನೇ ವಾರ್ಡ್ ಬೂತ್ ಅಧ್ಯಕ್ಷ ಶಶಿಧರ್ ಗೌಡ ಮರಿಕೆ, 3ನೇ ವಾರ್ಡ್ ಅಧ್ಯಕ್ಷ ಸಂತೋಷ್ ಮೇರ್ಲ, ಕುರಿಯ ಶಕ್ತಿ ಕೇಂದ್ರ ಅಧ್ಯಕ್ಷ ಮೋಹನ್, ಪ್ರಮುಖರಾದ ಕಿಶೋರ್ ಮರಿಕೆ, ಧನುಷ್ ಹೊಸಮನೆ, ತಿಮ್ಮಪ್ಪ ಗೌಡ ಕೂರೇಲು, ವಿಕ್ರಂ ಜೈನ್, ಅಪ್ಪಿ ಪುಂಡಿಕಾಯಿ, ಅರುಣಾ ಸಂಪ್ಯ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಆರ್ಯಾಪು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಬಿ.ಎಸ್. ಸ್ವಾಗತಿಸಿ, ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಬಳಿಕ ಗ್ರಾ.ಪಂ ಪಿಡಿಓ ನಾಗೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.

LEAVE A REPLY

Please enter your comment!
Please enter your name here