ರಾಜ್ಯ ಕಾಂಗ್ರೆಸ್ ಸರಕಾರದಿಂದ ಶೂನ್ಯ ಅಭಿವೃದ್ಧಿ : ರತನ್ ರೈ ಕುಂಬ್ರ
ರಾಜ್ಯ ಸರಕಾರ ಗ್ಯಾರಂಟಿಗಳೊಂದಿಗೆ ಜನರನ್ನು ಮರುಳು ಮಾಡುತ್ತಿದೆ: ವಿಜಯ ಕುಮಾರ್ ರೈ
ಪುತ್ತೂರು: ರಾಜ್ಯ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಗ್ರಾಮಾಂತರ ಮಂಡಲದ ಕೆದಂಬಾಡಿ ಶಕ್ತಿ ಕೇಂದ್ರದ ವತಿಯಿಂದ ಕೆದಂಬಾಡಿ ಗ್ರಾಮ ಪಂಚಾಯತ್ನ ಎದುರು ಭಾಗದಲ್ಲಿ ಜೂ.23ರಂದು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ಹಾಗೂ ಕೆದಂಬಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ರತನ್ ರೈ ಕುಂಬ್ರರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಬಿಜೆಪಿ ಸರಕಾರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನೆ ಬಿಟ್ಟರೆ ಕಾಂಗ್ರೆಸ್ ಸರಕಾರದಿಂದ ಹೊಸದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಪಂಚಾಯತ್ ಗಳಿಗೆ ರಾಜ್ಯ ಸರ್ಕಾರದಿಂದ ಹೊಸದಾಗಿ ಅನುದಾನಗಳು ಬಂದಿಲ್ಲ, ಕೇಂದ್ರ ಸರಕಾರದ 15ನೇ ಹಣಕಾಸು ವತಿಯಿಂದ ಬಂದಿರುವ ಮೊತ್ತಗಳನ್ನು ಬಿಟ್ಟರೆ ಬೇರೆ ಯಾವುದೇ ಅನುದಾನಗಳು ಬಂದಿಲ್ಲ, ಪಂಚಾಯತಿನಲ್ಲಿ ದಿನಂಪ್ರತಿ ಕೆಲಸಗಳನ್ನು ನಿರ್ವಹಿಸಲು ಕೂಡ ಕಷ್ಟವಾಗುವ ರೀತಿಯಲ್ಲಿ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಹದಗೆಡಿಸಿದೆ ಎಂದ ಅವರು ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗಳು ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಸಂಯೋಜಕರಾಗಿ ಕೆದಂಬಾಡಿ ಗ್ರಾಮಕ್ಕೆ ನಿಯೋಜನೆಗೊಂಡಿದ್ದ ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ವಿಜಯಕುಮಾರ್ ರೈ ಕೊರಂಗ ಮಾತನಾಡಿ, ಕಾಂಗ್ರೆಸ್ ಸರಕಾರ ಬಂದ ನಂತರ ಜನರ ಜೀವನ ಮೂರಾಬಟ್ಟೆಯಾಗಿದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವ ಜೊತೆಗೆ ಅತ್ಯಂತ ಸರಳವಾಗಿದ್ದ ಎಲ್ಲಾ ಕಾನೂನು ಪ್ರಕ್ರಿಯೆಗಳು ನೀತಿ ನಿಯಮಗಳನ್ನು ಜಟಿಲ ಮಾಡುವ ಮೂಲಕ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದೆ, 94 ಸಿ, 9/11, ಕೆಂಪುಕಲ್ಲು, ಮರಳು, ಜಲ್ಲಿಯ ಕೃತಕ ಅಭಾವತೆಯನ್ನು ಸೃಷ್ಟಿಸಿ ಜನಸಾಮಾನ್ಯರಿಗೆ ಒಂದು ಮನೆಯನ್ನು ಕಟ್ಟದ ರೀತಿಯಲ್ಲಿ ನೀತಿ ನಿಯಮಗಳನ್ನು ಬದಲಾವಣೆ ಮಾಡಲು ಹೊರಟಿದೆ. ಈ ಹಿಂದಿನ ಬಿಜೆಪಿ ಸರಕಾರ ಇದ್ದಾಗ ಇದ್ದಂತಹ ಸರಳಿಕೃತ ನಿಯಮಗಳನ್ನು ಮತ್ತೆ ಜಾರಿಗೊಳಿಸಬೇಕು, ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ, ಪಿಂಚಣಿ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಪಿಂಚಣಿ ವ್ಯವಸ್ಥೆ ಯನ್ನು ಕೂಡ ಪರಿಷ್ಕರಣೆ ಮಾಡುವ ನೆಪದಲ್ಲಿ ಅವೆಲ್ಲವನ್ನು ರದ್ದು ಮಾಡುವ ಹುನ್ನಾರವನ್ನು ಮಾಡುತ್ತಿರುವ ಕಾಂಗ್ರೆಸ್ ಸರಕಾರ ಬರೀ ಗ್ಯಾರಂಟಿಯನ್ನು ಕೊಡುತ್ತಿದ್ದೇವೆ ಎಂದು ಜನರನ್ನು ಮರಳು ಮಾಡುತ್ತಿದೆ, ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಕೂಡ ಸಮರ್ಪಕವಾಗಿ ಜಾರಿಗೊಳಿಸದೆ ಜನರ ಜೀವವನ್ನು ಹಿಂಡುತ್ತಿದೆ ಎಂದು ಹೇಳಿದರು. ಕೆದಂಬಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಶರತ್ ಗುತ್ತು ಸ್ವಾಗತಿಸಿದರು. ಕೆದಂಬಾಡಿ ಗ್ರಾಮದ 185 ಬೂತ್ ನ ಅಧ್ಯಕ್ಷ ಮುಂಡಾಳಗುತ್ತು ಮೊಹನ್ ಆಳ್ವ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ನಾಯಕರಾದ ಕಡಮಜಲು ಸುಭಾಷ್ ರೈ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಪುತ್ತೂರು ಗ್ರಾಮಾಂತರ ಮಂಡಲ ರೈತ ಮೋರ್ಚಾದ ಕಾರ್ಯದರ್ಶಿ, ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಮಠ, ಪಂಚಾಯತ್ ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ರೇವತಿ ಬೊಳೋಡಿ, ಕೃಷ್ಣಕುಮಾರ್ ಇದ್ಯಪೆ, ಕೆದಂಬಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಜನಾರ್ಧನ ರೈ ಪಡ್ಡಂಬೈಲು, ಸೀತಾರಾಮ ಗೌಡ ಇದ್ಯಪೆ, ಕೆದಂಬಾಡಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ, ಮಾಜಿ ಪಂಚಾಯತ್ ಅಧ್ಯಕ್ಷೆ ಸುಮನ ಬೋಳೋಡಿ, 185 ಬೂತ್ ಕಾರ್ಯದರ್ಶಿ ಪದ್ಮನಾಭ ಗೌಡ ಮುಂಡಾಳ, ಪದಾಧಿಕಾರಿಗಳಾಗಿರುವ ಮೋಹನ ಪಾಟಾಳಿ, ದಿನಕರ ರೈ, 186 ಬೂತಿನ ಅಧ್ಯಕ್ಷ ನೇಮಿರಾಜ್ ರೈ ಕುಂಬ್ರ, ಮಾಜಿ ಪ್ರಧಾನ ಕಾರ್ಯದರ್ಶಿ ಚಂದ್ರ ನಲಿಕೆ, 187 ಬೂತ್ ನ ಪ್ರಧಾನ ಕಾರ್ಯದರ್ಶಿ ಸುಭಾಶ್ ರೈ ಮಿತ್ತೋಡಿ, ಬೂತಿನ ಮನ್ ಕಿ ಬಾತ್ ಪ್ರಮುಖ ಹರಿಶ್ ರೈ ಮಿತ್ತೋಡಿ, ಬೂತಿನ ಸದಸ್ಯರಾದ ಪದ್ಮನಾಭ ರೈ ಗುತ್ತು, ರವಿಕುಮಾರ್ ರೈ ಮಠ, 188 ಬೂತ್ ನ ಅಧ್ಯಕ್ಷ ಗಂಗಾಧರ ನಾಯ್ಕ ಮುಳಿಗದ್ದೆ, 188 ಬೂತ್ ನ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತ್ಯಾಗರಾಜ, ಬೂತ್ನ ಮನ್ ಕಿ ಬಾತ್ ಪ್ರಮುಖ ಮೋಹನ್ ತಿಂಗಳಾಡಿ, ಹರೀಶ್ ಮಾರುತಿಪುರ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು. ಶಕ್ತಿ ಕೇಂದ್ರದ ವತಿಯಿಂದ ಶಕ್ತಿಕೇಂದ್ರದ ಅಧ್ಯಕ್ಷ ಶರತ್ ಗುತ್ತುರವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ನೀಡಲಾಯಿತು.